ನವದೆಹಲಿ:
ಮಥುರಾದಲ್ಲಿ ಕೃಷ್ಣ ದೇವಸ್ಥಾನವನ್ನು ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮಾಹಿತಿ ನೀಡಿದೆ.

ಉತ್ತರ ಪ್ರದೇಶದ ಮೈನ್‌ಪುರಿ ನಿವಾಸಿ ಅಜಯ ಪ್ರತಾಯ ಸಿಂಗ್ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಿದ ಪ್ರಶ್ನೆಗೆ ಎಎಸ್‌ಐ ಉತ್ತರ ನೀಡಿದೆ. ಅದು
1670 ರಲ್ಲಿ ಶಾಹಿ ಈದ್ಗಾವನ್ನು ನಿರ್ಮಿಸಲು ಕೇಶದೇವ ದೇವಾಲಯವನ್ನು ನಾಶಪಡಿಸಿದ ಮಥುರಾದ ಕೃಷ್ಣ ಜನ್ಮಭೂಮಿಯ ಬಗ್ಗೆ ನವೆಂಬರ್ 1920 ರಲ್ಲಿ ನಡೆಸಿದ ಸಮೀಕ್ಷೆಯಿಂದ ವಿವರಗಳನ್ನು ನೀಡುವಂತೆ ಅಜಯ ಪ್ರತಾಪ ಸಿಂಗ್ ಎಎಸ್‌ಐ (ASI)ಗೆ ಕೇಳಿದ್ದರು.

1920 ರಲ್ಲಿ ಅಲಹಾಬಾದ್‌ನಿಂದ ಬ್ರಿಟಿಷರು ಪ್ರಕಟಿಸಿದ ಗೆಜೆಟ್‌ನಲ್ಲಿ (ರಾಜ್ಯಪತ್ರ) ಲೋಕೋಪಯೋಗಿ ಇಲಾಖೆಯು ಉತ್ತರ ಪ್ರದೇಶದ ವಿವಿಧೆಡೆ 39 ಸ್ಮಾರಕಗಳ ಪಟ್ಟಿಯನ್ನು ನೀಡಿದೆ. ಈ ಪಟ್ಟಿಯಲ್ಲಿ ಕತ್ರಾ ಕೇಶವ ದೇವ ಭೂಮಿಯಲ್ಲಿರುವ ಶ್ರೀ ಕೃಷ್ಣ ಜನ್ಮಭೂಮಿಯನ್ನು 37ನೇ ಸ್ಥಾನದಲ್ಲಿ ಉಲ್ಲೇಖಿಸಲಾಗಿದೆ. ಹಿಂದೆ ಕತ್ರಾ ದಿಬ್ಬದ ಮೇಲೆ ಕೇಶವದೇವ ದೇವಸ್ಥಾನವಿತ್ತು. ಅದನ್ನು ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಉತ್ತರ ನೀಡಿದೆ.
ಕೇಂದ್ರೀಯ ಸಂಸ್ಥೆ ತನ್ನ ಆರ್‌ಟಿಐ ಪ್ರತಿಕ್ರಿಯೆಯಲ್ಲಿ ಮಾಹಿತಿ ಬಹಿರಂಗಪಡಿಸಿದ ನಂತರ, ವಕೀಲ ಮಹೇಂದ್ರ ಪ್ರತಾಪ ಸಿಂಗ್ ಅವರು ಪ್ರಮುಖ ಸಾಕ್ಷ್ಯವನ್ನು ಹೈಕೋರ್ಟ್‌ನಲ್ಲಿ ಮತ್ತು ನಂತರ ಸುಪ್ರೀಂ ಕೋರ್ಟ್‌ಗೆ ಪ್ರಸ್ತುತಪಡಿಸುವುದಾಗಿ ತಿಳಿಸಿದ್ದಾರೆ. ಸಿಂಗ್ ಅವರು ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನ್ಯಾಸ್ ಅಧ್ಯಕ್ಷರಾಗಿದ್ದಾರೆ.

ಕೃಷ್ಣ ಜನ್ಮಭೂಮಿ ದೇವಾಲಯ ಸಂಕೀರ್ಣ
ಮಥುರಾದ ಕೇಶವದೇವ ದೇವಾಲಯವನ್ನು ಸುಮಾರು 5000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಅದು ಶ್ರೀಕೃಷ್ಣ ಜನಿಸಿದ ಸ್ಥಳವಾಗಿದೆ. ಶ್ರೀ ಕೃಷ್ಣನ ಮೊಮ್ಮಕ್ಕಳಾದ ವ್ರಜ ಮತ್ತು ವ್ರಜನಾಭ ರಾಜ ಪರೀಕ್ಷಿತನ ಸಹಾಯದಿಂದ ಮಥುರಾದಲ್ಲಿ ಕೇಶದೇವ ದೇವಾಲಯವನ್ನು ನಿರ್ಮಿಸಿದರು ಎಂಬುದು ನಂಬಿಕೆ.
ಮೊಘಲ್ ರಾಜ ಔರಂಗಜೇಬ್‌ 1670ರಲ್ಲಿ ಕೇಶವ ದೇವನ ದೇವಾಲಯವನ್ನು ಕೆಡವಲು ಆದೇಶಿಸಿದ್ದ. ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ ನಂತರ ನಿರ್ಮಿಸಲಾದ ಮಸೀದಿಯಲ್ಲಿ ಔರಂಗಜೇಬ ಸ್ವತಃ ನಮಾಜ್ ಮಾಡಿದ್ದ ಎಂದು ನಂಬಲಾಗಿದೆ.

 

ಏನಿದು ವಿವಾದ..?
ಮಥುರಾದಲ್ಲಿನ ಈ ವಿವಾದವು 13.37 ಎಕರೆ ಭೂಮಿಯ ಮಾಲೀಕತ್ವದ ಹಕ್ಕುಗಳಿಗೆ ಸಂಬಂಧಿಸಿದೆ. ಶ್ರೀ ಕೃಷ್ಣ ಜನ್ಮಭೂಮಿ 10.9 ಎಕರೆ ಜಮೀನು ಹೊಂದಿದ್ದರೆ, ಶಾಹಿ ಈದ್ಗಾ ಮಸೀದಿ ಎರಡೂವರೆ ಎಕರೆ ಜಮೀನು ಹೊಂದಿದೆ. ಇಡೀ ಭೂಮಿ ಹಿಂದೂಗಳ ಪಾಲಿಗೆ ಸೇರಿದ್ದು ಎಂಬುದು ವಾದವಾಗಿದೆ. ಶಾಹಿ ಈದ್ಗಾ ಮಸೀದಿಯನ್ನು ಅಕ್ರಮ ಎಂದು ಘೋಷಿಸಿ 13.37 ಎಕರೆ ಸಂಪೂರ್ಣ ಭೂಮಿಯನ್ನು ಡಿ-ಫಾಕ್ಟೋ ಮಾಲೀಕ ಭಗವಾನ್ ಶ್ರೀಕೃಷ್ಣ ವಿರಾಜಮಾನರಿಗೆ ಹಸ್ತಾಂತರಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿದೆ