ಬೆಳಗಾವಿ : ಕಡಲೆ ರಾಶಿ ಮಾಡುವಾಗ ಮಷಿನ್‌ಗೆ ಸಿಲುಕಿ ಮಹಿಳೆ ಮೃತಪಟ್ಟ ಘಟನೆ ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ರವಿವಾರ ನಡೆದಿದೆ. ದೇವಲಾಪುರ ಗ್ರಾಮದ

ಮಹಾದೇವಿ ಮಲ್ಲಪ್ಪ ಗಣಾಚಾರಿ (45) ಮೃತ ರೈತ ಮಹಿಳೆ. ಜಮೀನಿನಲ್ಲಿ ಕಡಲೆ ರಾಶಿ ಮಾಡುವಾಗ ಮಷಿನ್ ಒಳಗಡೆ ಸೀರೆ ಸಿಲುಕಿ ಈ ದುರ್ಘಟನೆ ನಡೆದಿದೆ. ಮಷಿನ್ ಒಳಗೆ ಮಹಿಳೆ ಸಿಲುಕುತ್ತಿದ್ದಂತೆ
ಕಂಡ ಕುಟುಂಬಸ್ಥರು ಮಷಿನ್ ಬಂದ್‌ ಮಾಡಿ ಮಹಿಳೆಯನ್ನು ಹೊರ ತೆಗೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆ ಉಸಿರೆಳೆದಿದ್ದಾರೆ. ಮಹಿಳೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಮಹಿಳೆಗೆ ಪತಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಪ್ರಕರಣ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.