ಮಂಗಳೂರು: ಕಳೆದ ಮೂರು ದಶಕಗಳಿಂದ ನಗರದ ಕೆ. ಎಸ್. ರಾವ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿದ್ದ ಇಂಡಿಯನ್ ಬ್ಯಾಂಕ್ ಮುಖ್ಯ ಶಾಖೆಯು ಆಧುನಿಕ ಸೌಕರ್ಯಗಳಿರುವ ಮತ್ತು ಸರ್ವ ಸುಸಜ್ಜಿತವಾದ ಪಾಂಡೇಶ್ವರದ ಕೆ 2 ಹ್ಯಾಬಿಟಾಟ್ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ನೂತನ ಸ್ಥಳಾಂತರಿತ ಶಾಖೆಯನ್ನು ಪ್ರಸಿದ್ಧ ಸಾಹಿತಿ ಹಾಗೂ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ ಅವರು ದಿನಾಂಕ 13 ಮಂಗಳವಾರದಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್ ನ ಜನಸ್ನೇಹಿ ವ್ಯವಹಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ವಾಣಿಜ್ಯನಗರಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಮುಂಬರುವ ದಿನಗಳಲ್ಲಿ ಬ್ಯಾಂಕ್ ಇನ್ನೂ ಉತ್ತಮ ಸೇವೆ ನೀಡುವಂತಾಗಲಿ ಎಂದರು.

ಕಾರ್ಕಳ ಶಾಖೆಯ ಅಧಿಕಾರಿ ಆನಿ ಜೈಸನ್ ಸ್ವಾಗತಿಸಿದರು. ಮ್ಯಾನೇಜರ್ ಮೊಹಮ್ಮದ್ ಸನಾವುಲ್ಲ ಪ್ರಾಸ್ತಾವಿಕವಾಗಿ ಮಾತಾಡಿದರು. ಸರಿತಾ ನಿರೂಪಿಸಿದರು. ಹಿರಿಯ ಅಧಿಕಾರಿ ದಿನೇಶ್ ಪೈ ಕಾಸರಗೋಡು ವಂದನಾರ್ಪಣೆ ಮಾಡಿದರು. ಬ್ಯಾಂಕ್ ನ ಸಿಬ್ಬಂದಿ ವರ್ಗದವರು ಹಾಗೂ ಅಧಿಕ ಸಂಖ್ಯೆಯ ಗ್ರಾಹಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.