ಹಾವೇರಿ: ಶಿಗ್ಗಾವಿ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಆಗಮಿಸಿದ್ದ ಸಚಿವ ಜಮೀರ್ ಅಹಮದ್ ಖಾನ್ ಅವರ ಕಾರಿನ ಮೇಲೆ ಕೆಲ ಕಾರ್ಯಕರ್ತರು ಹುಲಗೂರಿನಲ್ಲಿ ಕಲ್ಲುತೂರಾಟ ನಡೆಸಿದ್ದಾರೆ.

ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆಗೆ ಮುಂದಾಗಿರುವ ಸೈಯದ್ ಅಜ್ಜಂಪಿರ್ ಖಾದ್ರಿ ಅವರ ಮನವೊಲಿಸಲು ಜಮೀರ್ ಅಹಮದ್ ಅವರ ಮನೆಗೆ ಹೋಗಿದ್ದರು. ಆಗ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರ ಕಾರಿನಲ್ಲಿ ಸಚಿವರು ತೆರಳಿದ್ದರು. ಟಿಕೆಟ್ ಕೈತಪ್ಪಿದ್ದರಿಂದ ಮುನಿಸಿಕೊಂಡಿದ್ದ ಖಾದ್ರಿ ಪರ ಬೆಂಬಲಿಗರು ಸಚಿವರ ಕಾರಿನ ಮೇಲೆ ಕಲ್ಲು ತೂರಿದ್ದಾರೆ. ಆಗ ಸ್ಥಳೀಯ ಮುಖಂಡರು ಸಚಿವರನ್ನು ಅಲ್ಲಿಂದ ಪಾರು ಮಾಡಿ ವಾಪಸ್ ಕಳಿಸಿದ್ದಾರೆ. ಶಿಗ್ಗಾವಿಯಲ್ಲಿ ಖಾದ್ರಿ ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಕಾಂಗ್ರೆಸ್ ನಲ್ಲಿ ಬಂಡಾಯ ತೀರ ಸ್ವರೂಪಕ್ಕೆ ತಲುಪಿದೆ.