ಬೆಳಗಾವಿ: ಬೆಳಗಾವಿ ಗ್ರಾಮೀಣ ಶಾಸಕಿಯಾಗಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮೂಲತಃ ಖಾನಾಪುರ ತಾಲೂಕಿನವರಾಗಿದ್ದು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತಾರೆ. ಖಾನಾಪುರ ತಾಲೂಕಿನಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ವಲಸೆ ಬಂದು ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಶಾಸಕರಾಗಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ್ ಜಾಧವ್ ತಿರುಗೇಟು ನೀಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಿಂದ ಬೆಳಗಾವಿಗೆ ವಲಸೆ ಬಂದಿದ್ದಾರೆ, ಅವರಿಗೆ ಬೆಳಗಾವಿಯಲ್ಲಿ ವಿಳಾಸವೇ ಇಲ್ಲ ಎಂದು ಸಚಿವೆ ಹೆಬ್ಬಾಳ್ಕರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ರಾಜಕಾರಣದಲ್ಲಿ ನೆಲೆಯೂರುವ ಉದ್ದೇಶದಿಂದಲೇ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಖಾನಾಪುರದಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಬಂದಿದ್ದಾರೆ. ಜನರು ಆಯ್ಕೆ ಮಾಡಿದ ನಂತರ ಇಲ್ಲಿಯೇ ಮನೆ ಮಾಡಿದ್ದಾರೆ. ಜಗದೀಶ್ ಶೆಟ್ಟರ್ ಅವರು ಮೋದಿ ಪರಿವಾರಕ್ಕೆ ಸೇರಿದವರು. ದೇಶಕ್ಕಾಗಿ ಕೆಲಸ ಮಾಡುವವರು ಎಲ್ಲೆಡೆಯೂ ದೇಶದ ಸೇವೆಯನ್ನೇ ಮಾಡುತ್ತಾರೆ. ಸರಿಸುಮಾರು ೩ ಲಕ್ಷ ಮತಗಳ ಅಂತರದಿಂದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಜಯಶಾಲಿ ಆಗಲಿದ್ದಾರೆ. ಆಮೇಲೆ ಅವರೂ ಸ್ವಂತ ಮನೆಯನ್ನು ಬೆಳಗಾವಿಯಲ್ಲೇ ಮಾಡುತ್ತಾರೆ ಎಂದು ಹೇಳಿದ್ದಾರೆ.
ಸಚಿವೆ ಹೆಬ್ಬಾಳ್ಕರ್ ಅವರು ಶೆಟ್ಟರ್ ಬಗೆಗೆ ಹೇಳಿಕೆ ಕೊಡುವ ಮೊದಲು ತಾವು ಕಾಂಗ್ರೆಸ್ ಮುಖಂಡರಿಗೆ ಟಿಕೆಟ್ ಕೊಡಿಸದೇ ಪುತ್ರನಿಗೆ ಟಿಕೆಟ್ ಕೊಡಿಸಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಕೊಡಬೇಕು. ಕಾಂಗ್ರೆಸ್‌ನಲ್ಲೂ ಅನೇಕ ಹಿರಿಯ ನಾಯಕರಿದ್ದಾರೆ. ಆದರೆ ಹೆಬ್ಬಾಳ್ಕರ್ ಪುತ್ರನಿಗೆ ಟಿಕೆಟ್ ಕೊಟ್ಟಿರುವುದು ಏಕೆಂದು ಕಾಂಗ್ರೆಸ್‌ನ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಹೆಬ್ಬಾಳ್ಕರ್ ಅವರಿಗೆ ಶೆಟ್ಟರ್ ಬಗೆಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.