ಮಡಿಕೇರಿ :
ಮಡಿಕೇರಿಯಲ್ಲಿ ಶುಕ್ರವಾರ ನಡೆದ ಎರಡು ಬೈಕ್‌ಗಳ ನಡುವಿನ ಅಪಘಾತದಲ್ಲಿ ಪದವೀಧರ ವಿದ್ಯಾರ್ಥಿ ಮೃತಪಟ್ಟ ನಂತರ ಈ ಅಪಘಾತಕ್ಕೆ ತಾನೇ ಕಾರಣ, ನನ್ನಿಂದಾಗಿ ಒಂದು ಜೀವ ಹೋಯಿತು ಎಂದು ಮನನೊಂದ ಮತ್ತೊಬ್ಬ ಬೈಕ್ ಸವಾರ ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ.

ಮನನೊಂದು ಆತ್ಮಹತ್ಯೆ ಮಾಡಿಕೊಂಡ ಬೈಕ್‌ ಸವಾರನನ್ನು ಹೆರವನಾಡಿನ ತಮ್ಮಯ್ಯ (57) ಎಂದು ಗುರುತಿಸಲಾಗಿದೆ. ಮಡಿಕೇರಿಯ ಚೈನ್ ಗೇಟ್ ಬಳಿ ಶುಕ್ರವಾರ ಧನಲ್ ಸುಬ್ಬಯ್ಯ (24) ಹಾಗೂ ತಮ್ಮಯ್ಯ ಅವರ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿ ಧನಲ್ ಸುಬ್ಬಯ್ಯ ಗಂಭೀರವಾಗಿ ಗಾಯಗೊಂಡ ನಂತರ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಬೆಳಗಿನ ಮೃತಪಟ್ಟಿದ್ದ. ಮೃತ ಯುವಕ ಧನಲ್ ಸುಬ್ಬಯ್ಯ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಓದುತ್ತಿದ್ದ.
ಆತ ಮೃತಪಟ್ಟ ಮಾಹಿತಿ ಸಿಗುತ್ತಿದ್ದಂತೆ ಅಪಘಾತಕ್ಕೆ ನಾನೇ ಕಾರಣ ಎಂದು ಮನನೊಂದು ತಮ್ಮಯ್ಯ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಧನಲ್ ಸುಬ್ಬಯ್ಯ ಹಾಲೇರಿಯ ಕಾಂಡನಕೊಲ್ಲಿ ನಿವಾಸಿಯಾಗಿದ್ದು, ಭಾನುವಾರ ಮುಂಜಾನೆ ಸುಮಾರು 3 ಗಂಟೆಗೆ ಸುಮಾರಿಗೆ ಮೃತಪಟ್ಟಿದ್ದ. ಆದರೆ, ಅಪಘಾತದ ಘಟನೆಯಿಂದ ತೀವ್ರವಾಗಿ ಮನನೊಂದಿದ್ದ ತಮ್ಮಯ್ಯ ಎರಡು ದಿನಗಳಿಂದ ಊಟ ಸಹ ಮಾಡಿರಲಿಲ್ಲವಂತೆ. ನಂತರ ಅವರು ಸೋಮವಾರ ಬೆಳಗಿನ ಜಾವ ನೇಣಿಗೆ ಶರಣಾಗಿದ್ದಾರೆ ಎಂದು ವರದಿ ತಿಳಿಸಿದೆ. ಅಪಘಾತದ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.