ನವದೆಹಲಿ: ದೆಹಲಿಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅರವಿಂದ​ ಕೇಜ್ರಿವಾಲ್​ ಮುಖ್ಯಮಂತ್ರಿ ಕುರ್ಚಿಯನ್ನು ಆಪ್​ ನಾಯಕಿ ಅತಿಶಿ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಮರ್ಲೆನಾ ಸಿಂಗ್ (43) ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಮಂಗಳವಾರ ಬೆಳಿಗ್ಗೆ ಅರವಿಂದ ಕೇಜ್ರಿವಾಲ್ ಅವರ ದೆಹಲಿ ನಿವಾಸದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.

ನೂತನ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿರುವ ಅತಿಶಿ ಬಗ್ಗೆ ಪಕ್ಷದ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಆರೋಪ ಮಾಡಿದ್ದು, “ಇಂದು ದೆಹಲಿಗೆ ಬಹಳ ದುಃಖಕರ ದಿನ. ಯಾವ ಮಹಿಳೆಯ ಕುಟುಂಬದವರು ಉಗ್ರ ಅಫ್ಜಲ್ ಗುರು ಮರಣದಂಡನೆಗೆ ಒಳಗಾಗದಂತೆ ದೀರ್ಘಾವಧಿ ಹೋರಾಟ ಮಾಡಿರುವ ಕುಟುಂಬದವರನ್ನು ದೆಹಲಿಯ ಮುಖ್ಯಮಂತ್ರಿಯಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಅಫ್ವಲ್ ಗುರುಗೆ ಕ್ಷಮಾದಾನ ನೀಡುವಂತೆ ಅತಿಶಿ ತಂದೆ-ತಾಯಿ ರಾಷ್ಟ್ರಪತಿಗಳಿಗೆ ಪತ್ರವನ್ನು ಬರೆದಿದ್ದರು. ಅವರ ಪ್ರಕಾರ, ಅಫ್ಜಲ್ ಗುರು ನಿರಪರಾಧಿ ಮತ್ತು ಅವರು ರಾಜಕೀಯ ಪಿತೂರಿಯ ಕಾರಣದಿಂದ ಸಿಕ್ಕಿಬಿದ್ದಿದ್ದಾರೆ ಎಂದು ಮಲಿವಾಲ್‌ ಹೇಳಿದ್ದಾರೆ. ಅತಿಶಿ ಮರ್ಲೆನಾ ‘ಡಮ್ಮಿ ಮುಖ್ಯಮಂತ್ರಿ’ ಎಂದು ಟೀಕೆ ಮಾಡಿರುವ ಅವರು ಅತಿಶಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿರುವ ವಿಚಾರ ದೇಶದ ಭದ್ರತೆಗೆ ಸಂಬಂಧಿಸಿದೆ. ದೆಹಲಿಯನ್ನು ದೇವರು ಕಾಪಾಡಲಿ” ಎಂದು ಟ್ವೀಟ್ ಮಾಡಿದ್ದಾರೆ.
ತನ್ನ ಎಕ್ಸ್ ಖಾತೆಯಲ್ಲಿ ಪೋಸ್‌ ಹಂಚಿಕೊಂಡಿರುವ ಸ್ವಾತಿ ಮಲಿವಾಲ್ ಅತಿಶಿಯನ್ನು ದೆಹಲಿಯ ಮುಖ್ಯಮಂತ್ರಿಯನ್ನಾಗಿ ಮಾಡಿರುವುದರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಅಫ್ಜಲ್ ಗುರುವನ್ನು ಗಲ್ಲಿಗೇರಿಸುವುದನ್ನು ತಡೆಯುವಂತೆ ಒತ್ತಾಯಿಸಿ ಅತಿಶಿ ತಂದೆ ವಿಜಯ ಸಿಂಗ್ ಮತ್ತು ತಾಯಿ ತ್ರಿಪ್ತಾ ವಾಹಿ ಸಹಿ ಮಾಡಿದ ಕ್ಷಮಾದಾನ ಅರ್ಜಿಯನ್ನು ಸಹ ಹಂಚಿಕೊಂಡಿದ್ದಾರೆ.

ಸ್ವಾತಿ ಮಲಿವಾಲ್​ ರಾಜೀನಾಮೆಗೆ ಎಎಪಿ ಆಗ್ರಹ
ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಅವರ ಆಯ್ಕೆ ಮಾಡಿರುವುದನ್ನು ಟೀಕಿಸಿರುವ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಎಂದು ಅವರದ್ದೇ ಪಕ್ಷವಾದ ಎಎಪಿ ಪಕ್ಷ ಆಗ್ರಹಿಸಿದೆ. ಸ್ವಾತಿ ಮಲಿವಾಲ್ ಟೀಕೆಯಿಂದ ಅಸಮಾಧಾನಗೊಂಡಿರುವ ಎಎಪಿ ಪಕ್ಷವು ‘ಸ್ವಾತಿ ಮಲಿವಾಲ್‌ ಎಎಪಿ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಆದರೆ ಅವರು ಪ್ರತಿಕ್ರಿಯೆ ನೀಡುವಾಗ ಬಿಜೆಪಿ ನೀಡುವ ಹೇಳಿಕೆಯಂತೆಯೇ ಇರುತ್ತದೆ. ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಮತ್ತು ಬಿಜೆಪಿ ಮೂಲಕ ರಾಜ್ಯಸಭೆಗೆ ಆಯ್ಕೆಯಾಗಲು ದಾರಿ ಕಂಡುಕೊಳ್ಳಬೇಕು’ ಎಂದು ಎಎಪಿ ಆಗ್ರಹಿಸಿದೆ.
“ಸ್ವಾತಿ ಮಾಲಿವಾಲ್ ರಾಜ್ಯಸಭಾ ಟಿಕೆಟ್ ಅನ್ನು ಎಎಪಿಯಿಂದ ಪಡೆದಿದ್ದಾರೆ. ಆದರೆ ಪ್ರತಿಕ್ರಿಯಿಸಲು ಬಿಜೆಪಿಯಿಂದ ಸ್ಕ್ರಿಪ್ಟ್ ತೆಗೆದುಕೊಳ್ಳುತ್ತಾರೆ. ಅವರಿಗೆ ಸ್ವಲ್ಪ ಮರ್ಯಾದೆ ಇದ್ದರೆ, ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಮತ್ತು ಬಿಜೆಪಿ ಟಿಕೆಟಿನಲ್ಲಿ ರಾಜ್ಯಸಭೆಯ ಮಾರ್ಗವನ್ನು ಆರಿಸಿಕೊಳ್ಳಬೇಕು” ಎಂದು ದಿಲೀಪ ಪಾಂಡೆ ಹೇಳಿದ್ದಾರೆ.

ಕೇಜ್ರಿವಾಲ್ ಅವರ ಸಹಾಯಕ ವಿಭವಕುಮಾರ ಅವರು ಮುಖ್ಯಮಂತ್ರಿಯವರ ಮನೆಯಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ವಾತಿ ಮಲಿವಾಲ್‌ ಆರೋಪ ಮಾಡಿದ ನಂತರ ಅವರ ಮತ್ತು ಎಎಪಿಯ ನಡುವೆ ಬಿರುಕು ಹೆಚ್ಚಾಗಿದೆ. ಆರೋಪದಿಂದ ಹುಟ್ಟಿಕೊಂಡಿತು.