ಬೆಂಗಳೂರು :
ಕರ್ನಾಟಕದಲ್ಲಿ ತುಳು ಭಾಷೆಗೆ ಹೆಚ್ಚುವರಿ ಭಾಷೆಯ ಸ್ಥಾನಮಾನ ದೊರಕಬೇಕೆಂದು ಕೋರಿಕೆಯಿದ್ದು ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಬೆಂಗಳೂರು ಕಂಬಳ ಸಮಿತಿ ಇವರ ವತಿಯಿಂದ ಬೆಂಗಳೂರಿನ ಅರಮನೆ ಮೈದಾನ ದಲ್ಲಿ ಆಯೋಜಿಸಿರುವ ಕಂಬಳ ಉತ್ಸವ ಹಾಗೂ ತುಳುನಾಡಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಂಬಳ ಕರಾವಳಿ ಭಾಗದ ಜನಪ್ರಿಯ ಕ್ರೀಡೆ. ಮಂಗಳೂರು, ಉಡುಪಿ ಜಿಲ್ಲೆಗಳ ಜಾನಪದ ಕ್ರೀಡೆ. ಅಶೋಕ್ ರೈ ಅವರ ನೇತೃತ್ವದಲ್ಲಿ ಕರಾವಳಿ ಪ್ರದೇಶದ ಜಾನಪದ ಕ್ರೀಡೆಯನ್ನು ಬೆಂಗಳೂರು ನಗರಕ್ಕೆ ಪರಿಚಯಿಸುವುದು ನಿಜಕ್ಕೂ ಶ್ಲಾಘನೀಯ ಎಂದರು.

*ಕ್ರೀಡೆ ಪ್ರೋತ್ಸಾಹಿಸುವ ಅವಕಾಶ*
ಕಂಬಳ ನೋಡಲು ಇಷ್ಟು ಜನರು ಆಗಮಿಸುವ ನಿರೀಕ್ಷೆ ಇರಲಿಲ್ಲ. ಕಂಬಳ ಕರಾವಳಿ ಪ್ರದೇಶದ ಕ್ರೀಡೆಯಾದಾರೂ ಬೆಂಗಳೂರಿನಲ್ಲಿ ಲಕ್ಷಾಂತರ ಜನ ಕರಾವಳಿ ಪ್ರದೇಶದವರು ವಾಸಿಸುತ್ತಿದ್ದು ಕ್ರೀಡೆ ಅವರಿಗೆ ಮಾತ್ರವಲ್ಲದೇ ಬೆಂಗಳೂರಿನ ಜನ ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಜನ ಬಂದು ನೋಡುವ , ಪ್ರೋತ್ಸಾಹಿಸುವ ಅವಕಾಶ ದೊರೆತಿದೆ ಎಂದರು.

ಹಿಂದೊಮ್ಮೆ ಉಡುಪಿ ಹಾಗೂ ಬಂಟ್ವಾಳ ಭಾಗದಲ್ಲಿ ಕಂಬಳ ಉದ್ಘಾಟಿಸಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು. ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ಜನರ ಕಲೆಯನ್ನು ಬಹಳ ಜನ ಮೈಗೂಡಿಸಿಕೊಂಡಿದ್ದಾರೆ. ಬಹಳ ಜನ ಇದಕ್ಕೆ ಪ್ರೋತ್ಸಾಹ ನೀಡುತ್ತಾರೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆ ಇದ್ದಂತೆ ಕಂಬಳದಲ್ಲಿ ಕೋಣಗಳಿಗೆ ನೊಗ ಹಾಕಿ ಓಡಿಸುತ್ತಾರೆ ಎಂದರು.

