ಬೆಳಗಾವಿ: ಆಧುನಿಕ ಮತ್ತು ಪ್ರಸಕ್ತ ದಿನಗಳ ಮಾನವನ ಜೀವನ ಶೈಲಿಯ ಪರಿಣಾಮದಿಂದ ಪರಿಸರ ನಾಶವಾಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಅತಿಯಾದ ಉಷ್ಣತೆಯನ್ನು ಎದುರಿಸುತ್ತಿದ್ದೇವೆ. ಆದ್ದರಿಂದ ಪರಿಸರ ರಕ್ಷಿಸುವ ಹೊಣೆ ಎಲ್ಲರದ್ದಾಗಿದೆ ಎಂದು ಆರ್‌ಸಿಯು ಇಂಗ್ಲೀಷ್ ಅಧ್ಯಯನ ವಿಭಾಗದ ಪ್ರೊ. ವಿಜಯ ನಾಗಣ್ಣವರ ಹೇಳಿದರು.

ಆರ್‌ಸಿಯು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಬುಧವಾರ ಏರ್ಪಡಿಸಲಾದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಗಿಡ, ಮರಗಳ ನಾಶ ಮತ್ತು ಕಾಡುಗಳ ಅತಿಕ್ರಮಣದಿಂದ ಪರಿಸರದ ಸಮತೋಲನದಲ್ಲಿ ವ್ಯತ್ಯಾಸ ಉಂಟಾಗಿದೆ. ಮಾನವನು ತಮ್ಮ ಜೀವನ ಸುಲಭಗೊಳಿಸಲು, ರೂಢಿಸಿಕೊಂಡ ಅನೇಕ ಉಪಕ್ರಮಗಳ ಪರಿಣಾಮ ಪರಿಸರಕ್ಕೆ ದೊಡ್ಡ ಹಾನಿ ಉಂಟು ಮಾಡುತ್ತಿರುವುದು ಸೋಜಿಗದ ಸಂಗತಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಭಾಗದ ಅಧ್ಯಕ್ಷೆ ಪ್ರೊ. ಕಮಲಾಕ್ಷಿ ತಡಸದ ಮಾತನಾಡಿ, ಪರಿಸರ ಅನುಕೂಲ ಬದುಕು ನಿರ್ವಹಣೆಗೆ ನಾವೆಲ್ಲರೂ ಮುಂದಾಗಬೇಕಿದೆ. ಪರಿಸರ ಉಳಿದರೆ ಮಾತ್ರ ಸಮಸ್ತ ಪ್ರಪಂಚ ಉಳಿಯುವುದು. ಆದ್ದರಿಂದ ಮಿತವಾದ ಪ್ಲಾಸ್ಟಿಕ್ ಬಳಕೆ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಜಲ, ವಾಯು ಮತ್ತು ಭೂ ಮಾಲಿನ್ಯದ ನಿಯಂತ್ರಣಕ್ಕೆ ಒತ್ತು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಆರ್‌ಸಿಯು ಮುಖ್ಯ ಅವರಣದಲ್ಲಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಎನ್‌ಎಸ್‌ಎಸ್ ಸ್ವಯಂಸೇವಕರು 15 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟರು,
ಪ್ರೊ. ಡಿ.ಎನ್. ಪಾಟೀಲ, ಪ್ರೊ. ವೈ, ಎಸ್, ಬಲವಂತಗೋಳ, ಪ್ರೊ. ಕೆ.ಬಿ.ಚಂದ್ರಿಕಾ , ಪ್ರೊ. ಜೆ.ಮಂಜಣ್ಣ, ಡಾ. ಸುಮಂತ ಹಿರೇಮಠ, ಪ್ರೊ. ಅಶೋಕ ಡಿಸೋಜಾ, ಪ್ರೊ. ಚಂದ್ರಕಾAತ ವಾಘಮೋರೆ, ಡಾ.ಕಿರಣಕುಮಾರ ಪಿ. ಡಾ. ಕಿರಣಕುಮಾರ ಸವಣೂರ, ಡಾ. ರಮೇಶ ಎಂ.ಎನ್, ಡಾ. ಪ್ರಕಾಶ ಕಟ್ಟಿಮನಿ, ಡಾ. ಆಶ್ವಿನಿ ಜಾಮುನೆ ಮತ್ತು ಡಾ. ಮಲ್ಲಮ್ಮಾ ರೆಡ್ಡಿ ಸೇರಿದಂತೆ ವಿವಿಯ ವಿವಿಧ ನಿಖಾಯದ ಡೀನರು, ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.