ಬೆಂಗಳೂರು: ನಗರದಲ್ಲಿ ಫೆಬ್ರವರಿ 25 ರ ಭಾನುವಾರ ನಡೆಯಲಿರುವ “ನಮ್ಮ ಕರಾವಳಿ ಉತ್ಸವ”ದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್​ನಲ್ಲಿ ನಡೆದ ಕಾರ್ಯಕ್ರಮದ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಕರಾವಳಿ ಒಕ್ಕೂಟ ಬೆಂಗಳೂರಿನ ಅಧ್ಯಕ್ಷ ಕೆ. ಸುಬ್ರಾಯ ಭಟ್ ಈ ಕುರಿತು ಮಾಹಿತಿ ನೀಡಿದಿರು. ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಕರಾವಳಿಯ ಸಂಸ್ಕತಿ, ಆಹಾರ ವೈವಿಧ್ಯ, ಕಲೆಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಬೆಂಗಳೂರಿನ ಜೆ.ಪಿ ನಗರದ ಆರ್​ಬಿಐ ಲೇಔಟ್​ನ ಬಿಬಿಎಂಪಿ ಆಟದ ಮೈದಾನದಲ್ಲಿ ನಮ್ಮ ಕರಾವಳಿ ಉತ್ಸವ ನಡೆಯಲಿದೆ. ಕರಾವಳಿಗರ ಒಕ್ಕೂಟ )ಬೆಂಗಳೂರು ನೇತೃತ್ವದಲ್ಲಿ ಬೃಹತ್​ ಸಮಾರಂಭ ಆಯೋಜನೆಗೊಂಡಿದೆ. ಈ ಉತ್ಸವದಲ್ಲಿ ಕರಾವಳಿಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಮನು ಹಂದಾಡಿಯವರಿಂದ ನಗೆ ಹಬ್ಬ, ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಮೂಡಬಿದ್ರೆ ಅವರಿಂದ ನಗೆ ಬುಗ್ಗೆ, ಅಂಭಾಭವಾನಿ ಮರಾಠಿ ಸಾಂಸ್ಕೃತಿಕ ಕಲಾ ವೇದಿಕೆ (ರಿ) ಪರ್ಕಳ ಇವರಿಂದ ಕರಾವಳಿ ಕಲಾ ವೈಭವ, ಹುಲಿ ಕುಣಿತ, ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು ಮಂದಾರ್ತಿ ಇವರಿಂದ ಶಿವದೂತ ಪಂಜುರ್ಲಿ ಯಕ್ಷಗಾನ, ಕರಾವಳಿಯ ಹುಲಿವೇಷ, ಗ್ರಾಮೀಣ ಕ್ರೀಡೆಗಳಾದ ಹಗ್ಗ ಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ, ಚುಕ್ಕಿ ರಂಗೋಲಿ, ಚಿತ್ರಕಲೆ, ಕೊಟ್ಟೆ ಕಟ್ಟುವ ಸ್ಪರ್ಧೆ ಹಾಗೂ ಇನ್ನೂ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕರಾವಳಿಯ ಸ್ವಾದಿಷ್ಟ ಖಾದ್ಯಗಳು ಮೇಳದಲ್ಲಿ ಅನಾವರಣಗೊಳ್ಳಲಿವೆ. ವಿಶೇಷ ತಿಂಡಿ ತಿನಿಸುಗಳು ಜನರನ್ನು ಆಕರ್ಷಿಸಲಿವೆ. ಸುಮಾರು ಜನಪ್ರಿಯ ನಟ ನಟಿಯರು, ಪ್ರಮುಖ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ‌ ಎಂದು ತಿಳಿಸಿದರು.

ಕರಾವಳಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚರಣ್ ಬೈಂದೂರ್ ಮಾತನಾಡಿ, ಕಾಸರಗೋಡಿನಿಂದ ಹಿಡಿದು ಕಾರವಾರದವರೆಗಿನ ಕರಾವಳಿಗರನ್ನು ಸೇರಿಸಿಕೊಂಡು ಕರಾವಳಿ ಉತ್ಸವ ಮಾಡುತ್ತಿದ್ದೆವೆ. ಕರಾವಳಿ ಕಂಪನ್ನು ಎಲ್ಲೆಡೆ ಪಸರಿಸಬೇಕು ಎಂಬುದೇ ಇದರ ಉದ್ದೇಶ ಎಂದು ಹೇಳಿದ್ದಾರೆ.

ಭೂತಾರಾಧನೆ, ಹುಲಿ ಕುಣಿತ,ಯಕ್ಷಗಾನ, ಅಹಾರ, ಆಚಾರ ವಿಚಾರವನ್ನು ಬೆಂಗಳೂರಿನ ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಹಾಗೇ ಬೆಳಗ್ಗೆ 9 ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ರಾತ್ರಿಯವರೆಗೂ ಕಾರ್ಯಕ್ರಮ ನಡೆಯಲಿದೆ. ಒಕ್ಕೂಟದ ಉಪಾಧ್ಯಕ್ಷ ಬಿ.ಆರ್. ದೇವಾಡಿಗ, ಮಂಜುನಾಥ್ ಸಿ, ಸಂಘಟನಾ ಕಾರ್ಯದರ್ಶಿ ಸುರೇಶ್ ಪೈ ಸೇರಿ ಹಲವರು ಉಪಸ್ಥಿತರಿದ್ದರು.