ಮಂಗಳೂರು : ಸ್ಯಾಂಡಲ್‌ವುಡ್‌ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅತ್ಯುತ್ತಮ ಮನರಂಜನಾ ಚಿತ್ರ ಹಾಗೂ ಅತ್ಯುತ್ತಮ ನಟ ಪ್ರಶಸ್ತಿ ಹೀಗೆ ಎರಡು ಪ್ರಶಸ್ತಿಗಳು ಈ ಚಿತ್ರಕ್ಕೆ ಬಂದಿವೆ. ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿ ರಿಷಬ್‌ ಶೆಟ್ಟಿ ಅವರು ಮಂಗಳೂರಿಗೆ ಆಗಮಿಸಿದ್ದಾರೆ. ನಂತರ ಮಾತನಾಡಿದ ಅವರು, ನ್ಯಾಷನಲ್ ಅವಾರ್ಡ್ ನಮ್ಮ ಇಡೀ ತಂಡಕ್ಕೆ ಸಲ್ಲಬೇಕು. ಈ ಸಿನಿಮಾ ದೈವದ ಬಗ್ಗೆ ದೈವ ನರ್ತಕರ ಬಗ್ಗೆ ಅವರ ಸಮುದಾಯದ ಬಗ್ಗೆ ಇರುವ ಸಿನಿಮಾ. ನ್ಯಾಷನಲ್ ಅವಾರ್ಡ್ ಕ್ರೆಡಿಟ್ ದೈವ ನರ್ತಕ ಸಮುದಾಯಕ್ಕೆ ಸೇರಬೇಕು.

ದೈವದ ಆಶೀರ್ವಾದ ಇಲ್ಲ ಅಂದಿದ್ರೆ ಸಿನಿಮಾ ಈ ಮಟ್ಟಕ್ಕೆ ಹೋಗುತ್ತಾ ಇರಲಿಲ್ಲ. ದೈವದ ಆಶೀರ್ವಾದದಿಂದ ಸಿನಿಮಾ ಇಲ್ಲಿ ತನಕ ಬಂದಿದೆ. ದೈವಕ್ಕೆ ದೈವದ ಪಾದಕ್ಕೆ ಈ ಅವಾರ್ಡ್ ನ್ನ ಸಲ್ಲಿಸುತ್ತೇನೆ. ಚಿತ್ರ ಮಾಡುವಾಗ ಅವಾರ್ಡ್ ಬರುತ್ತೆ ಎಂದು ಅಂದುಕೊಂಡಿರಲಿಲ್ಲ,ಎಲ್ಲಾ ಜನರ ಪ್ರೀತಿಯಿಂದ ಸಾಧ್ಯವಾಗಿದೆ. ಕಾಂತಾರ ಶೂಟಿಂಗ್ ನಡೆಯುತ್ತಿದೆ ಆದಷ್ಟು ಬೇಗ ನಿರ್ಮಾಪಕರು ರಿಲೀಸ್ ಡೇಟ್ ಅನೌನ್ಸ್ ಮಾಡ್ತಾರೆ. ಕಾಂತಾರ ಒನ್ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಈ ಹಿಂದೆ ಕಾಂತಾರಕ್ಕೆ ಎಷ್ಟು ಹೆಮ್ಮೆ ಪಟ್ಟಿದ್ದೀರೋ ಅದಕ್ಕಿಂತ ಹೆಚ್ಚು ಹೆಮ್ಮೆ ಪಡುತ್ತೀರ ಎಂದರು.

ಕಾಂತಾರ ಸಿನಿಮಾ ಬಳಿಕ ದೈವಾರಾಧನೆಗೆ ಅಪಹಾಸ್ಯ ವಿಚಾರವಾಗಿ ಮಾತನಾಡಿದ ರಿಷಬ್, ಕಾಂತಾರ ಬರುವ ಮುಂಚೆ ಸುಮಾರು ಸಿನಿಮಾಗಳಲ್ಲಿ ದೈವರಾಧನೆ ಬಂದಿದೆ. ಚೋಮನ ದುಡಿಯಿಂದ ಹಿಡಿದು ಅನೇಕ ಪುಸ್ತಕಗಳಲ್ಲೂ ದೈವಾರಾಧನೆ ಬಂದಿದೆ. ನಾವು ಮೊದಲ ಬಾರಿಗೆ ಮಾಡಲಿಲ್ಲ. ಹಲವಾರು ಭಾಗಗಲ್ಲಿ ಪ್ರದರ್ಶನವನ್ನೂ ಮಾಡಿದ್ದಾರೆ. ಎಷ್ಟೊ ತುಳು ಸಿನಿಮಾಗಳು ದೈವಾರಧನೆ ಬಳಸಿ ಪ್ರಶಸ್ತಿ ಪಡೆದಿದೆ. ಸಿನಿಮಾ ಬಂದಾಗ ತುಂಬಾ ಪಾಪ್ಯುಲರ್ ಆದಾಗ ಮೂಲ ಸಂಸ್ಕೃತಿ ಬಗ್ಗೆ ಗೊತ್ತಿಲ್ಲದವರು ಈ ರೀತಿ ಮಾಡುತ್ತಾರೆ. ಬೇರೆ ಬೇರೆ ಸ್ಟೇಜ್ ಗಳಲ್ಲಿ ಕಾರ್ಯಕ್ರಮದಲ್ಲಿ ಹಾಕುವಾಗ ನೋವಾಗುತ್ತೆ.

