ಬೆಂಗಳೂರು:
ನನ್ನ ಆರೋಗ್ಯ ಸರಿಯಿಲ್ಲ. ಆದರೆ ನಿಮಗೆ ಸಮಯ ನೀಡಿದ್ದೇನೆ. ಮಾತಿಗೆ ತಪ್ಪಬಾರದು ಎಂಬ ಕಾರಣಕ್ಕೆ ವೈದ್ಯರ ವಿಶ್ರಾಂತಿ ಸಲಹೆಯನ್ನು ಲೆಕ್ಕಿಸದೆ ಇಲ್ಲಿಗೆ ಆಗಮಿಸಿದ್ದೇನೆ. ಜನ ಸೇವೆಯೇ ಜನಾರ್ಧನ ಸೇವೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನೆರೆದಿದ್ದ ಸಾರ್ವಜನಿಕರು, ʼತೊಂದರೆ ಇಲ್ಲ ಸಾರ್, ಹುಷಾರಾಗಿ ಇನ್ನೊಮ್ಮೆ ಬನ್ನಿ ಎಂದು ಕೂಗಿದರುʼ. ಆದರೆ ಡಿಸಿಎಂ ಅವರು ಜನರ ಬಳಿ ತೆರಳಿ ಅವರ ಕಷ್ಟ ಆಲಿಸಿ, ಮನವಿ ಸ್ವೀಕರಿಸಿದರು.

ಶಿವಾಜಿನಗರದ ಆರ್ಬಿಎಎನ್ಎಂಎಸ್ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ “ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ, 102 ಡಿಗ್ರಿ ಜ್ವರದ ನಡುವೆಯೂ ಕೈಗೆ ಡ್ರಿಪ್ಸ್ ಸಲೈನ್ ಸೂಜಿ ಹಾಕಿಕೊಂಡೇ ಅಹವಾಲು ಸ್ವೀಕರಿಸಿದ ಡಿಸಿಎಂ ಅವರ ಕಾರ್ಯಬದ್ಧತೆ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲವರು ಅಯ್ಯೋ.. ಎಂದರು.

*ಟ್ಯಾಕ್ಸ್ ಕಡಿಮೆ ಮಾಡಿಸುತ್ತೇನೆ ಆರಾಮಾಗಿರು*

ಟ್ಯಾನರಿ ರಸ್ತೆಯಲ್ಲಿ ಜ್ಯೋತಿ ಸೇವಾ ಅಂಧ ಮಕ್ಕಳ ಶಾಲೆ ನಡೆಸುತ್ತಿರುವ ಶ್ವೇತಾ ಅವರು “ಸಾರ್, ನಮ್ಮದು ಅಂಧ ಮಕ್ಕಳ ಶಾಲೆ. ಬಿಬಿಎಂಪಿಯವರು ವಾಣಿಜ್ಯ ಕಟ್ಟಡ ಎಂದು ಹೆಚ್ಚಿನ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಕಡಿಮೆ ಮಾಡಿಕೊಡಿ” ಎಂದಾಗ “ಟ್ಯಾಕ್ಸ್ ಕಡಿಮೆ ಮಾಡಿಸುತ್ತೇನೆ ಆರಾಮಾಗಿರು” ಎಂದು ಅಭಯ ನೀಡಿದರು. ಸಂಬಂಧಪಟ್ಟವರಿಗೆ ಸೂಚನೆ ನೀಡಿದರು.

*ಸಾರ್ ಬೇಗ ಹುಷಾರಾಗಿ, ಮತ್ತೊಮ್ಮೆ ಬನ್ನಿ*

ನನ್ನ ಮಗ ಶಿವಾಜಿನಗರದ ಅಲೋಷಿಯಸ್ ಶಾಲೆಯಲ್ಲಿ ಓದುತ್ತಿದ್ದು, ಶಾಲಾ ಶುಲ್ಕ ಬಾಕಿ ಇದ್ದು ಕಟ್ಟುವ ಶಕ್ತಿ ಇಲ್ಲ ಎಂದು ಭವ್ಯ ಅವರು ಹೇಳಿದಾಗ “ಸಂಬಂಧಪಟ್ಟವರಿಗೆ ಸೂಚನೆ ನೀಡುತ್ತೇನೆ. ಮಗನನ್ನು ಚೆನ್ನಾಗಿ ಓದಿಸು” ಎಂದ ಡಿಸಿಎಂ ಅವರಿಗೆ ʼ ಸಾರ್ ಬೇಗ ಹುಷಾರಾಗಿ, ಮತ್ತೊಮ್ಮೆ ಬನ್ನಿʼ ಎಂದರು.

ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರ ಖಾಯಂ ಬಗ್ಗೆ ಮತ್ತೊಮ್ಮೆ ಚರ್ಚೆ ಮಾಡಲಾಗುವುದು ಎಂದು, “ಕಳೆದ 15 ವರ್ಷಗಳಿಂದ ಬಿಬಿಎಂಪಿ ಪೂರ್ವ ವಲಯದ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ, ನಮ್ಮನ್ನು ಖಾಯಂ ಮಾಡಿ” ಎಂದು ಅಲವತ್ತುಕೊಂಡ ಶ್ರೀದೇವಿ ಮತ್ತು ಜ್ಯೋತಿ ಅವರಿಗೆ ಭರವಸೆ ಡಿಸಿಎಂ ನೀಡಿದರು.

ನಮ್ಮ ಮಗನಿಗೆ ಎಸ್‌‌‌ಬಿಐನಲ್ಲಿ ಅಟೆಂಡರ್ ಕೆಲಸ ಕೊಡಿಸಿ ಎಂದು ಭಾರತಿನಗರದ ಚಂದ್ರಶೇಖರಯ್ಯ ಅವರು ಮನವಿ ನೀಡಿದಾಗ “ಎಸ್‌‌‌ಬಿಐನಲ್ಲೇ ಕೆಲಸ ಬೇಕಾ, ಸರಿ, ಬ್ಯಾಂಕಿನವರಿಗೆ ವಿಚಾರ ತಿಳಿಸುತ್ತೇನೆ” ಎಂದಾಗ ವೃದ್ದ ದಂಪತಿಗಳು ಹರ್ಷಚಿತ್ತರಾದರು.

ಕಾಲಕಾಲಕ್ಕೆ ವಾರ್ಡ್ ಕಮಿಟಿ ಸಭೆ ನಡೆಸಬೇಕು ಎಂದು ಎಚ್ಎಂಟಿ ಲೇಔಟಿನ ಜಗನ್ನಾಥರಾವ್ ಮನವಿ ಸಲ್ಲಿಸಿದರೆ, ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಮನೆ ನೀಡಿ, ಬೆಂಗಳೂರಿಗೆ ಬಂದು 50 ವರ್ಷವಾಯಿತು ಎಂದು ಶಿವಾಜಿನಗರದ ಶಂಶುಲ್ ಅವಲತ್ತುಕೊಂಡರು.

ಬಿಬಿಎಂಪಿಯಲ್ಲಿ ಕಿರಿಯ ಆರೋಗ್ಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದೆ. ಕೋವಿಡ್ ಬಂದ ಕಾರಣ ಕೆಲಸಕ್ಕೆ ರಜೆ ಹಾಕಬೇಕಾಯಿತು. ಕೋವಿಡ್ ವಾಸಿಯಾದ ಮೇಲೆ ನನ್ನನ್ನು ಕೆಲಸಕ್ಕೆ ತೆಗೆದುಕೊಂಡಿಲ್ಲ ಎಂದು ಪುಲಿಕೇಶಿನಗರದ ರಾಜೇಶ್ ಅವರು ಹೇಳಿದಾಗ “ಇದನ್ನು ಪರಿಗಣಿಸಿ” ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದರು.

