ಬೆಳಗಾವಿ : ಪರಿಸರವನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಅದರ ಪ್ರಜ್ಞೆ ಕೊರತೆಯಿಂದ ಇಂದು ನಮ್ಮ ಪರಿಸರವನ್ನು ಸಾಕಷ್ಟು ನಾಶ ಮಾಡಿದ್ದೇವೆ. ಇಂದು ವಿಶ್ವವು ತಾಪಮಾನದಿಂದ ಸಾಕಷ್ಟು ತೊಂದರೆಗೆ ಈಡಾಗಿದೆ ಎಂದು ಲಿಂಗರಾಜ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಗಿರಿಜಾ ಹಿರೇಮಠ ಹೇಳಿದರು.

ಲಿಂಗರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ಪರಿಸರ ದಿನದ ಅಂಗವಾಗಿ ಸಸಿಗಳನ್ನು ನೆಟ್ಟು ಮಾತನಾಡಿದರು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಅರಿತು ಮರಗಳನ್ನು ಬೆಳೆಸುವ ಪೋಷಿಸುವ ಕೆಲಸವನ್ನು ಅವಿರತವಾಗಿ ಮಾಡಬೇಕು. ಈ ಕೆಲಸವು ಅನುದಿನವು ಜರುಗಬೇಕು. ಪ್ರತಿಯೊಬ್ಬರು ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ವಿಶ್ವವನ್ನು ತಾಪಮಾನದಿಂದ ಸಂರಕ್ಷಿಸಬೇಕಾಗಿದೆ ಎಂದರು.
ಭೂಗೋಳಶಾಸ್ತ್ರ ಪ್ರಾಧ್ಯಾಪಕ ಡಾ.ಮಲ್ಲಣ್ಣ ಮಾತನಾಡಿ ಪರಿಸರವನ್ನು ನಾವು ಎಲ್ಲರೂ ಸಂರಕ್ಷಿಸಬೇಕಾಗಿದೆ. ಇದು ನಮ್ಮ ಆದ್ಯ ಕರ್ತವ್ಯವೆನಿಸಿದೆ. ಈಗ ಪರಿಸರವನ್ನು ಉಳಿಸಿದರೆ ಮುಂದಿನ ಜನಾಂಗ ಉಳಿಯಲು ಸಾಧ್ಯ. ಇಲ್ಲದಿದ್ದರೆ ಮಾನವನ ಉಳಿವು ದುಸ್ತರ. ವಿದ್ಯಾರ್ಥಿಗಳು ಇದನ್ನು ಒಂದು ವ್ರತದಂತೆ ಪಾಲಿಸಬೇಕೆಂದು ಕರೆನೀಡಿದರು.

ಎನ್‍ಸಿಸಿ ಅಧಿಕಾರಿ ಡಾ.ಮಹೇಶ ಗುರನಗೌಡರ, ಎನ್‍ಎಸ್‍ಎಸ್ ಘಟಕ ಅಧಿಕಾರಿ ಶಶಿಕಾಂತ ಕೊಣ್ಣೂರ, ಕೆಎಲ್‍ಇ ನರ್ಸರಿ ವಿಭಾಗದ ಮುಖ್ಯಸ್ಥೆ ಸುಷ್ಮಾ ಪಾಟೀಲ, ಡಾ.ಚನ್ನಪ್ಪಗೋಳ, ಡಾ.ಅರ್ಜುನ ಕಾಂಬಳೆ, ಸಾರಿಕಾ ನಗರೆ, ಪ್ರೊ ವಿರೇಶ ಹಿರೇಮಠ ಮೊದಲಾದವರು ಉಪಸ್ಥಿರಿದ್ದರು. ವಿದ್ಯಾರ್ಥಿಗಳು ಕಾಲೇಜಿನ ಬಯಲು ಪ್ರದೇಶದಲ್ಲಿ ಸಸಿಗಳನ್ನು ನೆಟ್ಟರು.