ಪ್ರಕೃತಿ ಹಾಗೂ ಈ ನೆಲದ ಪಾರಂಪರಿಕ ಪವಾಡಗಳು ಒಮ್ಮೊಮ್ಮೆ ನಮ್ಮನ್ನು ವಿಸ್ಮಯ ಗೊಳಿಸುತ್ತದೆ. ಸುತ್ತಲೂ ಉಪ್ಪುನೀರಿನಿಂದಲೇ ಅವೃತ್ತವಾದ ಈ ನೇತ್ರಾಣಿ ದ್ವೀಪದಲ್ಲಿ ಸಿಹಿ ನೀರು ಇರುವ ಬಾವಿ ಕೂಡ ಇದೆ ಎನ್ನುವುದು ಕಣ್ಣಾರೆ ಕಾಣುವ ಅದ್ಬುತ ವಿಸ್ಮಯ. ಇಲ್ಲಿನ ಸ್ಕೂಬಾ ಡೈವಿಂಗ್ ಎಲ್ಲರ ಆಕರ್ಷಣೆ ಕೂಡ.ಇದಕ್ಕಾಗಿ ರಾಜ್ಯ ಹೊರರಾಜ್ಯದಿಂದಲೂ ಪ್ರವಾಸಿಗರು ಬರುತ್ತಿರುತ್ತಾರೆ.

ಕರ್ನಾಟಕದ ಪ್ರಸಿದ್ಧ ದ್ವೀಪವಾದ ಭಟ್ಕಳದ (ನಮ್ಮೂರಿನ ) ನೇತ್ರಾಣಿ ದ್ವೀಪಕ್ಕೆ ಮಕ್ಕಳು ಮತ್ತು ಮಡದಿಯ ಜೊತೆಗೂಡಿ ಅವರ ಅಸೆಯಂತೆ ಬೇಟಿನೀಡುವ ಅವಕಾಶ( ಪೆಬ್ರವರಿ ೨೪) ಒದಗಿ ಬಂತು.

ಇಂದು ನಸುಕಿನಲ್ಲೆ ಎದ್ದು,ನಿತ್ಯ ಕರ್ಮ ಮುಗಿಸಿ ಅಳ್ವೇಕೋಡಿ ಬಂದರು ತಲುಪಿದ್ದು ಬೆಳಿಗ್ಗೆ ೬ ಗಂಟೆಗೆ. ಅದಾಗಲೇ ನೂರಾರು ಜನರು ನಮಗಿಂತ ಮುಂಚೆಯೇ ಅಲ್ಲಿ ಸಿದ್ದವಾಗಿದ್ದು ಕಂಡು ಅಚ್ಚರಿ ಜೊತೆ ಖುಷಿಕೂಡ. ಪಯಣಕ್ಕೂ ಮೊದಲು ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದರ್ಶನ ಮಾಡಿ ಮನದಲ್ಲೇ ತಾಯಿಯ ಅನುಗ್ರಹ ಪ್ರಾರ್ಥನೆ ಮಾಡಿಕೊಂಡೆವು. ಶುದ್ಧ ಸಂಕಲ್ಪಕ್ಕೆ ತಾಯಿ ಎಂದಿಗೂ ಒಲಿಯದೇ ಇರಲಾರಳು.ಇದು ನನ್ನ ಅನುಭವ ಕೂಡ.
ಅಂತೆಯೇ ಆಗಲೇ ಸಾವಿರಕ್ಕೂ ಮಿಗಿಲೆಂಬಂತೆ ಜನಗಳು ಸಿದ್ದಗೊಂಡ ಬೋಟನ್ನು ಹತ್ತುತ್ತಿದ್ದರು. ಸಂಕಲ್ಪದಂತೆ ಆಗ ನಾವು ಹತ್ತಿದ್ದು ಶ್ರೀ ಮತ್ಸ್ಯಶ್ರೀ ಬೋಟ್.

