ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರಲು ಮುಂದಾಗಿರುವ ಬಿಜೆಪಿ ಇಂದು ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂದು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಪ್ರಖ್ಯಾತ ನಾಯಕರ ಹೆಸರು ಸೇರಿವೆ.

ನವದೆಹಲಿ: ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ತನ್ನ ಅಭ್ಯರ್ಥಿಗಳ 8ನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 11 ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಮಾಜಿ ಐಪಿಎಸ್ ಅಧಿಕಾರಿ ದೇಬಶಿಶ್ ಧರ್ ಪಶ್ಚಿಮ ಬಂಗಾಳದ ಬಿರ್ಭುಮ್​​ನಿಂದ ಸ್ಪರ್ಧೆಗೆ ಇಳಿದಿದ್ದಾರೆ. ಮಾಜಿ ಕೇಂದ್ರ ಸಚಿವೆ ಪ್ರಣೀತ್ ಕೌರ್ ಪಂಜಾಬ್​​ನ ಪಟಿಯಾಲಾದಿಂದ ಕಣಕ್ಕೆ ಇಳಿಯಲಿದ್ದಾರೆ.

2010ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ದೇಬಶಿಶ್ ಧರ್ ಅವರು ಮಾರ್ಚ್ 20ರಂದು ತಮ್ಮ ಸೇವೆಗೆ ರಾಜೀನಾಮೆ ನೀಡಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಮತ್ತು ಸಾಮಾಜಿಕ ಗುರಿಗಳನ್ನು ಸಾಧಿಸಲು ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಬರೆದಿದ್ದರು. ಪಶ್ಚಿಮ ಬಂಗಾಳದಿಂದ ಇಬ್ಬರು, ಒಡಿಶಾದಿಂದ ಮೂವರು ಮತ್ತು ಪಂಜಾಬ್​ಗಾಗಿ ಆರು ಅಭ್ಯರ್ಥಿಗಳನ್ನು ಬಿಜೆಪಿ ಶನಿವಾರ ಹೆಸರಿಸಿದೆ. ಒಟ್ಟಾರೆಯಾಗಿ ಈವರೆಗೆ 411 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

ಪಶ್ಚಿಮ ಬಂಗಾಳದಲ್ಲಿ ಗಮನ ಸೆಳೆಯುವ ಡೈಮಂಡ್ ಹಾರ್ಬರ್ ಮತ್ತು ಅಸನ್ಸೋಲ್ ಸ್ಥಾನಗಳಿಗೆ ಕೇಸರಿ ಪಕ್ಷವು ಇನ್ನೂ ಯಾವುದೇ ಅಭ್ಯರ್ಥಿಯನ್ನು ಆಯ್ಕೆ ಮಾಡಿಲ್ಲ. ಈ ಬಾರಿ ಪಕ್ಷವು ನಟ ಸನ್ನಿ ಡಿಯೋಲ್ ಅವರನ್ನು ಬದಲಿಸಿದೆ ಮತ್ತು ದಿನೇಶ್ ಸಿಂಗ್ ಬಬ್ಬು ಅವರಿಗೆ ಗುರುದಾಸ್​ಪುರದ ಟಿಕೆಟ್ ನೀಡಿದೆ.

ಬಂಗಾಳದ ಸರ್ಕಾರಿ ವೈದ್ಯ ಪ್ರಣತ್ ಟುಡು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಜಾರ್​ಗ್ರಾಮ್​ನಿಂದ ಬಿಜೆಪಿ ಟಿಕೆಟ್​ ಮೂಲಕ ಸ್ಪರ್ಧಿಸಲಿದ್ದಾರೆ. ಪಂಜಾಬ್​ನ ಲುಧಿಯಾನದಿಂದ ರವ್​ನೀತ್​ ಸಿಂಗ್ ಬಿಟ್ಟು ಅವರು, ಫರಿದ್​ಕೋಟ್​ನಿಂದ ಹಂಸರಾಜ್ ಹನ್ಸ್, ಅಮೃತಸರದಿಂದ ತರಣ್​ಜಿತ್​ ಸಂಧು, ಜಲಂಧರ್​ನಿಂದ ಸುಶೀಲ್ ಕುಮಾರ್ ರಿಂಕು, ಕಂಧಮಾಲ್​ನಿಂದ ಸುಕಾಂತ ಕುಮಾರ್ ಸೇರಿದಂತೆ ಇತರ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ಅಮೆರಿಕದಲ್ಲಿನ ಭಾರತದ ಮಾಜಿ ರಾಯಭಾರಿ ತರಣ್​ಜಿತ್ ಸಿಂಗ್ ಸಂಧು ಅಮೃತಸರದಿಂದ ಚುನಾವಣಾ ಕಣಕ್ಕೆ ಇಳಿದಿರುವುದು ಬಿಜೆಪಿ ಪಾಲಿಗೆ ಲಾಭದಾಯಕವಾಗಿದೆ.