ಕುಮಟಾ :
ಕುಮಟಾದ ಹೆಡ್‌ಬಂದರ ಬಳಿ ಸಮುದ್ರಕ್ಕೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ.
ಮೃತರನ್ನು ಕುಮಟಾ ತಾಲೂಕಿನ ಸಾಂತಗಲ್ ನಿವಾಸಿ ನಿವೇದಿತಾ ನಾಗರಾಜ ಭಂಡಾರಿ (46) ಎಂದು ಗುರುತಿಸಲಾಗಿದೆ. ಸಾಂತಗಲ್ ನಿವಾಸಿಯಾಗಿದ್ದ ಮಹಿಳೆ ನಿವೇದಿತಾ ಊರಿನಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು ಎನ್ನಲಾಗಿದೆ. ಶನಿವಾರ ದ್ವಿಚಕ್ರ ವಾಹನದಲ್ಲಿ ತನ್ನ ಇಬ್ಬರು ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದಿದ್ದ ಅವರು ಮಕ್ಕಳನ್ನು ನಗರದ ಪಿಕ್ ಅಪ್ ಬಸ್ ನಿಲ್ದಾಣದಲ್ಲಿ ಬಿಟ್ಟು ಗೆಳತಿಯ ಮನೆಗೆ ಹೋಗಿ ಬರುವುದಾಗಿ ಹೇಳಿ ಹೆಡ್ ಬಂದರಿಗೆ ತೆರಳಿ ಬಂಡೆ ಮೇಲಿಂದ ಸಮುದ್ರಕ್ಕೆ ಹಾರಿದ್ದಾರೆ, ಕೋಸ್ಟಲ್‌ ಗಾರ್ಡ್ ಪೊಲೀಸರು ಈಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಅಲೆಯ ರಭಸಕ್ಕೆ ಅದು ಸಾಧ್ಯವಾಗಲಿಲ್ಲ.

ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ತನ್ನ ಆಭರಣಗಳು, ಮಾಂಗಲ್ಯ, ಕಾಲುಂಗುರ ಹಾಗೂ ಮೊಬೈಲ್‌ನ್ನು ದ್ವಿಚಕ್ರ ವಾಹನದ ಬಾಕ್ಸಿನಲ್ಲಿ ಇಟ್ಟಿದ್ದಾರೆ. ಆದರೆ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಆದರೆ, ಜೀವನದಲ್ಲಿ ಜಿಗುಪ್ಸೆಗೊಂಡಿದ್ದಾರೆ ಎನ್ನಲಾಗಿದೆ. ತನ್ನ ಮಕ್ಕಳನ್ನು ಕರೆದುಕೊಂಡು ಆತ್ಮಹತ್ಯೆಗೆ ಮುಂದಾದರೂ ಕೊನೆಗೆ ಮುಗ್ದ ಮಕ್ಕಳನ್ನು ಬಲಿಕೊಡಲು ಮನಸ್ಸಾಗದೇ ತಾನೊಬ್ಬಳೇ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕುಮಟಾ ಪಿ ಎಸ್ ಐ ನವೀನ ನಾಯ್ಕ್ ತಿಳಿಸಿದ್ದಾರೆ