ಮಂಗಳೂರು :
ಸೌದಿ ಅರೇಬಿಯಾದ ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿ, ಕರ್ನಾಟಕದ ಹೃದಯವಾಹಿನಿ ಸಂಸ್ಥೆಗಳ ಆಶ್ರಯದಲ್ಲಿ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಜನವರಿ 18 ಮತ್ತು 19 ರಂದು ದಮಾಮ್ ನ ಸಫ್ವಾ ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಮ್ಮೇಳನ ಸಮಿತಿಯ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್, ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂದಪಟ್ಟಂತೆ ಕವಿಗೋಷ್ಠಿ, ಹಾಸ್ಯಗೋಷ್ಠಿ, ಮಾಧ್ಯಮಗೋಷ್ಠಿ ಹಾಗೂ ಅನಿವಾಸಿ ಕನ್ನಡಿಗರ ಗೋಷ್ಠಿ ಜರಗಲಿವೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ, ಜಾನಪದ ನೃತ್ಯ, ನೃತ್ಯ ರೂಪ, ಯಕ್ಷಗಾನ, ಡೊಳ್ಳು ಕುಣಿತ, ದಫ್ ಮುಂತಾದ ಕಲೆಗಳು ಪ್ರದರ್ಶನಗೊಳ್ಳುವವು.

ಕರ್ನಾಟಕದ ಕಲೆ ಮತ್ತು ಸಂಸ್ಕೃತಿಗಳು ವಿದೇಶಿ ನೆಲವಾದ ದಮ್ಮಾಮ್ ನಲ್ಲಿ ಪ್ರತಿಬಿಂಬಿಸಲಿವೆ. ಈ ಹಿಂದೆ 2004, 2012 ಮತ್ತು 2019ರಲ್ಲಿ ಅಬುದಾಬಿ, 2005 ಮತ್ತು 2010ರಲ್ಲಿ ಸಿಂಗಾಪುರ, 2006 ಮತ್ತು 2011ರಲ್ಲಿ ಬಹ್ರೈನ್, 2007ರಲ್ಲಿ ಕುವೈಟ್, 2008ರಲ್ಲಿ ಖತರ್, 2009 ರಲ್ಲಿ ದುಬೈ ಮತ್ತು 2013 ರಲ್ಲಿ ಆಫ್ರಿಕಾದ ಕೀನ್ಯಾ, 2014 ರಲ್ಲಿ ಶಾರ್ಜಾ, 2017 ರಲ್ಲಿ ಆಸ್ಟ್ರೇಲಿಯಾ, 2015, 2018 ಕೆನಡಾ ಮತ್ತು 2021 ಮಸ್ಕತ್ ಅನುಕ್ರಮವಾಗಿ 16 ಸಮ್ಮೇಳನಗಳು ನಡೆದಿವೆ ಎಂದು ಅವರು ಹೇಳಿದರು.

ಸಮ್ಮೇಳನ ನಡೆಯಲಿರುವ ಸಭಾಂಗಣದ ಹೊರವಲಯದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗುವುದು. ಸೌದಿ ಅರೇಬಿಯಾದಲ್ಲಿ 40,000 ಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸುವಂತೆ ಪ್ರಚಾರ ನೀಡಲಾಗುವುದು. ಗಲ್ಫ್ ರಾಷ್ಟ್ರಗಳಾದ, ಬಹರೇನ್, ಅಬುಧಾಬಿ, ಕುವೈತ್, ಖತರ್, ಶಾರ್ಜಾ ಮತ್ತು ದುಬೈನಲ್ಲಿ ನೆಲೆಸಿರುವ ಕನ್ನಡಿಗರು ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸಲಾಗುವುದು.

ಜನವರಿ 18 ರಂದು ಮಧ್ಯಾಹ್ನ ಉದ್ಘಾಟನೆ ನೆರವೇರಿಸಲು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆಮಂತ್ರಿಸಲಾಗುವುದು ಎಂದು ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿ ಸೌದಿ ಅರೇಬಿಯಾ ಗೌರವಾಧ್ಯಕ್ಷ ಝಕರಿಯಾ ಬಜ್ಪೆ ತಿಳಿಸಿದರು.

ರಾಜ್ಯದ ವಿವಿಧ ಸಚಿವರು, ವಿಧಾನಸಭೆ ಅಧ್ಯಕ್ಷರು ಹಾಗೂ ಇತರ ಗಣ್ಯರನ್ನು ಆಹ್ವಾನಿಸಲಾಗಿದ್ದು, ಕರ್ನಾಟಕ ಮತ್ತು ಭಾರತದ ಇತರ ಭಾಗಗಳಿಂದ ಸುಮಾರು 100 ಕ್ಕೂ ಹೆಚ್ಚು ಸದಸ್ಯರ ಸಾಂಸ್ಕೃತಿಕ ನಿಯೋಗ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದೆ. ವಿವಿಧ ದೇಶಗಳ ಕನ್ನಡ ಸಂಘಗಳ ಪದಾಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಲಿರುವರು ಎಂದರು.

ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯನ್ನು ಜನವರಿ ಪ್ರಥಮ ವಾರದಲ್ಲಿ ನಡೆಯಲಿದೆ. ಹಿರಿಯ ಅರ್ಹ ಸಾಹಿತಿಗಳ ಹೆಸರು ಸೂಚಿಸಲಿಚ್ಚಿಸುವವರು ಜನವರಿ 2 ರೊಳಗೆ hrudayavahinirediffmail.com ಈ ಮೈಲ್ ಗೆ ಮಾಹಿತಿ ಕಳುಹಿಸಬಹುದು ಎಂದು ಅವರು ತಿಳಿಸಿದರು.
ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಬಜಾಲ್, ಪ್ರವೀಣ್ ಪೀಟರ್ ಆರಾನ್ಹ, ಅಯಾಝ್ ಕೈಕಂಬ, ಅಶ್ರಫ್ ನೌಶಾದ್ ಕೊಲ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.