ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಗೆಲುವಿಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬುಧವಾರ ಬೆಳಗ್ಗೆ ನಗರದ ಪ್ರಮುಖ ಮಾರ್ಕೆಟ್ ಗಳಾದ ಬಾಜಿ ಮಾರ್ಕೆಟ್, ಪುಷ್ಪ ಹರಾಜು ಕೇಂದ್ರ, ಫ್ರೂಟ್ ಹೋಲ್ ಸೆಲ್ ಮಾರ್ಕೆಟ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಪರ‌ ಸಚಿವರು ಮತಯಾಚಿಸಿದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸ್ಥಿತಿಯನ್ನು ಬದಲಾಯಿಸಿವೆ. ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಇನ್ನಷ್ಟು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ರೈತರು, ವ್ಯಾಪಾರಸ್ಥರಿಗೆ ಜಾತಿ ಇಲ್ಲ, ಇವರಿಬ್ಬರು ಸರಿಯಾಗಿ ಹೋದರೆ ಯಾರಿಗೂ ತೊಂದರೆ ಆಗಲ್ಲ. ಹೀಗೆ ಅನ್ಯೋನ್ಯತೆಯಿಂದ ಬದುಕುತ್ತಿರುವ ಮಾರ್ಕೆಟ್ ಜನರ ಬಳಿ ಮತ ಕೇಳಲು ಬಂದಿರುವೆ. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಗೆದ್ದು ಬಂದ ತಕ್ಷಣವೇ ಮಾರ್ಕೆಟ್ ಗಳಲ್ಲಿ ವ್ಯಾಪಾರಸ್ಥರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು‌ ಸಚಿವರು ಭರವಸೆ ನೀಡಿದರು. ‌

ಬೆಳಗಾವಿಗೆ‌‌ ಜಗದೀಶ್ ಶೆಟ್ಟರ್ ಬೇಕಾ?, ಮೃಣಾಲ್‌ ಹೆಬ್ಬಾಳಕರ್ ಬೇಕಾ? ಇಲ್ಲಿನ ಕಷ್ಟ ಸುಖ ಆಲಿಸದ ಶೆಟ್ಟರ್, ಇದೀಗ ದಿಢೀರ್ ಸ್ಪರ್ಧೆ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಎಲ್ಲಾ ರೀತಿಯ ಅಧಿಕಾರ ಅನುಭವಿಸಿ, ಕಾಂಗ್ರೆಸ್ ಗೆ ಬಂದರು. ರಾಹುಲ್‌ ಗಾಂಧಿ ಅವರನ್ನು ಪ್ರಧಾನ ಮಂತ್ರಿಯಾನ್ನಾಗಿ ಮಾಡಬೇಕು, ಅಂತಿದ್ರು. ಚುನಾವಣೆಯಲ್ಲಿ ಸೋತರೂ ಕಾಂಗ್ರೆಸ್ ಎಂಎಲ್ಸಿ ಮಾಡಿತ್ತು. ಮೋದಿ ಅವರನ್ನು ಮತ್ತೆ ಪ್ರಧಾನ ಮಂತ್ರಿ ಮಾಡಬೇಕು ಅಂತೇಳಿ ಮತ್ತೆ ಬಿಜೆಪಿಗೆ ವಾಪಸಾದರು ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಆದರೂ ಸ್ವಂತ ಶಕ್ತಿಯಿಂದ ಮತ ಕೇಳುವ ಬದಲು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು. ಮೋದಿ ನೋಡಿ ಮತ ನೀಡಿ ಎಂದು ಕೇಳುತ್ತಿದ್ದಾರೆ. ಇಂಥ ವ್ಯಕ್ತಿಯಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ? ಶೆಟ್ಟರ್ ಅವರನ್ನು ವಾಪಸ್ ಹುಬ್ಬಳ್ಳಿಗೆ ಕಳುಹಿಸೋಣ ಎಂದು ಕರೆ ನೀಡಿದರು.

ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್, ಶಾಸಕ ರಾಜು ಆಸಿಫ್‌ ಸೇಠ್ ಮಾತನಾಡಿದರು.

ಈ ವೇಳೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರೋ.ರಾಜೀವ್ ಗೌಡ, ಕಾರ್ಪೋರೇಟರ್ ಮುಜಾಮಿಲ್ ಡೋಣಿ, ಬಾಜಿ ಮಾರ್ಕೆಟ್ ಸಂಘದ ಅಧ್ಯಕ್ಷ ದಿವಾಕರ್ ಪಾಟೀಲ್, ಉಪಾಧ್ಯಕ್ಷ ಮೋಹನ್ ಮನ್ ಹೋಳ್ಕರ್, ಕಾರ್ಯದರ್ಶಿ ಎ.ಕೆ.ಭಗವಾನ್, ಎಂ.ಎಂ. ಡೋಣಿ, ಉಮೇಶ್ ಪಾಟೀಲ್, ವಿಶ್ವನಾಥ ಪಾಟೀಲ, ಕಾಕಾ ಹವಳ್, ಪ್ರಕಾಶ್.ಜಿ.ಬಾಬಾಣ್ಣನವರ್, ಸಂಜಯ್ ಭಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು