ಬೆಳಗಾವಿ: ಹಿಡಕಲ್ ಜಲಾಶಯದಿಂದ ಘಟಪ್ರಭೆ ನದಿಗೆ, ಘಟಪ್ರಭೆ ಬಲದಂಡೆ, ಎಡದಂಡೆ ಕಾಲುವೆಗೆ ಮೇ, 25 ರಿಂದ ಜೂನ್‌ 4ರ ವರೆಗೆ 5.578 ಟಿಎಂಸಿ ನೀರು ಹರಿಸಲಾಗುತ್ತಿದ್ದು, ನೀರು ಪೋಲಾಗದಂತೆ, ನೀರನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ರೈತರಿಗೆ, ಸಾರ್ವಜನಿಕರಿಗೆ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು, ಪ್ರಸ್ತುತ ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಜನ- ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಿದ್ದು, ಮೇ, 25 ರಿಂದ ಜೂನ್‌ 4ರ ವರೆಗೆ ಹಿಡಕಲ್ ಜಲಾಶಯದಿಂದ ಘಟಪ್ರಭೆ ನದಿಗೆ, ಘಟಪ್ರಭೆ ಬಲದಂಡೆ, ಎಡದಂಡೆ ಕಾಲುವೆಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಜನ-ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ಬಲದಂಡ ಕಾಲುವೆಗೆ ಪ್ರತಿ ದಿನ 2100 ಕ್ಯೂಸೆಕ್ಸ್ ನಂತೆ 1.814 ಟಿ.ಎಂ.ಸಿ, ಘಟಪ್ರಭಾ ಎಡದಂಡೆ ಕಾಲುವೆಗೆ ಪ್ರತಿ ದಿನ 2650 ಕ್ಯೂಸೆಕ್ಸ್‌ನಂತೆ 2.289 ಟಿ.ಎಂ.ಸಿ ಹಾಗೂ ಚಿಕ್ಕೋಡಿ ಉಪ ಕಾಲುವೆಗೆ ಪ್ರತಿ ದಿನ 550 ಕ್ಯೂಸೆಕ್ಸ್‌ನಂತೆ 0.475 ಟಿ.ಎಂ.ಸಿ, ಜೂನ್‌ 4ರಿಂದ ಜೂನ್‌ 10ರ ವರೆಗೆ ರಾಯಬಾಗ ತಾಲೂಕಿನ ಘಟಪ್ರಭಾ ಎಡದಂಡೆ ಕಾಲುವೆ ಮುಖಾಂತರ ಕೃಷ್ಣಾ ನದಿ ಕೊಡುವಂತೆ 1.00 ಟಿ.ಎಂ.ಸಿ ನೀರನ್ನು ಹಿಡಕಲ್ ಜಲಾಶಯದಿಂದ ಬಿಡುಗಡೆಗೊಳಿಸಲಾಗುವುದು ಎಂದಿದ್ದಾರೆ.

ಹಿಡಕಲ್ ಜಲಾಶಯದಿಂದ ಬಿಟ್ಟಿರುವ ನೀರು ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಪೋಲಾಗದಂತೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.