ಬೆಳಗಾವಿ : ಕಾಂಗ್ರೆಸ್ ಪಕ್ಷದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ‌ ಮಹಿಳಾ‌ ಮತ್ತು ಮಕ್ಕಳ ಇಲಾಖೆಯ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಮಂತ್ರಿ ಸ್ಥಾನದ ಅಧಿಕಾರ ಬಳಸಿಕೊಂಡು ಕ್ಷೇತ್ರದಲ್ಲಿ ಪದೆ ಪದೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಾ ನಿಷ್ಪಕ್ಷಪಾತ ಚುನಾವಣೆಗೆ ಧಕ್ಕೆ ತರುತ್ತಿದ್ದಾರೆ. ಅವರನ್ನು ಮಂತ್ರಿ ಸ್ಥಾನದಿಂದ ಕಿತ್ತೊಗೆಯಬೇಕೆಂದು ಬಿಜೆಪಿ ಚುನಾವಣಾ ಅಧಿಕಾರಿಗಳಿಗೆ ಮಂಗಳವಾರ ದೂರು ನೀಡಿದ್ದಾರೆ.

ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷಪಾತ, ಗೂಂಡಾ ವರ್ತನೆ, ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡ ಇಲ್ಲಸಲ್ಲದ ಆರೋಪ ಮಾಡುವದು, ಅಧಿಕಾರ ದುರಪಯೋಗ, ಸರ್ಕಾರಿ ನೌಕರದಾರರನ್ನು ಪಕ್ಷದ ಕೆಲಸಕ್ಕೆ ಬಳಸಿಕೊಂಡು ಚುನಾವಣಾ ಅಕ್ರಮ ಎಸಗುತ್ತಿದ್ದಾರೆ.
ಚುನಾವಣೆಯ ನೀತಿಸಂಹಿತೆ ಪ್ರಾರಂಭವಾದನಂತರ ಸರ್ಕಾರಿ‌ ಅಂಗನವಾಡಿ ಕಾರ್ಯಕರ್ತರಮ್ನ ಮನೆಗೆ ಕರೆಯಿಸಿ ಸಭೆ ನಡೆಸುವುದರೊಂದಿಗೆ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸುವಂತೆ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ನೀತಿಸಂಹಿತೆ ಉಲ್ಲಂಘಿಸಿದ್ದರ ಬಗ್ಗೆ ದೂರು ದಾಖಲಾದರೂ ಯಾವುದೇ ಕ್ರಮವಾಗುತ್ತಿಲ್ಲ.

