ಬೆಂಗಳೂರು :
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕರುನಾಡ ಚುನಾವಣಾ ಪ್ರಚಾರಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಅವರು ಏ.2 ರಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಮತಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ನಡೆಸಲಿದ್ದಾರೆ.
ಸಂಜೆ 6 ಕ್ಕೆ ಚನ್ನಪಟ್ಟಣದಲ್ಲಿ ರೋಡ್‌ ಶೋ ಇರಲಿದೆ. ಚುನಾವಣಾ ಪ್ರಚಾರಕ್ಕೆ ಇದು ಹೆಚ್ಚಿನ ವೇಗ ನೀಡಲಿದೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದರು. ಅಮಿತ್ ಶಾ ಅವರು 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ದೇಶ ಒಂದು ಎಂಬ ಸಂದೇಶ ನೀಡುವ ಗಟ್ಟಿತನದ ನಿರ್ಧಾರ ಪ್ರಕಟಿಸಿದವರು. ಅವರ ರಾಜ್ಯ ಭೇಟಿ ನಮ್ಮಲ್ಲಿ ಉತ್ಸಾಹ ಮೂಡಿಸುತ್ತಿದೆ. ದೇಶ ಒಡೆಯುವ ಹೇಳಿಕೆ ನೀಡಿದ ಕಾಂಗ್ರೆಸ್‌ ಸಂಸದ ಡಿ. ಕೆ.ಸುರೇಶ್ ಅವರು ನಮ್ಮ ಕಣ್ಮುಂದೆ ಇದ್ದಾರೆ. ದೇಶ ವಿಭಜನೆಯು ಕಾಂಗ್ರೆಸ್ ಮಾನಸಿಕತೆ. ಆದರೆ, ನಮ್ಮ ಮಾನಸಿಕತೆ ದೇಶ ಜೋಡಿಸುವುದು ಎಂದು ತಿಳಿಸಿದರು.

ಅಮಿತ್ ಶಾ ಅವರು ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆ ಸಂಬಂಧ ಕರ್ನಾಟಕ ಬಿಜೆಪಿಯಲ್ಲಿ ಕಂಡುಬಂದ ಭಿನ್ನಮತಗೂ ಇದೇ ಸಂದರ್ಭದಲ್ಲಿ ತೇಪೆ ಹಾಕುವ ಸಾಧ್ಯತೆ ಇದೆ.