ಗೋಕಾಕ : ನಮ್ಮ ಕುಟುಂಬವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಕಾಣಲಿಕ್ಕೆ ಹಲವು ಮಹನೀಯರು ಸೇವೆ ಸಲ್ಲಿಸಿದ್ದಾರೆ. ನಮ್ಮ ಕುಟುಂಬದ ಸಾಮ್ರಾಜ್ಯದಲ್ಲಿ ದಿ. ನಾಗಪ್ಪ ಶೇಖರಗೋಳ ಪಾತ್ರವೂ ಇದೆ. ವಿಧಿಯಾಟದ ಮುಂದೆ ಯಾರೂ ದೊಡ್ಡವರಲ್ಲ. ಅಗಲಿರುವ ನಾಗಪ್ಪನ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ. ಮೃತರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ತಮ್ಮ ಗೃಹ ಕಛೇರಿಯಲ್ಲಿ ಜರುಗಿದ ದಿ. ನಾಗಪ್ಪ ಶೇಖರಗೋಳ ಅವರಿಗೆ ಶೃದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಮತ್ತು ನಾಗಪ್ಪ ಶೇಖರಗೋಳ ಅವರ ಸುಮಾರು 15 ವರ್ಷಗಳ ಒಡನಾಟವನ್ನು ಸ್ಮರಿಸಿಕೊಂಡರು.
ಅವಿಭಜಿತ ಗೋಕಾಕ ತಾಲೂಕಿನ ಜನರ ಪ್ರೀತಿ ಮತ್ತು ಆಶೀರ್ವಾದದಿಂದ ಕಳೆದ 4 ದಶಕಗಳಿಂದ ನಮ್ಮ ಜಾರಕಿಹೊಳಿ ಸಾಮ್ರಾಜ್ಯವನ್ನು ನಿರ್ಮಿಸಿದ್ದೇವೆ. ಇದರಲ್ಲಿ ಬಹಳಷ್ಟು ಜನ ತಮ್ಮ ತ್ಯಾಗವನ್ನು ಅರ್ಪಿಸಿದ್ದಾರೆ. ಅಂತಹದರಲ್ಲಿ ನಾಗಪ್ಪ ಕೂಡ ಒಬ್ಬನು. ನನ್ನ ಅನುಪಸ್ಥಿತಿಯಲ್ಲಿ ಅರಭಾವಿ ಕ್ಷೇತ್ರದ ಸಂಪೂರ್ಣ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಜನರ ಕಷ್ಟಗಳಿಗೆ ತಕ್ಷಣವೇ ನನ್ನ ಸೂಚನೆಯ ಮೇರೆಗೆ ಸ್ಪಂದಿಸುವ ಗುಣವಿತ್ತು. ಆದರೆ ವಿಧಿಯಾಟ ನಾಗಪ್ಪನನ್ನು ಇಷ್ಟು ಬೇಗ ಕರೆದೊಯ್ತು. ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಎಂಬಂತೆ ನಾಗಪ್ಪ ಕೂಡ ಹೃದಯಾಘಾತಕ್ಕೆ ಬಲಿಯಾದ. ಆತನ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸಿದರು.
ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಯುವ ನಾಯಕರಾದ ರಾಹುಲ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಖ್ಯಾತ ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಉದ್ಯಮಿಗಳಾದ ವಿಕ್ರಮ ಅಂಗಡಿ, ಪ್ರಭು(ಅಪ್ಪು) ಕಲ್ಯಾಣಶೆಟ್ಟಿ, ರಾಜೇಸಾಬ ಅಂಡಗಿ, ಶಿವು ಪಾಟೀಲ, ಸದಾನಂದ ಕಲಾಲ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಪರಸಪ್ಪ ಬಬಲಿ ಸೇರಿದಂತೆ ಕ್ಷೇತ್ರದ ಅನೇಕ ಮುಖಂಡರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕರಾಗಿದ್ದ ದಿ. ನಾಗಪ್ಪ ಶೇಖರಗೋಳ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಪಣೆ ಮಾಡಿದರು.

*ಫೋಟೋ ಕ್ಯಾಪ್ಷನ್* : ಗೋಕಾಕ 1,2,3: ದಿ. ನಾಗಪ್ಪ ಶೇಖರಗೋಳ ನಿಧನಕ್ಕೆ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶೃದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು. ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ, ಯುವ ಮುಖಂಡರಾದ ರಾಹುಲ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ ಮತ್ತೀತರರು ಉಪಸ್ಥಿತರಿದ್ದರು.