ಸಂಸದೆ ಮಂಗಲ ಸುರೇಶ ಅಂಗಡಿಯವರು ಏನು ಗೊತ್ತಿಲ್ಲದ ರಾಜಕಾರಣಿ. ಬೇರೆಯವರು ಬರೆದುಕೊಟ್ಟ ಭಾಷಣ ಓದುವವರು ಎಂದು ಮೂದಲಿಸಿದ್ದಾರೆ. ಲೋಕಸಭಾ ಕ್ಷೇತ್ರದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ನರೇಗಾ ಕೂಲಿ ಕಾರ್ಮಿಕರನ್ನು ಸಂಘಟಿಸಿ ಪ್ರತಿ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರ ಸಭೆ ನಡೆಸುತ್ತಿದ್ದಾರೆ.
ಬಿಜೆಪಿ ನಾಯಕರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಅವರ ತೇಜೋವಧೆ ನಡೆಸುತ್ತಿದ್ದಾರೆ.
ಸಚಿವರಿಗೆ ಅನ್ಯಾಯವಾದರೆ ಚುನಾವಣಾ ಆಯೋಗಕ್ಕೆ , ಪೊಲೀಸ್ ಇಲಾಖೆಗೆ ದೂರು ನೀಡದೆ ಕೆಲ ಬಾಡಿಗೆ ಗೂಂಡಾಗಳ ಮೂಲಕ ಮುಗ್ದ ಜನತೆಯನ್ನು ಕರೆದುಕೊಂಡು ಚುನಾವಣಾ ನೀತಿ ಸಂಹಿತೆ ಇದ್ದಾಗಲೂ ಅಕ್ರಮವಾಗಿ ಮಾಜಿ ಶಾಸಕ ಸಂಜಯ ಪಾಟೀಲರ ಮನೆ ಮುಂದೆ ತಡರಾತ್ರಿಯವರೆಗೆ ಅನಧಿಕೃತವಾಗಿ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರಿಗೆ ಜೀವ ಬೆದರಿಕೆ ಹಾಕಿ ಅವರ ಆಪ್ತರ ಮೇಲೆ‌ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರ ಹಿಂದಿನ‌ ಉದ್ದೇಶವೆನೆಂದರೆ, ಅವರು ಚುನಾವಣೆಯ ಪ್ರಚಾರಕ್ಕೆ ಬರದಂತೆ ಅವರ ಮೇಲೆ‌ ಬಾಡಿಗೆ ಗೂಂಡಾಗಳನ್ನು ಛೂ ಬಿಟ್ಟು ಶಾಂತಿಯುತ ಚುನಾವಣೆಗೆ ಭಂಗ ತರುತ್ತಿದ್ದಾರೆ. ಈ ಕುರಿತು ಶಹಾಪುರ (ಬೆಳಗಾವಿ) ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದರು. ಮಂತ್ರಿಗಳ ಹಾಗೂ ಸರ್ಕಾರದ ಪ್ರಭಾವ ಬೀರಿ ದೂರಿನಲ್ಲಿ ಸಚಿವರ ಹೆಸರು ಕೈ ಬಿಟ್ಟಿದ್ದಾರೆ. ಈ ಬಗ್ಗೆ ಸಚಿವರ ಹೆಸರನ್ನು ಈ ದೂರಿನಲ್ಲಿ ದಾಖಲಿಸಿಕೊಂಡು ತಕ್ಷಣ ಆ ಬಾಡಿಗೆ ಗೂಂಡಾಗಳನ್ನು ಬಂಧಿಸಿ ಶಾಂತಿಯುತ ಚುನಾವಣೆಗೆ ಸಹಕರಿಸಬೇಕು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಚುನಾವಣಾ ಪ್ರಚಾರ ಬಿಟ್ಟು ಜಾತಿ/ ಸಮಾಜವನ್ನು ಚುನಾವಣೆಗೆ ಜೋಡಿಸುವುದರೊಂದಿಗೆ ಮಹಿಳೆಯರು ಬಿಜೆಪಿ ವಿರುದ್ದ ಹೋರಾಟ ನಡೆಸುವಂತೆ ಸಮಾಜದಲ್ಲಿ ಜಾತಿಯ ಸ್ವಸ್ಥಕ್ಕೆ ಧಕ್ಕೆ ತಂದಿದ್ದು ಚುನಾವಣಾ ನೀತಿ ಸಂಹಿತೆಯ ಅರಿವು ಇಲ್ಲದಂತೆ ಪ್ರಜಾಪ್ರಭುತ್ವಕ್ಕೆ ಕಂಟಕ ತಂದು, ವೈಯಕ್ತಿಕ ಕಾನೂನುಗಳನ್ನೆ ರೂಪಿಸಿಕೊಂಡಂತೆ ವರ್ತಿಸುತಿದ್ದು,
ಇವರ ಮೇಲೆ‌ ತಕ್ಷಣ ಕ್ರಮ ಕೈಗೊಂಡು ಮಂತ್ರಿ ಸ್ಥಾನದಿಂದ‌ ವಜಾಗೊಳಿಸಬೇಕೆಂದು ಬಿಜೆಪಿ ಅಗ್ರಹಿಸುತ್ತದೆ ಎಂದರು.

