ನವದೆಹಲಿ:
ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿರುವ ನಡುವೆಯೇ ಮಕ್ಕಳನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳದಂತೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಸೂಚಿಸಿದೆ.

ಈ ಕುರಿತು ಹೊರಡಿಸಿರುವ ಮಾರ್ಗಸೂಚಿಯಲ್ಲಿ ಮಕ್ಕಳನ್ನು ಪ್ರಚಾರದಲ್ಲಿ ಕರಪತ್ರ ಹಂಚಿಕೆ, ರ್ಯಾಲಿಯಲ್ಲಿ ಘೋಷಣೆ ಕೂಗುವುದು, ಪ್ರಚಾರ ವಾಹನಗಳಲ್ಲಿ ಕರೆದೊಯ್ಯುವುದು, ಪ್ರಚಾರಕ್ಕೆ ಬಳಸಲಾಗುವ ದೃಶ್ಯ, ಶ್ರವಣ ಜಾಹೀರಾತುಗಳನ್ನೂ ಒಳಗೊಂಡಂತೆ ಯಾವುದೇ ರೀತಿ ಬಳಸಿಕೊಳ್ಳದಂತೆ ಸೂಚಿಸಿದೆ. ಅಲ್ಲದೆ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗೂ ಈ ಕುರಿತು ಮಾರ್ಗಸೂಚಿ ಹೊರಡಿಸಿದ್ದು, ಒಂದು ವೇಳೆ ಚುನಾವಣಾ ಕರ್ತವ್ಯದ ಅವಧಿಯಲ್ಲಿ ಮಕ್ಕಳ ಬಳಕೆ ಕಂಡುಬಂದಲ್ಲಿ ಜಿಲ್ಲಾ ಚುನಾವಣಾಧಿಕಾರಿಯನ್ನು ಹೊಣೆಯಾಗಿಸಿ ಬಾಲಾಪರಾಧ ಕಾಯ್ದೆಯಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದೆ.