ಚಿತ್ರದುರ್ಗ :
ನಗರದ ಮನೆಯೊಂದರಲ್ಲಿ ಸಿಕ್ಕಿರುವ ಐದು ಅಸ್ಥಿಪಂಜರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಅಕ್ಕಪಕ್ಕದ ನಿವಾಸಿಗಳು ತಮ್ಮ ಮನೆಗಳಿಗೆ ಬೀಗ ಹಾಕಿ ತೆರಳಿದ್ದಾರೆ. ಈ ನಡುವೆ ಡೆತ್ ನೋಟ್ ಸಹಾ ಪತ್ತೆಯಾಗಿದೆ.

ಜನನಿಬಿಡ‌ಪ್ರದೇಶವಾಗಿದ್ದ‌ ಜಿಲ್ಲಾ ಕಾರಾಗೃಹ ರಸ್ತೆ ಈಗ ಬಿಕೋ ಎನ್ನುತ್ತಿದೆ. ಕಾರಣ ಪಾಳು ಬಿದ್ದ ಮನೆಯ ಅಕ್ಕಪಕ್ಕದ‌ ನಿವಾಸಿಗಳು ಆತಂಕಗೊಂಡು ತಮ್ಮ ಮನೆಗಳಿಗೆ ಬೀಗ ಹಾಕಿ ನೆಂಟರ ಊರುಗಳಿಗೆ ತೆರಳಿದ್ದಾರೆ.

ಇತ್ತ ಅಸ್ಥಿಪಂಜರ ಪತ್ತೆಯಾದ ಹಿನ್ನೆಲೆಯಲ್ಲಿ ಭಯಗೊಂಡಿರುವ ವಾಯುವಿಹಾರಿಗಳು ಇಂದು ರಸ್ತೆಯತ್ತ ಮುಖಮಾಡಿಲ್ಲ. ಪ್ರತಿ ದಿನ ನಾಗರಿಕರು ಬೆಳಗ್ಗೆ ಮತ್ತು ಸಂಜೆ ಈ ರಸ್ತೆಯಲ್ಲಿ ವಾಕಿಂಗ್‌ ಬರುತ್ತಿದ್ದರು. ಆದರೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಅವರು ಭಯಗೊಂಡಿದ್ದಾರೆ. ಇದೇ ರಸ್ತೆಯ ಕೊನೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಗಳು ಇದ್ದು, ಅಲ್ಲಿಗೂ ಗ್ರಾಹಕರು ಬರುತ್ತಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ವಾಹನ ಸಂಚಾರ, ಜನದಟ್ಟಣೆ ಇಲ್ಲದೇ ಜೈಲು ರಸ್ತೆ‌ ಬಿಕೋ ಎನ್ನುತ್ತಿದೆ.

ಏನಿದು ಘಟನೆ..?
ಚಿತ್ರದುರ್ಗದ ನಗರದ ಪಾಳು ಬಿದ್ದ ಮನೆಯೊಂದರಲ್ಲಿ 5 ಅಸ್ಥಿಪಂಜರ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಸತತ 4 ವರ್ಷಗಳಿಂದ ಬಾಗಿಲು ಮುಚ್ಚಿದ್ದ ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆಯಾಗಿವೆ ಎಂದು ದೂರು ದಾಖಲಾಗಿತ್ತು. ಈ ಸಂಬಂಧ ಪವನ್ ಕುಮಾರ್ ಎಂಬವರು ಬಡಾವಣೆ ಠಾಣೆಗೆ ದೂರು ನೀಡಿದ್ದರು. ಸಂಬಂಧಿ ಜಗನ್ನಾಥ ರೆಡ್ಡಿ ಮತ್ತು ಕುಟುಂಬ ವಾಸವಾಗಿತ್ತು. ಸುಮಾರು ವರ್ಷಗಳಿಂದ ಜಗನ್ನಾಥ ರೆಡ್ಡಿ ಕುಟುಂಬ ನಮ್ಮ ಸಂಪರ್ಕದಲ್ಲಿರಲಿಲ್ಲ. ನಮ್ಮ ಮನೆಗೆ ಅವರು ಬರುತ್ತಿರಲಿಲ್ಲ. ಅವರ ಮನೆಗೆ ನಾವು ಹೋಗುತ್ತಿರಲಿಲ್ಲ. ಕೆಲ ವರ್ಷಗಳಿಂದ ಜಗನ್ನಾಥ ರೆಡ್ಡಿ ಮತ್ತು ಕುಟುಂಬದವರು ಕಂಡಿಲ್ಲ. ಜಗನ್ನಾಥ ರೆಡ್ಡಿ ಮನೆಯಲ್ಲಿ ಪತ್ತೆ ಆಗಿರುವುದು ಅವರ ಅಸ್ಥಿಪಂಜರ ಆಗಿರಬಹುದೆಂಬ ಶಂಕೆ ಇದೆ. 3 ವರ್ಷದ ಹಿಂದೆಯೇ ಮನೆಯಲ್ಲಿ ಮೃತಪಟ್ಟಿರಬಹುದು ಎಂದು ಮೃತರ ಸಾವಿನ ಬಗ್ಗೆ ಅನುಮಾನ ಇದೆ ಎಂದು ದೂರಿನಲ್ಲಿ ತಿಳಿಸಿದ್ದರು.