*ಮನರಂಜನೆಯ ಕ್ರೀಡೆ*
ಕೋಣಗಳನ್ನು ಸಾಕುವುದು ಬಹಳ ಕಷ್ಟದ ಕೆಲಸ. ಕೋಣ ಸಾಕಲು ಒಂದು ವರ್ಷಕ್ಕೆ 15 ಲಕ್ಷದವರೆಗೆ ವೆಚ್ಚವಾಗುತ್ತದೆ. ತಿಂಗಳಿಗೆ 1 ಲಕ್ಷಕ್ಕಿಂತ ಹೆಚ್ಚಾಗುತ್ತದೆ. ನವೆಂಬರ್, ಡಿಸೆಂಬರ್, ಫೆಬ್ರವರಿ ಮಾರ್ಚ್ ತಿಂಗಳುಗಳಲ್ಲಿ ವ್ಯವಸಾಯ ಇಲ್ಲದಿದ್ದಾಗ ಜನ ಜಾನುವಾರುಗಳ ಉತ್ಸವ ಮಾಡಿ ಮನರಂಜನೆ ಪಡೆಯುತ್ತಿದ್ದರು. ಗದ್ದೆಗಳಲ್ಲಿ ಮಣ್ಣನ್ನು ಹದಗೊಳಿಸಿ ಕಂಬಳ ಆಡಿಸುತ್ತಿದ್ದರು. ಕೋಣಗಳನ್ನು ಓಡುವವರಿಗೆ ಅಭ್ಯಾಸವಿರಬೇಕು. ಕ್ರೀಡಾಪಟುವಾಗಿದ್ದರೆ ಮಾತ್ರ ಕೋಣಗಳ ಜೊತೆಗೆ ಓಡಲು ಸಾಧ್ಯ. ಜನಪ್ರಿಯ ಕ್ರೀಡೆ ಕಂಬಳವನ್ನು ಬೆಂಗಳೂರಿನಲ್ಲಿ ಪ್ರತಿ ವರ್ಷ ಮುಂದುವರೆಸುವಂತಾಗಬೇಕು. ನವೆಂಬರ್, ಡಿಸೆಂಬರ್ ನಲ್ಲಿ ಆಯೋಜಿಸಿದರೆ ಜನ ನೋಡುತ್ತಾರೆ. ಇದೊಂದು ಮನರಂಜನೆಯ ಕ್ರೀಡೆ ಯಾಗುತ್ತದೆ ಎಂದು ಮುಖ್ಯಮಂತ್ರಿ ಗಳು ಅಭಿಪ್ರಾಯಪಟ್ಟರು.

ಜಲ್ಲಿಕಟ್ಟು, ಕಂಬಳ ನಡೆಸಬಾರದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದಕ್ಕೆ ಸುಗ್ರೀವಾಜ್ಞೆ ಹೊರಡಿಸಿ ಜನಪ್ರಿಯ ಕ್ರೀಡೆ ಉಳಿಸುವ ಕೆಲಸವಾಗಿದೆ. ಇದನ್ನು ಬೆಳಸಬೇಕು ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಮುದಾಯ ಭವನಕ್ಕಾಗಿ ನಿವೇಶನ ಕೋರಿದ್ದು ,ಇದಕ್ಕೆ ಪ್ರಯತ್ನ ಮಾಡಲಾಗುವುದು ಎಂದರು.

 

ಕಂಬಳದ ವೈಭವವನ್ನೂ ಕಣ್ತುಂಬಿಕೊಂಡ ಅವರು ಪ್ರತಿ ವರ್ಷವೂ ಬೆಂಗಳೂರಿನಲ್ಲಿ ಕಂಬಳ ನಡೆಸಿ ಎಂದು ಸೂಚಿಸಿದರು. ಅದರ ನಡುವೆ ಒಂದು ಕೋಣ ಸಾಕಲು 15 ಲಕ್ಷ ರೂ. ಬೇಕಾ ಎಂದು ಅಚ್ಚರಿ ವ್ಯಕ್ತಪಡಿಸಿದರು.

 

ಇಷ್ಟೊಂದು ಜನ ಬರುತ್ತಾರೆ ಅಂದುಕೊಂಡಿರಲಿಲ್ಲ
ಅಶೋಕ್ ರೈ, ಗುರುಕಿರಣ್ ಸ್ನೇಹಿತರು ಬಂದಾಗ ಇಷ್ಟೊಂದು ಜನ ಕಂಬಳ ನೋಡಲು ಬರ್ತಾರೆ ಅಂತ ತಿಳಿದಿರಲಿಲ್ಲ. ನಾನು ಅವರಿಗೆ ಹೇಳಿದೆ, ಕಂಬಳ ಕರಾವಳಿ ಪ್ರದೇಶದ ಕ್ರೀಡೆ. ಜಾನಪದ ಕಲೆಯನ್ನು ಬೆಂಗಳೂರಿನಲ್ಲಿ ಯಾಕೆ ಮಾಡ್ತಿದ್ದಿರಿ ಅಂತ. ಆಗ ಅಶೋಕ್ ರೈ ಹೇಳಿದ್ರು, ಬೆಂಗಳೂರಿನಲ್ಲಿ ಲಕ್ಷಾಂತರ ಜನರಿದ್ದಾರೆ. ನೀವು ಬನ್ನಿ, ಎಷ್ಟು ಜನರ ಬರ್ತಾರೆ ನೋಡಿ., ಬೆಂಗಳೂರು ಮಾತ್ರವಲ್ಲ, ರಾಜ್ಯದ ಮೂಲೆ ಮೂಲೆಯಿಂದ ಬರ್ತಾರೆ ಅಂದರು. ಇವತ್ತು ನನಗೆ ಬಹಳ ಆಶ್ಚರ್ಯ ಆಯ್ತು. ಬಹಳ ಜನ ಈ ಕ್ರೀಡೆ ನೋಡಲು ಬಂದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ʻʻನಾನು ಹಿಂದೆ ಮೂಡುಬಿದ್ರೆಯಲ್ಲಿ ಕಂಬಳ ಉದ್ಘಾಟನೆ ಮಾಡಿದ್ದೆ. ಬಂಟ್ವಾಳಕ್ಕೂ ಹೋಗಿದ್ದೆʼʼ ಎಂದು ನೆನಪಿಸಿಕೊಂಡರು.

