ಬೆಳಗಾವಿ: ಮಾ.27 ಬುಧವಾರದಂದು ಬೆಳಿಗ್ಗೆ 10 ಘಂಟೆಗೆ ಮಾಜಿ ಮುಖ್ಯಮಂತ್ರಿ, ಬೆಳಗಾವಿ ಲೋಕಸಭಾ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹಿರೇಬಾಗೇವಾಡಿ ಟೋಲ್ ಮೂಲಕ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಆಗಮಿಸಲಿದ್ದು ಸಾವಿರಾರು ಬಿಜೆಪಿ ಕಾರ್ಯಕರ್ತರು ಅವರಿಗೆ ಬೃಹತ್ ಸ್ವಾಗತ ಕೋರಲಿದ್ದಾರೆ ಎಂದು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸುಭಾಷ್ ಪಾಟೀಲ ಹಾಗೂ ನಗರ ಅಧ್ಯಕ್ಷೆ ಗೀತಾ ಸುತಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಅವರು, ಬೆಳಿಗ್ಗೆ 10 ಗಂಟೆಗೆ ಹಿರೇಬಾಗೇವಾಡಿ ಟೋಲ್ ಮೂಲಕ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಆಗಮಿಸಿ 10.30ಕ್ಕೆ ಕಿಲ್ಲಾ ದುರ್ಗಾದೇವಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ, ನಂತರ ಸಾವಿರಾರು ಬೈಕ್ ಸವಾರರು ಅವರಿಗೆ ಸಾಥ್ ನೀಡಲಿದ್ದು ಅಲ್ಲಿಂದ ಕೋರ್ಟ್ ಆವರಣದಲ್ಲಿರುವ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ, ರಾಣಿ ಚನ್ನಮ್ಮ ವೃತ್ತದಲ್ಲಿರುವ ಚನ್ನಮ್ಮನ ಮೂರ್ತಿಗೆ, ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ, ಗಣಪತಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧರ್ಮವೀರ ಸಂಭಾಜಿ ವೃತ್ತದಲ್ಲಿ ಮೂರ್ತಿಗೆ ಮಾಲಾರ್ಪಣೆ, ಕಪಿಲೇಶ್ವರ ಮೇಲ್ಸೇತುವೆ ಮಾರ್ಗವಾಗಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ, ಮಹಾತ್ಮಾ ಪುಲೆ‌ ಮಾರ್ಗವಾಗಿ ಗೋವಾವೆಸ್ ದಲ್ಲಿರುವ ಜಗಜ್ಯೋತಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ನಡೆಸಿ ಸದಾಶಿವ ನಗರದಲ್ಲಿರುವ ಮಹಾನಗರದ ಕಚೇರಿಯವರೆಗೆ ಬೈಕ್ ರ್ಯಾಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.