ಬಿಡದಿ :
ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರ ಸಹಕಾರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ರಾಮನಗರದ ಎಲ್ಲರೂ ಬೆಂಗಳೂರಿಗರು. ಆಡಳಿತ ದೃಷ್ಟಿಯಿಂದ ನಮ್ಮದು ಪ್ರತ್ಯೇಕ ಜಿಲ್ಲೆಯಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಭಾನುವಾರ ಬಿಡದಿಯಲ್ಲಿ ನಡೆದ ಗೃಹಲಕ್ಷ್ಮಿಯರ ಸಮಾವೇಶದಲ್ಲಿ ಮಾತನಾಡಿದರು.

ಬಿಡದಿವರೆಗೂ ಮೆಟ್ರೋ ತರಲು ಸಿದ್ಧತೆ ಮಾಡಲಾಗಿದೆ. ಬಿಡದಿ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂದು ರಚನೆ ಮಾಡಲಾಗಿದೆ. ಆ ಮೂಲಕ ಬಿಡದಿ ಅಭಿವೃದ್ಧಿಗೆ ಬದ್ಧವಾಗಿದ್ದೇವೆ.
ನೀವು, ನಿಮ್ಮ ಅಕ್ಕಪಕ್ಕದ ಮನೆಯವರು ಹಾಗೂ ಸ್ನೇಹಿತರಿಗೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಡಿ.ಕೆ. ಸುರೇಶ್ ಅವರಿಗೆ ಮತ ಹಾಕಬೇಕು ಎಂದು ಅವರು ಮನವಿ ಮಾಡಿದರು.

ನಾರಿ ಶಕ್ತಿ ದೇಶದ ಶಕ್ತಿ. ನಾವು ಭೂಮಿಯನ್ನು ತಾಯಿ ಎಂದು ಕರೆಯುತ್ತೇವೆ. ಯಾವುದೇ ಹಳ್ಳಿಗೆ ಹೋದರೂ ಅಲ್ಲಿ ಗ್ರಾಮ ದೇವತೆ ಇರುತ್ತಾಳೆ. ನಮಗೆ ಆಮಂತ್ರಣ ನೀಡುವಾಗ ಆಮಂತ್ರಣ ಪತ್ರದಲ್ಲಿ ಮೊದಲು ಶ್ರೀಮತಿ ಎಂದು ಹಾಕಿರುತ್ತಾರೆ. ಇದು ನಮ್ಮ ಸಂಸ್ಕೃತಿ. ಈ ದೇಶದಲ್ಲಿ ಹೆಣ್ಣಿಗೆ ಗೌರವ ನೀಡುವ ಸಂಸ್ಕೃತಿ ಇದೆ.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಅದರಂತೆ ನಾವು ಅನೇಕ ಕಾರ್ಯಕ್ರಮ ರೂಪಿಸಿದ್ದೇವೆ. ನಮ್ಮ ನಾಡಧ್ವಜ ಕೆಂಪು, ಹಳದಿ ಬಣ್ಣದಿಂದ ಕೂಡಿದೆ. ಅಂದರೆ ಹರುಷಿನ ಮತ್ತು ಕುಂಕುಮದ ಸಂಕೇತ. ಇದು ಸೌಭಾಗ್ಯದ ಸಂಕೇತ. ಮಹಿಳೆಯರು ನಮ್ಮ ರಾಜ್ಯದ ಸೌಭಾಗ್ಯ ಎಂದು ನಮ್ಮ ಸರ್ಕಾರ ಈ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದೆ ಎಂದು ಹೇಳಿದರು.

ರಾಜ್ಯದ ಜನರ ಮನೆ ಬೆಳಗಿಸಲು ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಆರ್ಥಿಕವಾಗಿ ಶಕ್ತಿ ತುಂಬಲು ನಾವು ಈ ಯೋಜನೆ ನೀಡಿದ್ದೇವೆ.

ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು.
ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು.
ಇದನ್ನು ನೋಡಿದ ಕಮಲ ಉದುರಿ ಹೋಯಿತು.
ತೆನೆಯೊತ್ತ ಮಹಿಳೆ ತೆನೆ ಬಿಸಾಕಿ ಹೋದಳು.
ಕರ್ನಾಟಕ ಪ್ರಬುದ್ಧವಾಯಿತು.
ಕರ್ನಾಟಕ ಸಮೃದ್ಧವಾಯಿತು.

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ನಾನು ಚುನಾವಣೆ ಸಂದರ್ಭದಲ್ಲಿ ಹೇಳುತ್ತಿದ್ದೆ.

ನಿಮ್ಮ ಮನೆಯಲ್ಲಿ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಸಿಗುತ್ತಿದೆ. ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ನೀಡಲಾಗುತ್ತಿದೆ. ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಭತ್ಯೆ ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಲ್ಲಿ 5 ಕೆ.ಜಿ ಅಕ್ಕಿ ಉಳಿದ 5 ಕೆ.ಜಿ ಅಕ್ಕಿಯ ಹಣ ನೀಡಲಾಗುತ್ತಿದೆ ಎಂದು ಹೇಳಿದರು.