ಕೋಣಕ್ಕೆ ಖರ್ಚೆಷ್ಟು 1.5 ಲಕ್ಷಾನಾ ಎಂದು ಕೇಳಿದ ಸಿಎಂ
ʻʻಈಗ ಕೋಣ ಸಾಕೋದು ಬಹಳ ಕಷ್ಟ. ಒಂದು ಕೋಣ ಸಾಕೋಕೆ ಒಂದುವರೆ ಲಕ್ಷ ರೂ. ಆಗುತ್ತದೆʼʼʼ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಆಗ ಆಯೋಜಕರು, ಒಂದುವರೆ ಲಕ್ಷ ಅಲ್ಲ, 15 ಲಕ್ಷ ರೂ. ಎಂದು ಕರೆಕ್ಷನ್‌ ಹಾಕಿದರು. ಆಗ ಸಿಎಂ ಸಿದ್ದರಾಮಯ್ಯ ಅವರು, ಹೌದಾ, ಶ್ರೀಮಂತರ ಕ್ರೀಡೆ ಆಗೋಯ್ತಲ್ಲಯ್ಯ ಎಂದು ನಕ್ಕರು.

 

ʻʻಕಂಬಳದಲ್ಲಿ ಓಡೋನಿಗೆ ಶಕ್ತಿ ಇರಬೇಕು. ಓಡೋನು ಬಲಿಷ್ಠನಾಗಿದ್ದರೆ ಮಾತ್ರ ಓಡಲು ಸಾಧ್ಯ. ನಾನು ನೋಡ್ತಾ ಇದ್ದ ಹಾಗೇ ಅನೇಕರು ಬಿದ್ದು ಹೋದ್ರುʼʼ ಎಂದು ಹೇಳಿದ ಸಿದ್ದರಾಮಯ್ಯ, ಕಂಬಳ ಕ್ರೀಡೆಯನ್ನು ಇಲ್ಲಿಗೆ ತಂದು ಅನೇಕರು ಸೇರಿ ಮಾಡಿದ್ದೀರಿ. ಪ್ರತಿ ವರ್ಷ ಮುಂದುವರಿಸುವ ಕೆಲಸ ಮಾಡಿ, ಒಂದೇ ಸಾರಿ ಮಾಡಿ ನಿಲ್ಲಿಸಬೇಡಿʼʼ ಎಂದು ಸೂಚಿಸಿದರು.

ʻʻವಿಶೇಷವಾಗಿ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಮಾಡಿʼʼ ಅಂತ ಸೂಚಿಸಿದ ಸಿಎಂ, ಕರಾವಳಿ, ಹೊರಗಿನ ಜನ, ಬೆಂಗಳೂರು ಜನರೂ ಬಂದು ನೋಡ್ತಾರೆ ಎಂದರು.

ನಮ್ಮ ಸರ್ಕಾರದಲ್ಲೇ ಸುಗ್ರೀವಾಜ್ಞೆ ಮಾಡಿದ್ದೆವು
ಸುಪ್ರೀಂಕೋರ್ಟನ್ನು ಜಲ್ಲಿಕಟ್ಟನ್ನು ನಿಷೇಧಿಸಿದ ಸಂದರ್ಭದಲ್ಲಿ ಪ್ರಾಣಿ ದಯಾ ಸಂಘ ಕಂಬಳವನ್ನೂ ಸೇರ್ಪಡೆಗೊಳಿಸಲು ಪಟ್ಟು ಹಿಡಿದು ನಿಷೇಧಿಸಿತ್ತು. ಆಗ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಕಂಬಳಕ್ಕೆ ಬಲ ತುಂಬಿತ್ತು. ಅಂದು ಈ ರೀತಿ ಕಂಬಳವನ್ನು ಬೆಂಬಲಿಸಿದ್ದು ಸಿಎಂ ಸಿದ್ದರಾಮಯ್ಯ ಅವರು. ಕಂಬಳಕ್ಕೆ ಬಂದ ವೇಳೆ ಈ ವಿಚಾರವನ್ನು ಅವರು ನೆನಪು ಮಾಡಿಕೊಂಡರು.