ಒಂದು ವೇಳೆ ಈ ವಿಷಯಕ್ಕೆ ಕ್ರಮ ಕೈಗೊಳ್ಳದೆ ಹೋದರೆ ಬಿಜೆಪಿ ರಾಜ್ಯಾದ್ಯಂತ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾದೀತು ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸುಭಾಷ್ ಪಾಟೀಲ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರಿಗೆ ಮತ್ತು ಅವರ ಮನೆಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ಅವರಿಗೆ ತೊಂದರೆಯಾದಲ್ಲಿ ಮಂತ್ರಿಗಳು ಮತ್ತು ಕಾಂಗ್ರೆಸ್ ಸರ್ಕಾರವೆ ಹೊಣೆಯಾಗಲಿದೆ. ನ್ಯಾಯಸಮ್ಮತ ಚುನಾವಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ದೂರಿನ‌ ಪ್ರತಿಗಳನ್ನು
ಕರ್ನಾಟಕ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು‌ ನಿರ್ವಚನಾ ಭವನ ಶೇಷಾದ್ರಿ ಪುರಂ ಬೆಂಗಳೂರು, ಗೌರವಾನ್ವಿತ ರಾಜ್ಯಪಾಲರು ಕರ್ನಾಟಕ ಸರ್ಕಾರ ಬೆಂಗಳೂರು. ಕೇಂದ್ರ ಚುನಾವಣಾಧಿಕಾರಿಗಳು ನಿರ್ವಾಚನ ಭವನ ನವದೆಹಲಿ ಹಾಗೂ ಬೆಳಗಾವಿ ಪೋಲಿಸ್ ಕಮಿಷನರ್ ಅವರಿಗೆ ದೂರು ಪ್ರತಿ ನೀಡಿದ್ದಾರೆ.

ರಾಜ್ಯ ಮಾಜಿ ವಕ್ತಾರ ಎಮ್.ಬಿ.ಝೀರಲಿ ಅವರು ಅಧಿಕಾರಿಗಳ ವರ್ತನೆಗೆ ಅಕ್ರೋಶ ವ್ಯಕ್ತಪಡಿಸಿ ಚುನಾವಣೆಯ ಸಂದರ್ಭದಲ್ಲಿ ಪಕ್ಷಪಾತ ಬಿಟ್ಟು ಸರ್ವ ಪಕ್ಷದ ಪದಾಧಿಕಾರಿಗಳನ್ನು ಸಮಾನತೆಯಿಂದ ನೋಡ ಬೇಕು. ಚುನಾವಣಾ ಅಧಿಕಾರಿಗಳಿಗೆ ನಮ್ಮ ಮಾಹಿತಿ ತಿಳಿಸಿ. ಜಿಲ್ಲಾಧಿಕಾರಿಗಳ ಸಿಬ್ಬಂದಿಗೆ ಸರಿಯಾದ ತಿಳಿವಳಿಕೆ ನೀಡಿ ಚುನಾವಣೆಯ ಕರ್ತವ್ಯದ ಬಗ್ಗೆ ತಿಳಿವಳಿಕೆ ನೀಡುವಂತೆ ತಿಳಿಸಿದರು.

ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ದೇಶಪಾಂಡೆ, ರಾಜಶೇಖರ ಡೋಣಿ, ಈರಯ್ಯ ಖೊತ, ಮಲ್ಲಿಕಾರ್ಜುನ ಮಾದಮ್ಮನವರ,ರಾಜ್ಯ ಯುವ ಮೊರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ, ರಾಜ್ಯ ಮಾಧ್ಯಮ ಸಮಿತಿ‌ ಸದಸ್ಯ ಎಫ್.ಎಸ್.ಸಿದ್ದನಗೌಡರ, ಸಂತೋಷ ದೇಶನೂರ, ಶಿವಾನಂದ‌ ಹಣಮಸಾಗರ ಮುಂತಾದವರು ಇದ್ದರು