ಈ ಸಂಬಂಧ ಎಸ್‌ಪಿ ಧರ್ಮೇಂದರ್ ಕುಮಾರ್, ಡಿವೈಎಸ್ಪಿ ಅನಿಲ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ 4 ವರ್ಷದ ಹಿಂದಿನ ಡೆತ್‍ನೋಟ್ ಈ ಐವರ ಸಾವಿನ ಸುಳಿವನ್ನು ಕೊಟ್ಟಿತ್ತು. ಸಾವಿಗೂ ಮುನ್ನ ಈ ಐವರು ಡೆತ್‍ನೋಡ್ ಬರೆದಿಟ್ಟಿದ್ದು, ಅದರಲ್ಲಿ ಕಾರಣವನ್ನು ತಿಳಿಸಿದ್ದಾರೆ. ಜೈಲು ಪಾಲಾಗಿದ್ದಕ್ಕೆ ಮನನೊಂದು ಐವರು ಸಾವಿಗೆ ಶರಣಾಗಿರುವುದು ಬಯಲಾಗಿತ್ತು.

ಊಹಾಪೋಹದ
ಗೊಂದಲಮಯ ಡೆತ್ ನೋಟ್ :
ಕೆಲವರು ಹೇಳುವಂತೆ
ಮೃತ ಜಗನ್ನಾಥರೆಡ್ಡಿ ಪುತ್ರ ನರೇಂದ್ರರೆಡ್ಡಿ ವಿರುದ್ಧ ದರೋಡೆ ಪ್ರಕರಣ ದಾಖಲಾಗಿತ್ತು. 2013 ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ನರೇಂದ್ರ ರೆಡ್ಡಿ ಎಂಜಿನಿಯರ್ ಆಗಿದ್ದರು. ಇದೇ ವರ್ಷ ಬಿಡದಿ ಬಳಿ ಅವರ ವಾಹನವನ್ನು ತಡೆದು ದರೋಡೆ ಕೇಸ್ ದಾಖಲು ಮಾಡಲಾಗಿತ್ತು. ನರೇಂದ್ರ ಅವರು ತಮ್ಮ ಗೆಳೆಯರ ಜೊತೆ ತೆರಳಿ ದರೋಡೆ ಕೇಸಲ್ಲಿ ಭಾಗಿ ಆಗಿದ್ದರು. ಹೀಗಾಗಿ ದರೋಡೆ ಕೇಸಲ್ಲಿ ಕೆಲ ದಿನ ಜೈಲುವಾಸವನ್ನೂ ಅನುಭವಿಸಿದ್ದರು. ನರೇಂದ್ರರೆಡ್ಡಿ ವಿರುದ್ಧದ ಕೇಸಿನಿಂದ ಮನನೊಂದಿದ್ದ ಕುಟುಂಬ 2019ರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಶರಣಾಗಿದ್ದರಂತೆ.

ಆದರೆ, ಕೆಲವರು ಹೇಳುವ ಡೆತ್ ನೋಟ್ ಬೇರೆಯೇ ಇದೆ.
ಡೆತ್‌ನೋಟ್‌ನಲ್ಲಿ ಇಬ್ಬರು ವ್ಯಕ್ತಿಗಳ ಹೆಸರನ್ನು ಕುಟುಂಬ ಉಲ್ಲೇಖಿಸಿದೆ. ಈ ಇಬ್ಬರು ವ್ಯಕ್ತಿಗಳು ನೀಡುತ್ತಿರುವ ಚಿತ್ರಹಿಂಸೆಯಿಂದಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ಬರೆಯಲಾಗಿದೆ.

ಜಮೀನು ಪ್ರಕರಣದ ವಿಚಾರಣೆ ವೇಳೆ ಇಬ್ಬರು ವ್ಯಕ್ತಿಗಳು ನಮಗೆ ಹಿಂಸೆ ನೀಡುತ್ತಿದ್ದಾರೆ. ಅವರಿಂದಲೇ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಈ ವ್ಯಕ್ತಿಗಳ ಹೆಸರನ್ನು ಪೊಲೀಸರು ಬಹಿರಂಗಗೊಳಿಸಿಲ್ಲ. ಡೆತ್‌ನೋಟ್‌ನಲ್ಲಿಯೂ ಸಾಕಷ್ಟು ಅನುಮಾನಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಇಬ್ಬರು ವ್ಯಕ್ತಿಗಳನ್ನು ಹುಡುಕಿ ವಿಚಾರಣೆ ನಡೆಸುವ ಬಗ್ಗೆ ಪೊಲೀಸರು ಗಮನಹರಿಸಿದ್ದಾರೆ ಎನ್ನಲಾಗಿದೆ.