ಬೆಂಗಳೂರು
“ಕನ್ನಡ ನಾಮಫಲಕ ಕಡ್ಡಾಯ ಸುಗ್ರೀವಾಜ್ಞೆ ವಾಪಸು ಕಳುಹಿಸಿರುವ ರಾಜ್ಯಪಾಲರು ಈ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.

ಕನ್ನಡ ನಾಮಫಲಕ ಕಡ್ಡಾಯ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಮಾಡದೆ ವಾಪಸ್ ಕಳುಹಿಸಿರುವ ವಿಚಾರವಾಗಿ ಮಾಧ್ಯಮದವರು ವಿಧಾನಸೌಧದ ಬಳಿ ಬುಧವಾರ ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದರು:

“ಕನ್ನಡ ಭಾಷೆಯು ಭಾವಾನಾತ್ಮಕ ವಿಚಾರ. ಕರ್ನಾಟಕದಲ್ಲಿ ಇದ್ದೀರಿ, ನಮ್ಮ ರಾಜ್ಯಪಾಲರಾಗಿದ್ದೀರಿ. ಸರ್ಕಾರದ ಇಂತಹ ನೀತಿಯಲ್ಲಿ ತಪ್ಪು ಕಂಡು ಹಿಡಿಯಬಾರದು. ನಾಗರಿಕರು, ಇತರೇ ಪಕ್ಷದವರು ಈ ವಿಚಾರದಲ್ಲಿ ತಪ್ಪುಗಳಿವೆ ಎಂದು ಅವರ ಗಮನಕ್ಕೆ ತಂದಿದ್ದಾರೆಯೇ? ಯಾರೂ ಆಕ್ಷೇಪ ಸಲ್ಲಿಸಿಲ್ಲ. ಆದ ಕಾರಣ ಮತ್ತೊಮ್ಮೆ ಆದೇಶ ಪರಿಶೀಲಿಸುವಂತೆ ಸರ್ಕಾರದ ಪರವಾಗಿ ರಾಜ್ಯಪಾಲರಲ್ಲಿ ಮನವಿ ಮಾಡುತ್ತೇನೆ.

ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಇರಬೇಕು ಎಂದು ಹೊರಡಿಸಿದ್ದ ಸುಗ್ರಿವಾಜ್ಞೆಯನ್ನು ರಾಜ್ಯಪಾಲರು ಸಹಿ ಹಾಕದೆ ಏಕೆ ವಾಪಸ್ಸು ಕಳುಹಿಸಿದ್ದಾರೆ ಎಂಬುದು ತಿಳಿದಿಲ್ಲ. ರಾಜ್ಯಪಾಲರು ವಿಧಾನಸಭೆ ಅಧಿವೇಶನ ನಡೆಯುವ ತನಕ ಕಾಯಬಾರದಿತ್ತು. ಈಗಲೇ ಸಹಿ ಮಾಡಬಹುದಿತ್ತು.

ದೇಶದ ರಕ್ಷಣೆಯ ವಿಚಾರದಲ್ಲಿ ನಮ್ಮ ಸರ್ಕಾರಗಳು ಬದ್ದವಾಗಿರುವಂತೆ, ರಾಜ್ಯದ ಗೌರವದ ವಿಚಾರದಲ್ಲೂ ನಾವು ಬದ್ದವಾಗಿದ್ದೇವೆ. ನಾಮ ಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಇರಬೇಕು ಎಂದು ಸುಗ್ರಿವಾಜ್ಞೆ ಹೊರಡಿಸಲಾಗಿತ್ತು. ಕನ್ನಡ ಭಾಷೆ, ಅಸ್ಮಿತೆ ಮತ್ತು ಸಂಸ್ಕೃತಿ ರಕ್ಷಣೆ ಎಂದು ಇದನ್ನು ಕರೆಯುತ್ತೇವೆ.

ಕನ್ನಡದ ವಿಚಾರವಾಗಿ ಪ್ರತಿಭಟನೆ, ಹೋರಾಟಗಳು ನಡೆಯುತ್ತಿದ್ದವು. ಇದನ್ನು ಗಮನದಲ್ಲಿ ಇಟ್ಟುಕೊಂಡು ನಾವು ಕನ್ನಡಪರ ತೀರ್ಮಾನ ತೆಗೆದುಕೊಂಡಿದ್ದೆವು.

*ಅಧಿವೇಶನದಲ್ಲಿ ಮಂಡನೆ:*

“ನಾಮಫಲಗಳಲ್ಲಿ ಶೇ. 60 ಕನ್ನಡ ಇರಬೇಕು ಎನ್ನುವ ವಿಧೇಯಕವನ್ನು ವಿಧಾನಸಭೆ ಅಧಿವೇಶನಲ್ಲಿ ಮಂಡಿಸಿ ಜಾರಿಗೆ ತರುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಇನ್ನು 10-15 ದಿನಗಳಲ್ಲಿ ಅಧಿವೇಶನ ಆರಂಭವಾಗಲಿದ್ದು, ಈ ವಿಧೇಯಕ ಮಂಡನೆಯಾಗಲಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

*ಬಿಜೆಪಿ ಅಪಪ್ರಚಾರದ ಬಗ್ಗೆ ಬಾಲಕೃಷ್ಣ ಹೇಳಿಕೆ:*

ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನಗಳು ಕಾಂಗ್ರೆಸ್ ಗೆಲ್ಲದಿದ್ದರೆ ಗ್ಯಾರಂಟಿಗಳನ್ನು ನಿಲ್ಲಿಸಲಾಗುವುದು ಎಂಬ ಮಾಗಡಿ ಶಾಸಕ ಬಾಲಕೃಷ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಬಾಲಕೃಷ್ಣ ಅವರು ಈ ರೀತಿ ಹೇಳಿಕೆ ಕೊಟ್ಟಿಲ್ಲ. ಲೋಕಸಭೆ ನಂತರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂಬುದನ್ನು ಮಾತ್ರ ಹೇಳಿದ್ದಾರೆ”.

ಶಾಸಕ ಬಾಲಕೃಷ್ಣ ಹೇಳಿಕೆ ರಾಜ್ಯದ ಜನರಿಗೆ ಅವಮಾನ ಮಾಡಿದಂತೆ ಎನ್ನುವ ವಿಜಯೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಬಿಜೆಪಿಯವರಿಗೆ ಉತ್ತರ ನೀಡಲು ನಾನು ತಯಾರಿಲ್ಲ” ಎಂದರು.

*ಮಂಗಳೂರಲ್ಲಿ ಫೆ.17 ರಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ*

ಮಂಗಳೂರಿನಲ್ಲಿ ಫೆ.17 ರಂದು ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ. ಎಲ್ಲಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.