ನಮ್ಮ ಯೋಜನೆಗಳಿಂದ ದೇವಾಲಯಗಳಲ್ಲಿ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಮಹಿಳೆಯರು ಸರ್ಕಾರ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಹೆಸರಲ್ಲಿ ಪೂಜೆ ಮಾಡಿಸುತ್ತಿದ್ದಾರೆ. ದೇವಾಲಯದ ಹುಂಡಿಗಳು ತುಂಬುತ್ತಿವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಬಿಜೆಪಿ ಸರ್ಕಾರ ನಮ್ಮ ಯೋಜನೆ ಬಗ್ಗೆ ಅಪಪ್ರಚಾರ ಮಾಡಿದವು. ನಮ್ಮ ಯೋಜನೆಗಳು ಅತ್ತೆ, ಸೊಸೆಯರ ಮಧ್ಯೆ ತಂದು ಹಾಕಲಾಗುತ್ತಿದೆ ಎಂದರು. ನಿಮ್ಮ ಮನೆಯಲ್ಲಿ ಈ ವಿಚಾರವಾಗಿ ಜಗಳ ಆಗಿದೆಯೇ ಇಲ್ಲ. ನಯಾಪೈಸೆ ಲಂಚ ನೀಡದೆ ಯೋಜನೆಯ ಲಾಭ ಪಡೆದಿದ್ದೀರಾ ಎಂದು ಪ್ರಶ್ನಿಸಿದರು.

ಈ ಸರ್ಕಾರ ಇನ್ನು ನಾಲ್ಕು ವರ್ಷ ಹಾಗೂ ಮುಂದಿನ ಐದು ವರ್ಷಗಳ ಅವಧಿ ಅಂದರೆ ಒಟ್ಟು ಒಂಬತ್ತು ವರ್ಷ ನಿಮ್ಮ ಸೇವೆ ಮಾಡಲಿದೆ. ನಿಮಗೆ ತೊಂದರೆ ಆಗದಂತೆ ನಾವು ಯೋಜನೆ ಜಾರಿ ಮಾಡುತ್ತಿದ್ದೇವೆ.

ನಿಮ್ಮ ಸಂಸದ ಸುರೇಶ್ ಅವರನ್ನು ಸೋಲಿಸಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ಇಷ್ಟು ದಿನ ಚನ್ನಪಟ್ಟಣದಲ್ಲಿ ಬಡಿದಾಡುತ್ತಿದ್ದ ಯೋಗೇಶ್ವರ್ ಹಾಗೂ ಕುಮಾರಸ್ವಾಮಿ ಈಗ ಪರಸ್ಪರ ಆಲಿಂಗನ ಮಾಡಿಕೊಳ್ಳುತ್ತಿದ್ದಾರೆ.

ಮೊನ್ನೆ ನಡೆದ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರು. ಫಲಿತಾಂಶ ಏನಾಯ್ತು? ಇಬ್ಬರೂ ಸೇರಿದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪುಟ್ಟಣ್ಣ ಗೆದ್ದರು.

ಮಾಜಿ ಸಚಿವ ಅರಗ ಜ್ಞಾನೇಂದ್ರ ನಮ್ಮ ಯೋಜನೆಗಳನ್ನು 420 ಗ್ಯಾರಂಟಿ ಎಂದು ಹೇಳಿದ್ದಾನೆ. ನಾನು ಅರ್ಧ ಜ್ಞಾನೇಂದ್ರ, ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಒಂದು ಸವಾಲು ಹಾಕುತ್ತೇನೆ. ನಮ್ಮದು 420 ಗ್ಯಾರಂಟಿ ಯೋಜನೆಯಾದರೆ ನಿಮ್ಮ ಕಾರ್ಯಕರ್ತರಿಗೆ ಈ ಯೋಜನೆ ಪ್ರಯೋಜನ ಪಡೆಯಬಾರದು ಎಂದು ಕರೆ ನೀಡಿ.

ನಾನು ಈ ಕ್ಷೇತ್ರದಲ್ಲಿ ಸಮೀಕ್ಷೆ ಮಾಡಿಸಿದ್ದೇನೆ. ಜೆಡಿಎಸ್ ಗೆ ಮತ ಹಾಕುತ್ತಿದ್ದವರು ಕೂಡ ಈ ಬಾರಿ ಡಿ.ಕೆ. ಸುರೇಶ್ ಹಾಗೂ ಕಾಂಗ್ರೆಸ್ ಗುರುತಿಗೆ ಮತ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಸಾಮಾನ್ಯ ಕುಟುಂಬಗಳ ರಕ್ಷಣೆ ಮಾಡುತ್ತಿದೆ. ನೀವು 136 ಸೀಟುಗಳನ್ನು ಕೊಟ್ಟು ಸುಭದ್ರ ಸರ್ಕಾರವನ್ನು ನಮಗೆ ಕೊಟ್ಟಿದ್ದೀರಿ ಎಂದು ಹೇಳಿದರು.