ರಾಮದುರ್ಗ : ರಾಮದುರ್ಗ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಕೆರೆ ತುಂಬಿಸುವ ಯೋಜನೆಗೆ ಶಾಸಕ ಅಶೋಕ್ ಪಟ್ಟಣ್ ನೇತೃತ್ವದಲ್ಲಿ ಪ್ರಯತ್ನಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು.

ಚುನಾವಣೆ ಮುಗಿದ ಕೂಡಲೇ ಹೊಸ ಸಂಸತ್ ಸದಸ್ಯರ ಮೊದಲ ಕೆಲಸವೇ ಡಿ.ಕೆ.ಶಿವಕುಮಾರ್ ಅವರ ಬಳಿ ನಿಯೋಗ ಕೊಂಡೊಯ್ದು ಕೆರೆ ತುಂಬಿಸುವ ಯೋಜನೆಗೆ ಮಂಜೂರು ಮಾಡಿಸುವುದು ಎಂದು ಹೇಳಿದರು.

ರಾಮದುರ್ಗ ವಿಧಾನಸಭಾ ಕ್ಷೇತ್ರದ ಕೆ ಚಂದರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ನಡೆಸಿದ ಸಚಿವರು, ಬದ್ಧತೆಗೆ ಮತ್ತೊಂದು ಹೆಸರು ಕಾಂಗ್ರೆಸ್ ಪಕ್ಷ, ಕಳೆದ 10 ತಿಂಗಳಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.

10 ವರ್ಷಗಳ ಹಿಂದೆ ನನ್ನ ಪರವಾಗಿ ನಿವೆಲ್ಲರೂ ಓಡಾಡಿದರೂ ನಾನು ಸೋಲಬೇಕಾಯಿತು. ಇದೀಗ 10 ವರ್ಷಗಳ ಬಳಿಕ ಮಗನೊಂದಿಗೆ ಬಂದಿದ್ದೇನೆ. ರಾಮದುರ್ಗದ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ಕೆರೆ ತುಂಬಿಸುವ ಯೋಜನೆಗೆ ಚುನಾವಣೆ ಮುಕ್ತಾಯದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
2023ರ ಚುನಾವಣೆಗೂ ಮುನ್ನ ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದೇವು. ಇದೀಗ ಕೊಟ್ಟ ಮಾತನ್ನು ಈಡೇರಿಸಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ಕಾಂಗ್ರೆಸ್ ಅಭ್ಯರ್ಥಿಗೆ ಇರಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೋರಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್, ಉದಯಕುಮಾರ್ ಸೋಮನಟ್ಟಿ, ಸಂಗಪ್ಪ ಅಡಗಿಮನಿ, ಸಂಜಯ ಹಳ್ಳಿ, ಭೀಮಪ್ಪ ಡವಳೇಶ್ವರ, ಪರ್ವತಗೌಡ ಪಾಟೀಲ, ಶಿವಪ್ಪ ಮುನವಳ್ಳಿ, ಬಾಪು ದೇಸಾಯಿ, ನಿಂಗಣ್ಣ ದಂಡಿನದುರ್ಗಿ, ಭೀಮಪ್ಪ ಅಡಗಿಮನಿ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.