ಮಂಗಳೂರು : ನೇತ್ರಾವತಿ ನದಿಗೆ ಹಾರಿ ಪ್ರಾಣ ಬಿಡಲು ಯತ್ನಿಸಿದ ಮಹಿಳೆಯೊಬ್ಬರನ್ನು ಸಾಕುನಾಯಿ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಉಪ್ಪಿನಂಗಡಿ ಸಮೀಪದ ಪಿಲಿಗೂಡಿನ 36 ವರ್ಷದ ಮಹಿಳೆಯೊಬ್ಬರು ಪತಿಯೊಂದಿಗೆ ಜಗಳವಾಡಿದ ನಂತರ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯ ತಡೆಗೋಡೆ ಏರಿ ನದಿಗೆ ಹಾರಲು ಮುಂದಾದಾಗ ಅವರನ್ನೇ ಹಿಂಬಾಲಿಸಿಕೊಂಡು ಬಂದಿದ್ದ ಅವರ ಸಾಕು ನಾಯಿ ಈ ಮಹಿಳೆಯ ಜೀವ ಉಳಿಸಿದೆ ಎಂದು ಹೇಳಲಾಗಿದೆ.

ಪಿಲಿಗೋಡು ನಿವಾಸಿಯಾಗಿದ್ದ ಮಹಿಳೆಯೋರ್ವರು ಪತಿಯೊಂದಿಗೆ ಜಗಳವಾಡಿದ್ದಾರೆ. ಇಬ್ಬರ ನಡವಿನ ಮನಸ್ತಾಪದಿಂದ ಜಗಳವಾಗಿದೆ ಎನ್ನಲಾಗಿದೆ. ಇದೇ ಬೇಸರದಲ್ಲಿ ಮನೆ ಬಿಟ್ಟು ಹೊರಟ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ 4 ಕಿಮೀ ನಡೆದುಕೊಂಡು ಬಂದು ನೇತ್ರಾವತಿ ಸೇತುವೆ ಬಳಿ ಬಂದಿದ್ದಾರೆ.

ಈ ವೇಳೆ ಮನೆಯ ಸಾಕು ನಾಯಿ ಅವಳನ್ನು ಹಿಂಬಾಲಿಸಿದೆ. ಮಹಿಳೆ ಇನ್ನೇನು ಸೇತುವೆಯ ಮೇಲಿನ ತಡೆ ಗೋಡೆಯನ್ನು ಹತ್ತಿ ನೇತ್ರಾವತಿ ನದಿಗೆ ಜಿಗಿಯಬೇಕು ಎನ್ನುವಷ್ಟರಲ್ಲಿ, ಶ್ವಾನವು ಮಹಿಳೆಯ ಚೂಡಿದಾರವನ್ನು ಕಚ್ಚಿ ಹಿಡಿದು ಎಳೆದಿದೆ. ಅಲ್ಲದೆ ಜೋರಾಗಿ ಬೊಗಳಿ ಜನರ ಗಮನ ಸೆಳೆಯಲು ಯತ್ನಿಸಿದೆ. ನಾಯಿ ಜೋರಾಗಿ ಬೊಗಳುವುದನ್ನು ಗಮನಿಸಿದ ದ್ವಿಚಕ್ರ ವಾಹನ ಸವಾರರಿಬ್ಬರು ಅಲ್ಲಿಗೆ ಬಂದಿದ್ದಾರೆ. ನಂತರ ಅವರು ಮಹಿಳೆ ನದಿಗೆ ಹಾರುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ಮೂಲದ ಈ ಮಹಿಳೆ ತನ್ನ ಸಹೋದ್ಯೋಗಿಯಾಗಿದ್ದ ಪಿಲಿಗೋಡಿನ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಊರಿನಲ್ಲಿಯೇ ವರ್ಷದ ಹಿಂದೆ ಮನೆ ಕಟ್ಟಿಕೊಂಡು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಪತಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಇಬ್ಬರ ನಡುವೆ ಮನಸ್ತಾಪದಿಂದ ಆಗಾಗ ಜಗಳ ಆಗುತ್ತಿತ್ತು ಎನ್ನಲಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದರು. ಅದೃಷ್ಟವಶಾತ್ ಅವರ ಸಾಕು ನಾಯಿ ತನ್ನ ಒಡತಿಯ ಜೀವ ಉಳಿಸಿದೆ.
ಸದ್ಯಕ್ಕೆ ಮಹಿಳೆ ಸ್ನೇಹಿತೆಯೋರ್ವಳ ಮನೆಯಲ್ಲಿದ್ದಾರೆ ಎಂದು ಹೇಳಲಾಗಿದೆ.