ನಾನು ಗುತ್ತಿನ ಮನೆಯವನಾಗಿ ದೈವವನ್ನ ನಂಬಿಕೆ ಇಟ್ಟುಕೊಂಡು ಪೂಜೆ ಮಾಡಿಕೊಂಡು ಬರುವವನು. ನಾವು ಸಿನಿಮಾ ಮಾಡಬೇಕಾದರೆ ಆ ಸಮುದಾಯದವರ ಸಹಾಯ ಪಡೆದು ಮಾಡಿದ್ದೇವೆ. ಅಷ್ಟು ಶ್ರದ್ಧೆಯಿಂದ ಅದನ್ನ ಮಾಡಿಕೊಂಡು ಬಂದಿದ್ದೇವೆ. ನಮಗೆ ಕೇವಲ ಅದೊಂದು ಸಿನಿಮಾ ಅಲ್ಲ. ಸಿನಿಮಾದಲ್ಲಿ ಬಣ್ಣ ಹಚ್ಚುತ್ತೇವೆ ವೇಷ ಹಾಕುತ್ತೇವೆ ಅನ್ನೋ ರೀತಿಯಲ್ಲ. ನಿಜವಾಗಲೂ ಅದೊಂದು ದೈವದ ಸೇವೆ ಅನ್ನೋ ರೀತಿ ಮಾಡಿಕೊಂಡು ಬಂದಿದ್ದೇವೆ. ಹೊರಗಿನವರು ಇದನ್ನ ಅಪಹಾಸ್ಯ ಮಾಡಿದಾಗ ನಂಬಿದವರಿಗೆ ಬೇಜಾರಗೋದು ಸಹಜ. ನಾನು ಆರಂಭದಿಂದಲೂ ಜನರಲ್ಲಿ ಮನವಿ ಮಾಡಿಕೊಂಡು ಬಂದಿದ್ದೇನೆ. ನಾನು ಕಾಂತರವನ್ನ ಸಿನಿಮಾದ ರೀತಿಯಲ್ಲಿ ಮಾಡಿಲ್ಲ. ಹೊರಗಿನವರಿಗೆ ದೈವವನ್ನ ಸ್ಟೇಜ್ ಮೇಲೆ ಅನುಕರಣೆ ಮಾಡಬೇಡಿ ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಕಾಂತಾರ ಪ್ರಿಕ್ಯೂಲ್ ನಲ್ಲಿ ಜೂ. ಎನ್ ಟಿ ಆರ್, ಮೋಹನ್ ಲಾಲ್?: ಮೋಹನ್ ಲಾಲ್ ಎನ್ ಟಿ ಆರ್ ಎಲ್ಲಾ ರೂಮರ್ ಅದಕ್ಕೆ ಕಿವಿ ಕೊಡಬೇಡಿ. ಸದ್ಯಕ್ಕೆ ಸಿನಿಮಾದ ಟ್ರೈಲರ್ ರಿಲೀಸ್ ಮಾಡುವ ಪ್ಲಾನ್ ಇಲ್ಲ. ಶೂಟಿಂಗ್ ಮುಗಿಸುವ ಪ್ಲಾನ್‌ನಲ್ಲಿದ್ದೇವೆ. ಶೀಘ್ರದಲ್ಲೇ ದೊಡ್ಡ ಮಟ್ಟದಲ್ಲಿ ಡೇಟ್ ಅನೌನ್ಸ್ ಮೆಂಟ್ ಕಾರ್ಯಕ್ರಮ ಮಾಡುತ್ತೇವೆ ಎಂದು ರಿಷಬ್ ಶೆಟ್ಟಿ ಹೇಳಿದರು.

ಇಲ್ಲಿಯೇ ಕಥೆ ಶುರುವಾಗಿದ್ದು, ಪ್ರಶಸ್ತಿಯೂ ಇಲ್ಲಿಗೆ ಬಂದಿದೆ: ಪ್ರಶಸ್ತಿ ಪಡೆದು ನೇರವಾಗಿ ಮಂಗಳೂರಿಗೆ ಆಗಮಿಸಿದ ರಿಷಬ್ ಶೆಟ್ಟಿ. ಕಾಂತಾರ ಮಂಗಳೂರಿನಲ್ಲಿ ಶುರುವಾದ ಸಿನಿಮಾ, ಪ್ರಶಸ್ತಿ ತಗೊಂಡು ಇಲ್ಲಿಗೆ ಬರುವ ರೀತಿ ಆಗಿದೆ. ಇದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ಇಲ್ಲಿಯೇ ಕಥೆ ಶುರುವಾಗಿದ್ದು, ಪ್ರಶಸ್ತಿಯೂ ಇಲ್ಲಿಗೆ ಬಂದಿದೆ. ಕಾಂತಾರದ ಇಡೀ ತಂಡವಾಗಿ ನಾವು ಕುಂದಾಪುರದಲ್ಲಿ ನೆಲೆಸಿದ್ದೇವೆ. ಈ ಪ್ರಶಸ್ತಿಯನ್ನ ದೈವಕ್ಕೆ, ದೈವ ನರ್ತಕರಿಗೆ ಹಾಗೂ ಅಪ್ಪು ಸರ್ ಗೆ ಸಮರ್ಪಿಸುತ್ತೇನೆ. ಯಾವ ಮೂಲದಿಂದ ಬಂದಿದ್ದೇವೋ ಅದನ್ನ ಮರೆಯಬಾರದು. ಈ ಪ್ರಶಸ್ತಿಯನ್ನ ದೈವದ ಪಾದಕ್ಕೆ ಇಟ್ಟು ನನ್ನ ಕೆಲಸ ಮುಂದುವರೆಸುತ್ತೇನೆ ಎಂದರು ರಿಷಬ್.