ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಬೀಳ್ಕೊಡುಗೆ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸುದೀರ್ಘ ಹದಿನೈದು ವರ್ಷಗಳ ಕಾಲ ಸ್ಥಾಪಕ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಅಮರೇಶ್ ಹೆಗ್ಡೆ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ , ಗೌರವಿಸಿ ಬೀಳ್ಕೊಡಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ಪ್ರಾಂಶುಪಾಲ ಅಮರೇಶ್ ಹೆಗ್ಡೆ ಅವರು ಸ್ಥಾಪಕ ಪ್ರಾಂಶುಪಾಲರಾಗಿ ಕೆಲಸ ಮಾಡುವುದು ಬಹಳ ಕಠಿಣ . ಎಲ್ಲ ವ್ಯವಸ್ಥೆಯನ್ನು ಹೊಸದಾಗಿ ಮಾಡಬೇಕಾದರೆ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಉಪನ್ಯಾಸಕರ ನಿಯುಕ್ತಿ , ವಿದ್ಯಾರ್ಥಿಗಳ ದಾಖಲಾತಿ ಎಲ್ಲವೂ ಸವಾಲಿನ ಕೆಲಸ . ಎಲ್ಲ ವಿಭಾಗಗಳಲ್ಲೂ ಆಡಳಿತ ಮಂಡಳಿ , ಸದಾ ಪ್ರೋತ್ಸಾಹ ನೀಡಿತು. ಅವರ ಪ್ರೋತ್ಸಾಹ ಮತ್ತು ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದ ದವರ ಸಹಕಾರದಿಂದ ಈ ಸಂಸ್ಥೆಯನ್ನು ಇಷ್ಟೊಂದು ಎತ್ತರಕ್ಕೆ ಬೆಳೆಸಲು ಸಾದ್ಯವಾಯಿತು. ಆಡಳಿತ ಮಂಡಳಿಗೆ ತಾನು ಸದಾ ಚಿರಋಣಿ ಎಂದರು.
ಅಮೃತ ಭಾರತಿ ಟ್ರಸ್ಟ್ ಹಾಗೂ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿ ಗಳು ಪ್ರಾಂಶುಪಾಲರ ಕರ್ತವ್ಯವನ್ನು ಶ್ಲಾಘಿಸಿ , ಅಭಿನಂದಿಸಿ ಶುಭ ಹಾರೈಸಿದರು.
PHD ಪದವಿ ಪಡೆದ ರಸಾಯನ ಶಾಸ್ತ್ರ ಉಪನ್ಯಾಸಕಿ ಡಾ/ ಪ್ರಿಯಾಂಕಾ ಮಹೇಶ್ ಅವರನ್ನು ಸನ್ಮಾನಿಸಲಾಯಿತು.

ನೂತನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಪ್ರಕಾಶ್ ಜೋಗಿ ಅವರು ಮಾತನಾಡಿ , ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಯಶಸ್ಸಿನ ಗುಟ್ಟು. ಸ್ಥಾಪಕ ಪ್ರಾಂಶುಪಾಲರು ಈ ಸಂಸ್ಥೆ ಯನ್ನು ಬಹಳ ಚೆನ್ನಾಗಿ ಬೆಳೆಸಿದ್ದಾರೆ. ಅದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾದ ರಾಜೇಶ್ ನಾಯಕ್ ರವರು ಮಾತನಾಡಿ , ಹೆಬ್ರಿಯ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಎನ್ನುವ ದೃಷ್ಟಿಯಿಂದ ಪದವಿಪೂರ್ವ ಕಾಲೇಜನ್ನು ಆರಂಭಿಸುವ ಕನಸನ್ನು ಹೊತ್ತು ಹೊರಟ ನಮಗೆ ಕಾಲೇಜನ್ನು ಮುನ್ನಡೆಸಲು ಒಬ್ಬ ಉತ್ತಮ ಪ್ರಾಂಶುಪಾಲರ ಅವಶ್ಯಕತೆಯನ್ನು ಮನಗಂಡು ಹೊರಟಾಗ ಅಮರೇಶ್ ಹೆಗ್ಡೆ ಯವರು ಅದಕ್ಕೆ ಸೂಕ್ತ ವ್ಯಕ್ತಿ ಎನ್ನುವುದು ತಿಳಿಯಿತು ಅವರನ್ನು ಆಯ್ಕೆ ಮಾಡಿ ಕಾಲೇಜಿನ ಆರಂಭಕ್ಕೆ ಬುನಾದಿಯನ್ನು ಹಾಕಿದೆವು. ನಮ್ಮ ನಿರೀಕ್ಷೆಗೂ ಮೀರಿ ತನ್ನೆಲ್ಲ ಶ್ರಮವನ್ನು ಹಾಕಿ , ಈ ಸಂಸ್ಥೆಯನ್ನು ಬಹಳ ಚೆನ್ನಾಗಿ ಮುನ್ನಡೆಸಿ , ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದರು. ಅಮೃತ ಭಾರತಿ ಸದಾ ಅವರ ಸೇವೆಯನ್ನು ಸ್ಮರಿಸಿಕೊಳ್ಳುತ್ತದೆ. ಅವರು ಮುಂದೆಯೂ ಕೂಡ ಅಮೃತ ಭಾರತಿ ಪರಿವಾರದ ಸದಸ್ಯ ರಾಗಿಯೇ ಮುಂದುವರೆಯುತ್ತಾರೆ ಎಂದರು.
ವೇದಿಕೆಯಲ್ಲಿ ಅಮೃತಅಮೃತ ಭಾರತಿ ಟ್ರಸ್ಟ್ ನ ಅಧ್ಯಕ್ಷರಾದ ಸಿಎ ಎಂ. ರವಿ ರಾವ್, ಸ್ಥಾಪಕ ಅಧ್ಯಕ್ಷ ರಾದ ಸತೀಶ್ ಪೈ , ಕಾರ್ಯದರ್ಶಿ ಗುರುದಾಸ್ ಶೆಣೈ , ಟ್ರಸ್ಟಿಗಳಾದ ಬಾಲಕೃಷ್ಣ ಮಲ್ಯ , ಭಾಸ್ಕರ್ ಜೋಯಿಸ್,ಯೋಗೀಶ್ ಭಟ್ , ಲಕ್ಷ್ಮಣ್ ಭಟ್, ಹಾಸ್ಟೆಲ್ ಕಮಿಟಿ ಸದಸ್ಯರಾದ ರಾಮಕೃಷ್ಣ ಆಚಾರ್ಯ, ಡಾ. ಭಾರ್ಗವಿ ಐತಾಳ್, ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.
ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕನ್ನಡ ಉಪನ್ಯಾಸಕ ವೀಣೇಶ್ ಅಮೀನ್ ಪ್ರಶಸ್ತಿ ಪತ್ರ ವಾಚಿಸಿದರು. ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು.