ಬೆಳಗಾವಿ : ಕಿತ್ತೂರು
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ದಿ.ಡಿ.ಬಿ.ಇನಾಮದಾರ ಅವರ ಸೊಸೆ ಲಕ್ಷ್ಮೀ ವಿಕ್ರಮ ಇನಾಮದಾರ ಸೋಮವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಬಾಗಲಕೋಟೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಬಿಜೆಪಿ ಕಿತ್ತೂರು ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲಿ ಸೇರ್ಪಡೆಗೊಂಡಿದ್ದಾರೆ.

ಲಕ್ಷ್ಮೀ ಇನಾಮದಾರ ಮಾತನಾಡಿ, ನಮ್ಮ ಮಾವನವರಾದ ಡಿ.ಬಿ.ಇನಾಮದಾರ ಅವರು, ಐದು ಸಲ ಶಾಸಕರಾಗಿ, ಸಚಿವರಾಗಿ ಮಹತ್ತರ ಖಾತೆಗಳನ್ನು
ನಿಭಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ಇನಾಮದಾರ ಕುಟುಂಬ 40 ವರ್ಷಗಳ ಕಾಲ ದುಡಿದಿದೆ. ಕ್ಷೇತ್ರದ ಜನರ ಪ್ರೀತಿ-ವಿಶ್ವಾಸ ಗಳಿಸಿದೆ. ಆದರೆ, ಕಾಂಗ್ರೆಸ್ ಪಕ್ಷ ತಮ್ಮ ಕುಟುಂಬ ಮತ್ತು ಇನಾಮದಾರ ಅಭಿಮಾನಿಗಳನ್ನು ಕಡೆಗಣಿಸಿದೆ. ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಜನ ಬೇಸತ್ತಿದ್ದು, ಜನ ಮೋದಿ ಆಡಳಿತವನ್ನೆ ಬಯಸಿದ್ದಾರೆ. ಹಾಗಾಗಿಯೇ ನಾವು ಬಿಜೆಪಿ ತತ್ವ ಸಿದ್ದಾಂತ, ನರೇಂದ್ರ ಮೋದಿ ಅವರ ಆದರ್ಶ, ದೇಶದ ಅಭಿವೃದ್ಧಿ ಮತ್ತು ಭದ್ರತೆ ಮೆಚ್ಚಿ
ಬಿಜೆಪಿ ಸೇರಿದ್ದೇವೆ. ಮೇ.4ರಂದು ಕಿತ್ತೂರಿನಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸುವುದಾಗಿ ತಿಳಿಸಿದ್ದಾರೆ. ಕಿತ್ತೂರು ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಮತ್ತಷ್ಟು ಸಂಘಟಿಸಿ, ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸುವುದಾಗಿ ಹೇಳಿದರು.