ಈ ಸಾಹಸ ಪಯಣದಲ್ಲಿ ಅತ್ಯಂತ ಕಿರಿಯ ಪಯಣಿಗ ನನ್ನ ಮಗ ಉತ್ಥಾನ. ಅವನ ಪಾಲಿಗೆ ನೇತ್ರಾಣಿ ಎಂಬುದು ಪುನಿತಣ್ಣನ (ಪುನಿತ್ ರಾಜಕುಮಾರ) ದ್ವೀಪ. ಹೌದು ಸದಾ ಪುನಿತಣ್ಣ ಅವನ ಹಾಡು ಡಾನ್ಸ್ ಮಾತು ದಿನಕ್ಕೆ ಒಮ್ಮೆಯಾದರೂ. ಅಂತೆಯೆ ಅವರು ನೇತ್ರಾಣಿ ಭೇಟಿ ನೀಡಿದ ಗಂಧದ ಗುಡಿ ಸಿನೆಮಾ ನೋಡಿದಾಗಿನಿಂದ ನೇತ್ರಾಣಿ ಕೂಡ ಪುನಿತಣ್ಣನ ದ್ವೀಪವಾಯಿತು.ಈ ಅಣ್ಣನ ದ್ವೀಪ ನೊಡುವ ಬಯಕೆಯೂ ಹೆಚ್ವುತ್ತಾ ಹೋಯಿತು.
ಆಸೆಪಟ್ಟ ಮಗ ಅದರೆ ಆತಂಕವಾಗಿದ್ದು ನನಗೆ( ಪಪ್ಪನಿಗೆ). ಆದರೆ ಈ ಆತಂಕ ದೂರ ಮಾಡಿ ಸಮುದ್ರ ಪಯಣದ ಉದ್ದಕ್ಕೂ ಬೋಟ್ ಹತ್ತುವಾಗ ಇಳಿಯುವಾಗ ದೊಡ್ಡ ಬೋಟ್ ನಿಂದ ಚಿಕ್ಕ ಡಿಂಗಿಯಲ್ಲಿ ಇಳಿಯುವಾಗ, ಕಡಿದಾದ ಆತಂಕದ ದ್ವೀಪ ಬೆಟ್ಟ ದಾರಿ ಸ್ವಲ್ಪ ಎಚ್ಚರ ತಪ್ಪಿದರೂ ಸಮುದ್ರಕ್ಕೆ ಬಿದ್ದೆವು ಎನ್ನುವ ಸಣ್ಣ ಭಯ. ಈ ಬೆಟ್ಟವನ್ನು ಹತ್ತುವಾಗ ಇಳಿಯುವಾಗ ಶ್ರೀರಕ್ಷೆಯಾದರು ವಿಠ್ಠಲಣ್ಣ ( ವಿಠ್ಠಲ ಮೊಗೇರ ಅಳ್ವೇಕೋಡಿ). ಈ ಪಯಣದಲ್ಲಿ ಎಲ್ಲರಿಗೂ ಎಲ್ಲರೂ ಸಹಾಯಮಾಡುತ್ತಾರೆ ಇದು ಈ ಕ್ಷೇತ್ರದ ದ್ವೀಪದ ಆರಾಧ್ಯ ದ್ವೈವ ನೇತ್ರಾಣಿ ಜಟಗೇಶ್ವರ ಮಹಿಮೆ ಎನ್ನುತ್ತಾರೆ ಆಸ್ತಿಕ ಭಕ್ತರು.


ಅಳ್ವೇಕೋಡಿ ಬಂದರಿನಿಂದ ಸುಮಾರು ತ್ತೊಂಬತ್ತು ನಿಮಿಷ ಸಮುದ್ರ ಪಯಣ ಬೇಕಾಯ್ತು ಕನಸಿನ ದ್ವೀಪ ತಲುಪಲು. ಸಮುದ್ರದಲ್ಲಿ ಹತ್ತು ನಿಮಿಷ ಕೃಮಿಸಿ ಸುತ್ತಲೂ ಕಣ್ಣಡಿಸಿದ ಉತ್ಥಾನ ನಿನಾದ ಕೇಳಿದ್ದು ಎಲ್ಲಿ ಮರೆಯಾದವು ಪಪ್ಪ ಊರು ಮನೆಗಳು ದೇವಸ್ಥಾನ. ಹೌದು ನಿಜ ಎಲ್ಲಿ ನೋಡಿದರೂ ಜನರಿಲ್ಲದ ಬರಿ ನೀರಿನ ಊರು ಮಾತ್ರ. ನೀರೇ ನೀರು. ನನ್ನನ್ನೇ ಗೊಂದಲಕ್ಕಿಳಿಸುವ ಅನೇಕ ಪ್ರಶ್ನೇಗಳು ಉತ್ಥಾನನ ಬಾಯಲ್ಲಿ. ಈ ರಾಸಿ ರಾಶಿ ನೀರು ಸುರಿದವರು ಯಾರು? ಎಲ್ಕಿಂದ ಬಂತು ಇಷ್ಟು ನೀರು. ಒಂದೊ ಎರಡೊ ನಡುನಡುವೆ ಪುನಿತಣ್ಣನ ನೆನಪು.
ಬೋಟ್ ನಲ್ಲಿ ಬರುವ ವೈರಲೆಸ್ ಮಾತುಗಳು.ಇನ್ನೊಂದು ಬೋಟ್ ನಲ್ಲಿ ಇರುವವರ ಜೊತೆ ಸಾಮೂಹಿಕ ಸಂವಹನ ಸಂಭಾಷಣೆ ಒಂದು ರೀತಿ ರೇಡಿಯೋ ವನ್ನು ನೆನಪಿಸುತ್ತಿತ್ತು. ಅಂತು ಸುಮಾರು ೧೦-೧೨ ಬೋಟ್ ಗಳಿಂದ ಬಂದವರನ್ನು ಸಣ್ಣ ದೋಣಿಗೆ ಇಳಿಸುವ ಕಡಲ ಮಕ್ಕಳ ಕಾಳಜಿ ದೈವದ ಅಪ್ಪುಗೆಯಂತಿತ್ತು.


ಹರಸಾಹಸ ಪಟ್ಟು ದಾರಿ ಹುಡುಕುತ್ತಾ ದಾರಿ ಮಾಡಿಕೊಳ್ಳುತ್ತಾ ಮುಂದಿನವರ ಹಿಂದೆ ಹಿಂದೆಯೇ ನಡೆಯುತ್ತಾ ನೇತ್ರಾಣಿ ದ್ವೀಪದ ಬೆಟ್ಟದ ತುದಿಗೆ ತಲುಪಿದ ನಮಗೆ ಕಂಡದ್ದು ಇಲ್ಲಿನ ಪರಮೋಚ್ಚ ಶಕ್ತಿ ಹಾಗೂ ಕಡಲಮಕ್ಕಳ ಒಡಲು ತುಂಬುವ ಕಾಯುವ ಅರಾಧ್ಯ ದೈವ ನೇತ್ರಾಣಿ ಜಟಗೇಶ್ವರ ಹಾಗೂ ಪರಿವಾರ ದೇವರುಗಳು. ಪ್ರತಿವರ್ಷಕ್ಕೊಮ್ಮೆ ಈ ದೇವರಿಗೆ ಪೂಜೆ ಹರಕೆ ಸಲ್ಲಿಸುವುದು ನೂರಾರು ವರ್ಷದಿಂದ ನಡೆದುಕೊಂಡ ಬಂದ ಮರೆಯಲಾಗದ ಸಂಪ್ರದಾಯ ಸಂಸ್ಕಾರ. ಒಂದು ವಿಶೇಷ ಎಂದರೆ ಇಲ್ಲಿನ ದೇವರಿಗೆ ಕುರಿ ಕೋಳಿಗಳನ್ನು ಬಲಿ ಕೊಡದೆ ದೇವರ ಹೆಸರಲ್ಲಿ ಅಲ್ಲಿ ಬಿಟ್ಟು ಬರುವ ಜಗ ಒಪ್ಪುವ ಆಚರಣೆಯೂ ಇದೆ.
ಎಲ್ಲ ಬೋಟುಗಳಿಂದ ತಂದಂತಹ ಕುರಿ ಕೋಳಿಗಳನ್ನು ಅರ್ಚರು ದೇವರಿಗೆ ಪೂಜೆ ಮಾಡಿದ ನಂತರ ಬೆಟ್ಟದಲ್ಲಿ ಹಾರಿಸಿ ಬಿಡಲಾಯಿತು.


ಅಂತೂ ಎರಡು ಗಂಟೆಗಳ ಪೂಜಾ ಕೈಂಕರ್ಯದ ನಂತರ ಮತ್ತೆ ವಾಪಸ್ ಪಯಣ. ಹತ್ತುವಾಗ ಇರುವ ಅತಂಕಕ್ಕಿಂತ ಇಳಿಯುವಾಗ ಇನ್ನೂ ಹೆಚ್ಚೆ ಅನ್ನುವಂತಿತ್ತು. ಈ ಮರುಪಯಣದಲ್ಲಿ ಅತ್ಯಂತ ಮನಕಲಕ್ಕಿದ್ದ ಸನ್ನಿವೇಶ ಎಂದರೆ ಜೊತೆಗೆ ಬಂದಂತಹ ಹಾಗೂ ಅಲ್ಲಿಯೇ ಮೊದಲು ಇದ್ದ ಕುರಿಕೋಳಿಗಳು ಬೆಟ್ಟ ಇಳಿದು ಅತ್ಯಂತ ಕೆಳಗಡೆ ಬರುವವರೆಗೂ ನಮ್ಮಲ್ಲಿಯೇ ಒಬ್ಬರಂತೆ ಜೊತೆಜೊತೆ ಕೂಗುತ್ತಾ ಬರುವಾಗ ಕೊನೆಗೂ ಎಲ್ಲರೂ ಅವುಗಳನ್ನು ಅಲ್ಲಿಯೇ ಬಿಟ್ಟು ಬೋಟ್ ಹತ್ತುವಾಗ ಅವುಗಳ ಮುಖದಲ್ಲಿ ಕಾಣುವ ಆಸರೆಯ ದಯನೀಯ ಕಣ್ಗಳು ಮಾತ್ರ ಮನಸ್ಸನ್ನು ಆರ್ಧ್ರಗೊಳಿಸಿತು ಕಣ್ಣಂಚಲಿ ಹನಿಮೂಡಿಸಿತು.
ಹಸಿವು ಹಸಿವು ಎನ್ನುತ್ತಲೇ ಬೋಟ್ ಹತ್ತಿದ ನಮಗೆ ಅಲ್ಲಿ ಕಾದಿತ್ತು ರುಚಿ ರುಚಿಯಾದ ಪಾಯಸದ ಊಟ. ಹೌದು ಬೋಟಿನವರಿಂದ ರುಚಿಯಾದ ಊಟದ ಸಿದ್ದವಾಗಿತ್ತು.ಪ್ರತಿಯೊಬ್ಬರು ಸಾಕೊ ಬೇಕೊವೆನ್ನುವಷ್ಟು ರುಚಿಯಾದ ಊಟ. ಊಟ ಮುಗಿಸಿದ ಅರ್ಧಗಂಟೆಯಲ್ಲಿ ಮತ್ತೆ ಟೀ ಎಲ್ಲರಿಗೂ. ಮನೆಮಂದಿಯಂತೆ ಎಲ್ಲರಿಗೂ ಉಣಬಡಿಸಿದ ಈ ಆತ್ಮೀಯತೆಯನ್ನು ಮರೆಯಲೂ ಸಾಧ್ಯವೇ. ಅಂತೂ ಪಯಣದಲ್ಲಿ ದಾರಿ ತೋರಿದ ಸಹಕರಿಸಿದ ಹಸಿವೆಂದಾಗ ಊಟ ಬಡಿಸಿದ ಎಲ್ಲರನ್ನೂ ಕೈ ಮುಗಿದು ನಮಸ್ಕರಿಸುವುದು ಒಂದೇ ನಮ್ಮ ಕೃತಜ್ಞತೆಯಾಗಿತ್ತು.
ಯಾಕೊ ಗೊತ್ತಿಲ್ಲ ಮತ್ತೆ ಬೈಕ್ ಏರಿ ಮನೆಕಡೆ ಹೊರಟ ನನ್ನ ಮನದಲ್ಲಿ ನೆನಪಾಗಿದ್ದು ಡಿ.ವಿ.ಜಿಯವರ ಈ ಸಾಲುಗಳು
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ,
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ.

✒️  ಉಮೇಶ ಮುಂಡಳ್ಳಿ
9945840552