ಬೆಳಗಾವಿ: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆಯನ್ನು ಖಂಡಿಸಿ ಮಹಿಳಾ ಹಿತರಕ್ಷಣಾ ವೇದಿಕೆ ವತಿಯಿಂದ ಇಂದು ಬೆಳಗಾವಿ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸದೆ ಮಂಗಲಾ ಅಂಗಡಿ ತಿಳಿಸಿದರು.

ನಗರದ ಬಿಜೆಪಿ ಮಾಧ್ಯಮ ಕಾರ್ಯಾಲಯದಲ್ಲಿ ಆಯೋಜನೆ ಮಾಡಲಾಗಿದ್ದ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನೇಹಾ ಹಿರೇಮಠ ಕೊಲೆಯನ್ನು ನಾವು ಖಂಡಿಸಿತ್ತೇವೆ.‌ ನೇಹಾ ಕೊಲೆಗೆ ನ್ಯಾಯ ಒದಗಿಸಲು ಪ್ರತಿಭಟನೆಗೆ ಕರೆ ನೀಡಿಲಾಗಿದೆ‌.‌ ಪ್ರತಿಭಟನೆಯಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಲಿದ್ದಾರೆ. ಈ ರೀತಿ ಘಟನೆಗಳು ಮುಂದೆ ನಡೆಯಬಾರದು.‌ ಆದರೆ ಪದೆ ಪದೆ ಈ ರೀತಿ ಘಟನೆಗಳು ನಡೆಯುತ್ತಿದೆ.‌ ಬೆಳಗಾವಿಯ ವಂಟಮೂರಿಯಲ್ಲಿ ಘಟನೆ ಆಗಿ ಕೇವಲ ನಾಲ್ಕು ತಿಂಗಳು ಅಷ್ಟೆ ಆಗಿದೆ, ಅಷ್ಟರಲ್ಲಿ ಹುಬ್ಬಳ್ಳಿಯಲ್ಲಿ ಘಟನೆ ನಡೆದಿದೆ.‌ ಹಾಗಾಗಿ ಪ್ರತಿಭಟನೆ ಮಾಡುತ್ತಿದೇವೆ. ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸುವುದರ ಮೂಲಕ ನೇಹಾಳಿಗೆ ನ್ಯಾಯ ಕೊಡಿಸುವ ಕೆಲಸ ಆಗಬೇಕು ಎಂದರು.
ಶಾಸಕ ಅಭಯ ಪಾಟೀಲ್ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ಹಿಂದು ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಮೊನ್ನೆ ಹುಬ್ಬಳ್ಳಿಯಲ್ಲಿ ಆದ ಘಟನೆ ಬೆಳಗಾವಿಯಲ್ಲಿ ಕೂಡ ಮುಂದೆ ಆಗಬಹುದು. ಹಾಗಾಗಿ ಜಾಗೃತರಾಗಬೇಕು. ಹಿಂದು ಹೆಣ್ಣು ಮಕ್ಕಳು ಜಾಗೃತಿರಾಗಬೇಕು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಮೀತಿಮಿರಿ ಈ ರೀತಿ ಘಟನೆಗಳು ಆಗುತ್ತಿದೆ. ಹಾಗಾಗಿ ಮಹಿಳಾ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದರು.
ರಾಜ್ಯ ಬಿಜೆಪಿ ವಕ್ತಾರ ಎಂ.ಬಿ ಜೀರಳಿ ಮಾತನಾಡಿ, ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆಯನ್ನು ನಾವು ಅತ್ಯಂತ ಕಟುವಾಗಿ ಖಂಡಿಸುತ್ತೇವೆ. ನೇಹಾ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ಮಾಡಿದರೆ ಅವರ ಮೇಲೇ ಕೇಸ್ ಹಾಕಲಾಗಿದೆ. ನೇಹಾ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಪೋಸ್ಟ್ ಹಾಕಲಾಗುತ್ತಿದೆ. ಇದರ ಹಿಂದೆ ಜೀಹಾದಿ ಮಾನಸಿಕತೆ ಇದೆ. ಈ ಪ್ರಕರಣ ಕೂಲಂಕಷವಾಗಿ ತನಿಖೆ ಆಗಬೇಕು ಎಂದು ಆಗ್ರಹಿಸಿದರು.‌
ಎಲ್ಲಿಯವರೆಗೆ ನೇಹಾ ಆತ್ಮಕ್ಕೆ ಶಾಂತಿ ಸಿಗುವದಿಲ್ಲವೋ ಅಲ್ಲಿಯವರೆಗೆ ಬಿಜೆಪಿ ಪ್ರತಿಭಟಿಸುತ್ತೆ. ಈ ಕೊಲೆ ಕಾಲೇಜಿನ‌ ಆವರಣದಲ್ಲೇ ಹಾಡಹಗಲೆ ಆಗಿದೆ.‌ ಎಲ್ಲಾ ಪಾಲಕರು ತಮ್ಮ ಮಕ್ಕಳ ಭವಿಷ್ಯ ಏನು ಎಂಬ ಭಯದ ವಾತಾವರಣದಲ್ಲಿ ಇದ್ದಾರೆ. ಕೊಲೆಯಾದ ನಂತರ ಸಿಎಂ ಹಾಗೂ ಗೃಹ ಸಚಿವರ ಪ್ರತಿಕ್ರಿಯೆ ನೋಡಿದರೆ ಏನು ಆಗಿಲ್ಲ, ಅವರ ನಡುವೆ ಸಂಬಂಧ ಇತ್ತು ಎಂದು ಹೇಳಿದ್ದು ಖಂಡಿಸುತ್ತೇವೆ ಎಂದರು.‌

ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಿಲ ಬೆನಕೆ, ಪಾಲಿಕೆ ಮೇಯರ್ ಸವಿತಾ ಕಾಂಬಳೆ, ಮಹಾನಗರ ಅಧ್ಯಕ್ಷೆ ಗೀತಾ ಸುತಾರ, ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸುಭಾಷ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಸಿದ್ದನಗೌಡ ಪಾಟೀಲ, ಹನುಮಂತ ಕೊಂಗಾಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.‌