ಹಾವೇರಿ :
ಶಿವಾನಂದ ಮಠದ ಸದ್ಗುರು ಈಶ್ವರಾನಂದ ಸ್ವಾಮೀಜಿ (52) ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ನಾಡಿನ ವಿವಿಧ ಮಠಗಳಿಂದ ಆಗಮಿಸಿದ್ದ ಸ್ವಾಮೀಜಿಗಳ ಸಮ್ಮುಖದಲ್ಲಿ ಮಠದ ಆವರಣದಲ್ಲೇ ಶ್ರೀಗಳ ಅಂತ್ಯಕ್ರಿಯೆ ನೆರವೇರಿಸಲಾಯಿತು. ಹರಿಹರ ಮೂಲದವರಾದ ಈಶ್ವರಾನಂದ ಸ್ವಾಮೀಜಿ, 30 ವರ್ಷಗಳ ಹಿಂದೆ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಅಂಕಸಾಪುರ ಗ್ರಾಮಕ್ಕೆ ಬಂದು ನೆಲೆಸಿದ್ದರು

ಕಳೆದ ಒಂದು ತಿಂಗಳಿಂದ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಶ್ರೀಗಳ ನಿಧನದ ಸುದ್ದಿ ಕೇಳುತ್ತಲೇ ಗ್ರಾಮಸ್ಥರು ಹಾಗೂ ಸಾವಿರಾರು ಭಕ್ತರು ಕಂಬನಿ ಮಿಡಿದರು. ಶ್ರೀಗಳ ಮೃತ ದೇಹವನ್ನು ಸೋಮವಾರ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಶಿವಾನಂದ ಮಠಕ್ಕೆ ಕರೆತಂದು ಮಠದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.

ತೇರದಾಳ ದಯಾನಂದ ಸ್ವಾಮೀಜಿ ಮತ್ತು ಐರಣಿ ಮನಿಮಠ ಸೇರಿದಂತೆ ನಾಡಿನ ವಿವಿಧ ಮಠಗಳಿಂದ ಆಗಮಿಸಿದ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಮಠದ ಆವರಣದಲ್ಲಿ ಸಂಜೆ ಸಕಲ ವಿಧಿ ವಿಧಾನಗಳಿಂದ ಶ್ರೀಗಳ ಅಂತ್ಯಕ್ರಿಯೆ ನಡೆಯಿತು.