ಉಡುಪಿ : ಕರಾವಳಿ, ಮಲೆನಾಡು ಭಾಗದಲ್ಲಿ ರೈಲು ಸಂಚಾರ ವ್ಯವಸ್ಥೆ ಸುಧಾರಣೆ ಮತ್ತು ಹೊಸ ರೈಲು ಒದಗಿಸುವಂತೆ ಕೋರಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿಯಾಗಿ ಮನವಿ ಸಲ್ಲಿಸಿದರು.

ಬಹುದಿನದ ಬೇಡಿಕೆಯಾದ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಳಗೆ ವಿಲೀನ ಮಾಡಬೇಕೆಂಬ ಮನವಿ ನೀಡಿ, ಕರ್ನಾಟಕ, ಮಹಾರಾಷ್ಟ್ರ ಗೋವಾ ರಾಜ್ಯಗಳ ಷೇರು, ಎಲ್ಲ ಸರಕಾರದ ಸಂಪರ್ಕ ಮತ್ತು ಸಹಮತವನ್ನು ವಿವರಿಸಿದ್ದಾರೆ. ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನವಾದರೆ ಮಾತ್ರ ಈಗಿರುವ ಹಳಿಗಳ ಮೇಲ್ದರ್ಜೆ ಮತ್ತು ಹೆಚ್ಚುವರಿ ