ಬೆಂಗಳೂರು :
“ಈಡಿಗ ಸಮುದಾಯದ ಅಭಿವೃದ್ಧಿ ನಿಗಮಕ್ಕೆಗೆ ₹500 ಕೋಟಿ ಅನುದಾನ ನೀಡಬೇಕು ಎಂಬ ಮನವಿ ಬಂದಿದ್ದು, ಇದನ್ನು ಈಡೇರಿಸುವ ಭರವಸೆ ನೀಡುತ್ತೇನೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ನಡೆದ ಕರ್ನಾಟಕದ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವದಲ್ಲಿ‌ ಮಾತನಾಡಿ, “ಈಗ ಅಧಿವೇಶನ ನಡೆಯುತ್ತಿದ್ದು ಅಧಿಕೃತ ಘೋಷಣೆ ಮಾಡಲು ಆಗುವುದಿಲ್ಲ. ಹೀಗಾಗಿ ನಿಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡುತ್ತೇನೆ” ಎಂದರು.

ಉಳಿದಂತೆ ಅವರು ಹೇಳಿದ್ದಿಷ್ಟು;

“ರಾಜ್ಯದ ಈಡಿಗ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಒಟ್ಟಾಗಿ ಶ್ರಮಿಸಿದೆ. ನಿಮ್ಮ ಬೆಂಬಲಕ್ಕೆ ಎಷ್ಟು ಅಭಿನಂದನೆ ತಿಳಿಸಿದರೂ ಸಾಲದು. ನಾವು ನಿಮಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳುತ್ತೇವೆ.

ವಿಧಾನಸಭಾ ಚುನಾವಣೆಯಲ್ಲಿ ಮತ್ತು ಇಂದು ಈಡಿಗ ಸಮುದಾಯದವರೆಲ್ಲಾ ಒಗ್ಗಟ್ಟಾಗಿ, ಸಿದ್ದರಾಮಯ್ಯನವರ ಸರ್ಕಾರದ ಜೊತೆಗೆ ಇದ್ದೇವೆ ಎಂಬ ಸಂದೇಶ ನೀಡಿದ್ದೀರಿ‌. ಇದಕ್ಕೆ ನಾನು ಆಭಾರಿ.

‘ವಿದ್ಯೆಯಿಂದ ವಿವೇಕವಂತರಾಗಬೇಕು, ಸಂಘಟನೆಯಿಂದ ಬಲಿಷ್ಠರಾಗಬೇಕು’ ಎನ್ನುವ ನಾರಾಯಣಗುರುಗಳ ಮಾತುಗಳನ್ನು ನಾವು ಮತ್ತು ನೀವು ಎಂದಿಗೂ ಮರೆಯಬಾರದು.

ನಾನು, ಸಿದ್ದರಾಮಯ್ಯನವರು ಮತ್ತು ನಮ್ಮ ಶಾಸಕರು ಚಪ್ಪಾಳೆ ಗಿಟ್ಟಿಸಿಕೊಳ್ಳಲು ಸಮಾರಂಭಕ್ಕೆ ಬಂದಿಲ್ಲ. ಬದಲಾಗಿ ನಾವೂ ನಿಮ್ಮ ಜೊತೆಗೆ ಇದ್ದೇವೆ ಎಂದು ಹೇಳುವುದಕ್ಕಾಗಿ ಬಂದಿದ್ದೇವೆ.

ನಿಮ್ಮ ಆಚಾರ, ವಿಚಾರ, ನಿಮ್ಮ ಕಷ್ಟ, ದುಃಖ, ದುಮ್ಮಾನ ಎಲ್ಲವನ್ನೂ ಕೇಳುತ್ತೇವೆ. ನಮಗೂ ಉಪಕಾರ ಸ್ಮರಣೆ ಎಂಬುದಿದೆ. ಯಾರು ನಮಗೆ ಸಹಾಯ ಮಾಡುತ್ತಾರೋ ಅವರಿಗೆ ನಾವು ಸಹಾಯ ಮಾಡಬೇಕು ಎಂಬುದೇ ನಮ್ಮ ತತ್ವ ಮತ್ತು ಸಿದ್ಧಾಂತ.

ನಾನು ಕೇವಲ ಉಪ ಮುಖ್ಯಮಂತ್ರಿಯಲ್ಲ, ಒಂದು ಪಕ್ಷದ ಅಧ್ಯಕ್ಷನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದೇನೆ. ನನ್ನ ಬಳಿ ಈಡಿಗ ಸಮುದಾಯದ ಎಲ್ಲಾ ಶಾಸಕರು, ಮಂತ್ರಿಗಳು ಬಂದು, ಸಮುದಾಯದ ಅಭಿವೃದ್ಧಿಗೆ ಸೂಕ್ತ ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದರು. ವಿಧಾನಸಭೆಯ ಕಲಾಪ ನಡೆಯುತ್ತಿರುವ ಕಾರಣ ಯಾವುದೇ ಘೋಷಣೆಯನ್ನು ಮಾಡುವಂತಿಲ್ಲ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ನಿಮ್ಮ ವಿಚಾರಗಳಿಗೆ ಸಂಪೂರ್ಣ ಬೆಂಬಲ ನೀಡುತ್ತದೆ.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಈಡಿಗ ಸಮುದಾಯದ ಅಭಿವೃದ್ಧಿಗೆ ಹೇಳಿದ್ದ ಅಂಶಗಳನ್ನು ಈಗಾಗಲೇ ಘೋಷಿಸಲಾಗಿದೆ. ಸಮುದಾಯದ ಮುಖಂಡರುಗಳು ಮತ್ತು ಪದಾಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ, ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ.

ನನ್ನ ರಾಜಕಾರಣ ಪ್ರಾರಂಭವಾಗಿದ್ದು ಮತ್ತು ಮೊದಲ ಬಾರಿಗೆ ಸಚಿವನಾಗಿದ್ದು ಬಂಗಾರಪ್ಪನವರ ನೇತೃತ್ವದ ಸರ್ಕಾರದಲ್ಲಿ. ಮಧು ಬಂಗಾರಪ್ಪನವರ ಮನವೊಲಿಸಿ ನಮ್ಮ ಪಕ್ಷಕ್ಕೆ ಕರೆತಂದೆ, ಈಗ ಸಚಿವರಾಗಿದ್ದಾರೆ. ಅವರಿಗೆ ವಹಿಸಿದ ಎಲ್ಲಾ ಜವಬ್ದಾರಿಗಳನ್ನು ದಕ್ಷತೆಯಿಂದ ನಿರ್ವಹಿಸುತ್ತಿದ್ದಾರೆ.

ನಾನು ಮೊದಲ ಬಾರಿ ವಿಧಾನಸಭೆಗೆ ಹೋದ ಕಾಲದಲ್ಲಿ ಈಡಿಗ ಸಮುದಾಯದ 6 ಜನ ಸಂಸದರಿದ್ದರು. ಜಾಲಪ್ಪನವರು, ಬಂಗಾರಪ್ಪನವರು, ಹರಿಪ್ರಸಾದ್, ದೇವರಾಜ್ ನಾಯಕ್ ಮತ್ತು ಜನಾರ್ದನ್ ಪೂಜಾರಿಯವರು ಸೇರಿದಂತೆ ಅನೇಕ ಹಿರಿಯ ನಾಯಕರಿದ್ದರು. ಈಗ ಒಬ್ಬರೂ ಇಲ್ಲದಂತಾಗಿದೆ.

ಪ್ರಸ್ತುತ ಗೋಪಾಲಕೃಷ್ಣ ಬೇಳೂರು, ಭೀಮಣ್ಣ ನಾಯ್ಕ ಸೇರಿದಂತೆ ಸಮುದಾಯದ ಇತರೇ ಶಾಸಕರು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ನೀಡುವುದರ ಮೂಲಕ ನಿಮಗೆ ಸಹಾಯ ಮಾಡುತ್ತೇವೆ. ಆದರೆ ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವಂತಹ ಕೆಲಸ ನೀವು ಮಾಡಬೇಕು.

ಜನಾರ್ದನ್ ಪೂಜಾರಿಯವರು ನಿಮ್ಮ ಸಮಾಜಕ್ಕಾಗಿ, ದೇಶಕ್ಕಾಗಿ ಮತ್ತು ಬಡ ಜನರಿಗಾಗಿ ಬ್ಯಾಂಕ್‌ಗಳು ಪ್ರತೀ ಜನರ ಮನೆ ಬಾಗಿಲಿಗೆ ಹೋಗಿ ಸೇವೆ ನೀಡುವಂತಹ ಕೆಲಸ ಮಾಡಿದ್ದರು. ಆದರೆ ಅಂತವರನ್ನು ನೀವು ಚುನಾವಣೆಯಲ್ಲಿ ಸೋಲಿಸಿದ್ದೀರಿ. ಮುಂದೆ ಇಂತಹ ತಪ್ಪು ನಿರ್ಧಾರಗಳು ಆಗಬಾರದು”.

“ಮಂಗಳೂರು, ಉಡುಪಿ, ಶಿವಮೊಗ್ಗ ಮತ್ತು ಉತ್ತರ ಕನ್ನಡದಲ್ಲಿ ಈಡಿಗ ಸಮುದಾಯ ಸೇರಿದಂತೆ ಇತರೇ ಯಾರೇ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸಿದರು ಕಾಂಗ್ರೆಸ್ ಪಕ್ಷಕ್ಕೆ ಸಹಕಾರ ನೀಡಬೇಕು.

*ನಟ ಶಿವರಾಜ್ ಕುಮಾರ್ ಅವರು ರಾಜಕೀಯಕ್ಕೆ ಬರಲು ಸಕಾಲ*

“ಲೋಕಸಭೆ ಚುನಾವಣೆಗೆ ತಯಾರಾಗಿ ಎಂದು ನಟ ಶಿವರಾಜ್ ಕುಮಾರ ಅವರಿಗೆ ತಿಳಿಸುತ್ತಿದ್ದೆ. ಅದಕ್ಕೆ ಅವರು ಇನ್ನೂ ಒಪ್ಪಿಗೆ ಸೂಚಿಸಿಲ್ಲ. ಬದಲಾಗಿ ಚಿತ್ರರಂಗದಲ್ಲಿಯೇ ಮುಂದುವರೆಯಬೇಕು ಎನ್ನುತ್ತಿದ್ದಾರೆ. ಚಿತ್ರರಂಗದಲ್ಲಿ ಯಾವಾಗ ಬೇಕಾದರೂ ಮುಂದುವರೆಯಲು ಅವಕಾಶ ಇದೆ. ಆದರೆ ಲೋಕಸಭೆಗೆ ಹೋಗುವ ಭಾಗ್ಯ ಎಲ್ಲರಿಗೂ ಒದಗುವುದಿಲ್ಲ. ಆ ಅವಕಾಶ ಮತ್ತು ಯೋಗ ಮನೆಯ ಬಾಗಿಲಿಗೆ ಬಂದಿದೆ. ಇಂತಹ ಅವಕಾಶದಿಂದ ವಂಚಿತರಾಗಬೇಡಿ”. ಎಂದು ಅವರಿಗೆ ಸಲಹೆ ನೀಡಿದ್ದೇನೆ.