ನವದೆಹಲಿ: ಮಿತಿ ಮೀರಿದ ತಾಪಮಾನ ಹಾಗೂ ಬಿಸಿ ಗಾಳಿಯಿಂದಾಗಿ ಜನರು ಬವಣೆಪಡುತ್ತಿರುವಾಗಲೇ
ಕರ್ನಾಟಕದಲ್ಲಿ ಮೇ 3ರವರೆಗೂ ಉಷ್ಣಮಾರುತ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಬಿಸಿಯ ವಾತಾವರಣದಿಂದ ಸದ್ಯಕ್ಕೆ ಮುಕ್ತಿಯಂತೂ ಇಲ್ಲ ಎಂದೂ ತಿಳಿಸಿದೆ.

ದೇಶದ ಹಲವಾರು ರಾಜ್ಯಗಳಲ್ಲಿ ಉಷ್ಣ ಮಾರುತ ಕಂಡುಬಂದಿದೆ. ಈಗಾಗಲೇ ಹಲವು ಕಡೆಗಳಲ್ಲಿ ತಾಪಮಾನ 45.6 ಡಿಗ್ರಿ ಸೆಲ್ಸಿಯಸ್‌ಗೆ ಮುಟ್ಟಿದೆ. ಪೂರ್ವ ಹಾಗೂ ದಕ್ಷಿಣದ ರಾಜ್ಯಗಳಲ್ಲಿ ಇನ್ನೂ ಐದು ದಿನಗಳ ಉಷ್ಣ ಮಾರುತ ಕಂಡುಬರಲಿದೆ. ಕರ್ನಾಟಕದ ಜತೆಗೆ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಲ್ಲೂ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾನುವಾರ ದೇಶದ 155 ಹವಾಮಾನ ಇಲಾಖೆಯ ಕೇಂದ್ರಗಳಲ್ಲಿ 40 ಡಿಗ್ರಿಗಿಂತ ಅಧಿಕ ತಾಪ ವರದಿಯಾಗಿದೆ. ಪೂರ್ವ, ದಕ್ಷಿಣ ಹಾಗೂ ಉತ್ತರ ಭಾರತದಲ್ಲಿ ಉಷ್ಣ ಮಾರುತದ ಅಬ್ಬರ ಹೆಚ್ಚಾಗಿದೆ. ಆಂಧ್ರದ ರಾಯಲಸೀಮೆ ಪ್ರಾಂತ್ಯದ ನಂದ್ಯಾಲದಲ್ಲಿ 45.6 ಡಿಗ್ರಿ ತಾಪ ದಾಖಲಾಗಿದೆ. ಕರ್ನಾಟಕದ ಒಳನಾಡಿನ ಬಹುತೇಕ ಕಡೆಗಳಲ್ಲಿ ಬಿಸಿ ಹಾಗೂ ಆರ್ಧರ ವಾತಾವರಣ ಕಂಡುಬಂದಿದೆ. ರಾಯಚೂರಿನಲ್ಲಿ 43 ಹಾಗೂ ಕಲಬುರಗಿಯಲ್ಲಿ 42.9 ಡಿಗ್ರಿ ಸೆಲ್ಸಿಯಸ್ ಕಂಡುಬಂದಿದೆ ಎಂದು ತಿಳಿಸಿದೆ.