ಬೆಳಗಾವಿ : ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಗೀತಾ ಶಿವರಾಜಕುಮಾರ್ ಅವರ ಬಗ್ಗೆ ನಟ ಶಿವರಾಜ್ ಕುಮಾರ್ ಮಹತ್ವದ ಮಾತು ಆಡಿದ್ದಾರೆ. ಕರಟಕ ದಮನಕ ಚಿತ್ರದ ಪ್ರಚಾರಕ್ಕೆ ಸೋಮವಾರ ಬೆಳಗಾವಿಗೆ ಆಗಮಿಸಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಪತ್ನಿ ಗೀತಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಅವರ ಗೆಲುವಿಗೆ ಬೆಂಬಲವಾಗಿ ನಿಲ್ಲುವುದು ನನ್ನ ಕರ್ತವ್ಯ. ಸಮಯ ಸಿಕ್ಕರೆ ಕಾಂಗ್ರೆಸ್ ಪಕ್ಷದ ಇತರ ಅಭ್ಯರ್ಥಿಗಳ ಪ್ರಚಾರಕ್ಕೆ ಹೋಗುವೆ. ಈ ವರ್ಷ ಚುನಾವಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ. ಬಿಸಿಲು ಹೆಚ್ಚಿರುವ ಕಾರಣ ನಟರನ್ನು ಕರೆತರಲ್ಲ. ನಾನು ಕರೆದರೆ ಅವರೆಲ್ಲ ಬರುತ್ತಾರೆ. ಆದರೆ ಯಾರಿಗೂ ತೊಂದರೆ ಕೊಡಲು ನನಗೆ ಇಷ್ಟವಿಲ್ಲ.

ಗೀತಾ ಅವರ ತವರು ಶಿವಮೊಗ್ಗ. ಅಲ್ಲಿ ಶಿಕ್ಷಣ ಪಡೆದಿದ್ದಾರೆ. ಆದ ಕಾರಣ ಶಿವಮೊಗ್ಗದಿಂದ ಸ್ಪರ್ಧಿಸುತ್ತಿದ್ದು ಮನೆಯನ್ನು ಮಾಡಲಾಗಿದೆ. ಈ ಬಾರಿ ಗೀತಾ ಗೆಲುವಿನ ವಿಶ್ವಾಸವಿದೆ. ಜನಪ್ರತಿನಿಧಿಯಾದರೆ ಜನಸೇವೆ ಮಾಡಲು ಶಕ್ತಿ ಸಿಗುತ್ತದೆ. ರಾಜಕಾರಣದ ಅಗತ್ಯವಿದೆ. ಈ ಸಲ ಗೀತಾರನ್ನು ಗೆಲ್ಲಿಸಲು ಯೋಜನೆ ರೂಪಿಸಲಾಗಿದೆ. ಕಳಸಾ ಬಂಡೂರಿ ಹೋರಾಟಕ್ಕೆ ನಟರು ಬರಬೇಕು. ಈ ಸಲ ಹೋರಾಟ ಆರಂಭವಾದರೆ ನಾನೇ ಖುದ್ದು ಎಲ್ಲ ನಟರನ್ನು ಕರೆದುಕೊಂಡು ಬರುವೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಕುಟುಂಬದವರನ್ನು ಒಂದಾಗಿಸಲು ನಾನು ಯಾರು ? ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಅವರ ಮನೆಯ ಅಳಿಯ. ಅವರೇ ಒಂದಾಗಬೇಕು. ನಾನೇನು ಮಾಡಲು ಸಾಧ್ಯವಿಲ್ಲ ತಿಳಿಸಿದರು.