ʻʻಸ್ಪೇನ್ ನಲ್ಲಿ ಗೂಳಿ ಹಿಡಿಯುವ ಕ್ರೀಡೆ ನಡೆಯುತ್ತದೆ. ಇದು ಇದು ಅಷ್ಟೇನೂ ಕೆಟ್ಟ ಕ್ರೀಡೆ ಅಲ್ಲ. ಹಾಗಾಗಿ ಸುಗ್ರೀವಾಜ್ಞೆ ತಂದು ರಕ್ಷಿಸುವ ಕೆಲಸ ಮಾಡಿದ್ದೇನೆʼʼ ಎಂದರು.

ಬೆಂಗಳೂರಿನಲ್ಲಿ ತುಳು ಸಮುದಾಯ ಭವನ ನಿರ್ಮಿಸಲು ಸೈಟ್‌ ನೀಡಲಾಗುವುದು ಎಂದು ಹೇಳಿದ ಅವರು, ತುಳು ಭಾಷೆಗೆ ಮಾನ್ಯತೆ ನೀಡುವ ವಿಚಾರವನ್ನೂ ಪರಿಶೀಲಿಸುವುದಾಗಿ ಹೇಳಿದರು.

 

ʻʻಇಬ್ಬರು ಕರಾವಳಿಯವರು ಸೇರಿದ್ರೆ ಅವರ ಮಾತೃಭಾಷೆ ಮಾತಾಡ್ತಾರೆ. ನಾವು ಕಣ್ಣು ಕಣ್ಣು ಬಿಟ್ಟು ನೋಡಬೇಕು, ಹಾಗಾಗಿದೆ. ಬೇರೆ ಯಾವುದೇ ಭಾಷೆ ಬಂದ್ರೂ ಮಾತಾಡಲ್ಲʼʼ ಎಂದು ಹೇಳಿದ ಸಿದ್ದರಾಮಯ್ಯ, ತುಳುಗೆ ಲಿಪಿ ಇದೆಯಾ ಅಂತ ಕೇಳಿದರು. ಆಗ ಜನರು ಹೌದು ಹೌದು ಎಂದರು.

ತುಳುವಿಗೆ ಮಾನ್ಯತೆ ನೀಡುವ ವಿಚಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಜೊತೆ ಮಾತಾಡ್ತೀನಿ ಎಂದರು ಸಿಎಂ. ಹಿಂದೆ ನಿಮ್ಮವರೇ ಕನ್ನಡ ಸಂಸ್ಕೃತಿ ಸಚಿವರಿದ್ರು, ಅವರು ಮಾಡಲಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ಸುನಿಲ್ ಕುಮಾರ್‌ಗೆ ಟಾಂಗ್ ನೀಡಿದರು. ತುಳುಗೆ ಮಾನ್ಯತೆ ಸಿಗುವಂತೆ ಮಾಡ್ತೀವಿ ಅಂತ ಭರವಸೆ ನೀಡಿದರು.

ಕರಾವಳಿಯ ಚುರುಮುರಿ ಸವಿದ ಸಿದ್ದರಾಮಯ್ಯ
ಈ ನಡುವೆ, ಕರಾವಳಿಯ ಹಿರಿಯ ಮಹಿಳೆಯರು ತಯಾರಿಸಿದ ಚುರುಮುರಿಯನ್ನು ಸಿದ್ದರಾಮಯ್ಯ ಅವರಿಗೆ ನೀಡಲಾಯಿತು. ಮಹಿಳೆಯರು ಸಿಎಂ ಸಿದ್ದರಾಮಯ್ಯ ಅವರಿಗೆ ತಂದು ಕೊಟ್ಟು ಕಾಲಿಗೆ ಬಿದ್ದರು. ಸ್ಪೀಕರ್‌ ಯು.ಟಿ. ಖಾದರ್‌ ಅವರು ಅವರನ್ನೆಲ್ಲ ಪಕ್ಕದಲ್ಲಿ ಕೂರಿಸಿ ಫೋಟೊ ತೆಗೆಸಿದರು.

ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ, ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಮೇಲ್ಮನೆ ಸದಸ್ಯ ಮಂಜುನಾಥ ಭಂಡಾರಿ, ಕಾರ್ಯಾಧ್ಯಕ್ಷ ಗುರುಕಿರಣ್, ರಂಜನ್ ಶೆಟ್ಟಿ, ರಾಜೇಂದ್ರ ಕುಮಾರ್, ಶಂಕುತಲಾ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.