ನಮ್ಮ ಮನೆ ನೀರಿನ ಬಿಲ್ 7-8 ಸಾವಿರ ಬರುತ್ತಿದೆ ಎಂದು ಶಿವಾಜಿನಗರದ ಕಾಮರಾಜ ರಸ್ತೆಯ ಜ್ಞಾನೇಶ್ವರ ಅವರು ಹೇಳಿದಾಗ ಡಿಸಿಎಂ ಒಂದು ಕ್ಷಣ ಅವಕ್ಕಾದರು. ನೀರು ಸರಬರಾಜು ನಿಗಮ ಮುಖ್ಯ ಎಂಜಿನಿಯರ್ ಅವರಿಗೆ ಕೂಡಲೇ ಪರಿಶೀಲಿಸಲು ಸೂಚಿಸಿದರು.

ಅಹವಾಲು ಸ್ವೀಕರಿಸಿ ಹೊರಡುತ್ತಿದ್ದ ವೇಳೆ ದೃಷ್ಟಿದೋಷವುಳ್ಳ ದಂಪತಿಗಳು “ಸಾಹೇಬರೇ ನಮ್ಮ ಕಡೆಯೂ ನೋಡಿ” ಎಂದು ಸಮಸ್ಯೆಗಳ ಸರಮಾಲೆಯನ್ನೇ ತೆರೆದಿಟ್ಟರು. “ಆಯ್ತಮ್ಮ ಖಂಡಿತಾ ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ” ಎಂದ ಡಿ.ಕೆ.ಶಿವಕುಮಾರ್ ಅವರು ತಮ್ಮ ಜೇಬಿನಿಂದ ಹಣ ತೆಗೆದು ನೀಡಿದರು.

*”ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಡಿಸಿಎಂ ಅವರ ಮಾತು*

ಕಳೆದ ಎರಡು ಕಾರ್ಯಕ್ರಮಗಳಲ್ಲಿ ನೀಡಿದಂತೆ ಹೆಚ್ಚಿನ ಸಮಯವನ್ನು ನಿಮಗೆ ನೀಡಲಾಗದಿದ್ದರೂ ನಿಮ್ಮ ಅಹವಾಲು ಸ್ವೀಕರಿಸುತ್ತೇನೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇನೆ. ಕಳೆದ ಎರಡು ದಿನಗಳ ಕಾರ್ಯಕ್ರಮದಲ್ಲಿ ಸುಮಾರು 7 ಸಾವಿರ ಜನ ನನ್ನನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಎಲ್ಲೂ ನ್ಯಾಯ ಸಿಗದಿದ್ದಾಗ ಮಾತ್ರ ಜನರು ರಾಜಕಾರಣಿಗಳನ್ನು ಹುಡುಕಿಕೊಂಡು ಬರುತ್ತಾರೆ. ಈ ಹಿಂದೆ ನನ್ನ ಕ್ಷೇತ್ರದ ಹಳ್ಳಿಗಳಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಜನರ ಸಮಸ್ಯೆ ಆಲಿಸುತ್ತಿದ್ದೆ. ಜನ ಸೇವೆಯೇ ದೇವರ ಸೇವೆ ಎಂದು ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧದ ಮುಂಭಾಗದಲ್ಲಿ ಬರೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಸಚಿವರಿಗೂ ಜನರ ಮಧ್ಯೆ ಹೋಗಿ ಅವರ ಸಮಸ್ಯೆ ಆಲಿಸಲು ಸೂಚನೆ ನೀಡಿದ್ದಾರೆ. ನನ್ನ ಜತೆ ಉತ್ತಮ ಅಧಿಕಾರಿಗಳ ತಂಡವಿದೆ. ನಾನು ಹಾಗೂ ಶಾಸಕರು ಮಾತ್ರ ಇಲ್ಲಿ ಬಂದಿಲ್ಲ. ಸುಮಾರು 200-300 ಅಧಿಕಾರಿಗಳು ಇಲ್ಲಿ ಬಂದು ನಿಮ್ಮ ಸಮಸ್ಯೆ ಆಲಿಸುತ್ತಿದ್ದೇವೆ. ಇದರಿಂದ ಜನಪರ ಆಡಳಿತಕ್ಕೆ ಅನುಕೂಲವಾಗಲಿದೆ.

*ಮೂರು ಆಪ್‌‌‌ಗಳ ಅನಾವರಣ*

ಇದೇ ವೇಳೆ *ಹಸಿರು ರಕ್ಷಕ, ಉದ್ಯಾನ ಮಿತ್ರ ಮತ್ತು ಕೆರೆ ಮಿತ್ರ* ಎಂಬ ಮೂರು ಆಪ್ ಗಳನ್ನು ಡಿಸಿಎಂ ಅವರು ಅನಾವರಣ ಮಾಡಿದರು.

ನಗರದಲ್ಲಿ ಹಸಿರು ಹೆಚ್ಚಿಸಲು ಶಾಲಾ ಮಕ್ಕಳೇ ಗಿಡ ಬೆಳೆಸುವ ಯೋಜನೆ ಇದಾಗಿದೆ. 2023-24ನೇ ಸಾಲಿನಲ್ಲಿ 224 ಶಾಲಾ-ಕಾಲೇಜುಗಳ ಜತೆ ಒಡಂಬಡಿಕೆ ಮಾಡಿಕೊಂಡು, 52,015 ಮಕ್ಕಳಿಂದ 1 ಲಕ್ಷ ಗಿಡಗಳನ್ನು ನೆಡಲಾಗಿದೆ.

3 ವರ್ಷಗಳ ಕಾಲ ಗಿಡವನ್ನು ಯಶಸ್ವಿಯಾಗಿ ಬೆಳೆಸಿದ ವಿದ್ಯಾರ್ಥಿಗಳಿಗೆ “ಹಸಿರು ರಕ್ಷಕ” ಪ್ರಮಾಣ ನೀಡಲಾಗುವುದು.

ಉದ್ಯಾನ ಮಿತ್ರ ಯೋಜನೆ ಮೂಲಕ ನಗರದ ಉದ್ಯಾನವನಗಳ ನಿರ್ವಹಣೆಯನ್ನು ಸ್ಥಳೀಯ ಜನರಿಗೆ ನೀಡುವ ನಿರ್ಧಾರ ಮಾಡಲಾಗಿದೆ. ನಗರದಲ್ಲಿ 1200 ಉದ್ಯಾನವನಗಳಿದ್ದು ಇವುಗಳನ್ನು ಜನರೇ ನಿರ್ವಹಣೆ ಮಾಡುವಂತೆ ಪ್ರೇರೇಪಿಸಲಾಗುವುದು.

*ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಪರಿಶೀಲಿಸಿದ ಡಿಸಿಎಂ*

ಜನರ ಅಹವಾಲು ಸ್ವೀಕಾರದ ನಂತರ ವಾಪಸ್ಸು ತೆರಳುವಾಗ ಕಾರ್ಯಕ್ರಮ ನಡೆದ ಮೈದಾನದ ಪಕ್ಕದ ರಸ್ತೆಯಲ್ಲಿ ಗುಂಡಿ ಮುಚ್ಚುವ ಕೆಲಸವನ್ನು ಪರಿಶೀಲಿಸಿದರು. “ಜ್ವರ ಇದೆ, ನಡೀರಿ ಸರ್ ಮನೆಗೆ” ಎಂದು ಅಧಿಕಾರಿಗಳು ಹೇಳಿದರೂ ಕೆಲಸ ನೋಡಿದ ನಂತರವೇ ಹೊರಟರು.