ಬೆಳಗಾವಿ: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ನಂತ್ರ ಭೀಕರ ಬರಗಾಲ ಉಂಟಾಗಿದೆ. ಜನರು ಬಿಸಿಲ ಧಗೆಗೆ ತತ್ತರಿಸಿ ಹೋಗಿದ್ದಾರೆ. ಈ ಬರಗಾಲದ ನಡುವೆಯೂ ಸವದತ್ತಿ ಯಲ್ಲಮ್ಮನ ದೇಗುಲದಲ್ಲಿ ಕಾಣಿಕೆ ಸಂಗ್ರಹಕ್ಕೇನು ಕಡಿಮೆಯಾಗಿಲ್ಲ. ಬರೋಬ್ಬರಿ 11 ಕೋಟಿ ಕಾಣಿಗೆ ಹುಂಡಿಯಲ್ಲಿ ಸಂಗ್ರಹವಾಗಿದೆ.
ಉತ್ತರ ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳದಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮದೇವಿ ದೇವಾಲಯವೂ ಒಂದಾಗಿದೆ. ರಾಜ್ಯ ಸೇರಿದಂತೆ, ಹೊರ ರಾಜ್ಯಗಳಿಂದಲೂ ಸಾವಿರಾರೂ ಭಕ್ತರು ಸವದತ್ತಿ ಯಲ್ಲಮ್ಮ ದೇವಿ ದೇವಾಲಯಕ್ಕೆ ಆಗಮಿಸಿ, ದರ್ಶನ ಪಡೆಯುತ್ತಾರೆ. ಈ ಹಿನ್ನಲೆಯಲ್ಲಿ ಬರಗಾಲದ ಮಧ್ಯೆಯೂ ಸವದತ್ತಿ ಯಲ್ಲಮ್ಮ ದೇವಿ ದೇವಾಲಯದ ಹುಂಡಿಯಲ್ಲಿ 2023-24ನೇ ಸಾಲಿನಲ್ಲಿ ಬರೋಬ್ಬರಿ 11.23 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಈ ಮೂಲಕ ಭಕ್ತರು ನಗದು, ಚಿನ್ನ, ಬೆಳ್ಳಿಯ ಆಭರಣಗಳನ್ನು ಹಾಕಿ ಭಕ್ತಿಯನ್ನು ಮೆರೆದಿದ್ದಾರೆ.
ಅಂದಹಾಗೇ 2022-23ನೇ ಸಾಲಿನಲ್ಲಿ 8.01 ಕೋಟಿ ರೂ ನಗದು, 66.28 ಲಕ್ಷ ಮೌಲ್ಯದ ಚಿನ್ನ, 15.43 ಲಕ್ಷ ರೂ ಮೌಲ್ಯದ ಬೆಳ್ಳಿಯ ಆಭರಣ ಸೇರಿದಂತೆ 8.83 ಕೋಟಿ ಹುಂಡಿಯಲ್ಲಿ ಕಾಣಿಕೆ ಸಂಗ್ರಹವಾಗಿತ್ತು. ಅದೇ ಈ ಬಾರಿ 11.23 ಕೋಟಿಯಾಗಿದ್ದು, ಕಳೆದ ಬಾರಿಗಿಂತ 2.4 ಕೋಟಿ ಹೆಚ್ಚಿನ ಆದಾಯ ಸವದತ್ತಿ ಯಲ್ಲಮ್ಮ ದೇವಿ ದೇವಾಲಯದಲ್ಲಿ ಸಂಗ್ರಹವಾಗಿದೆ.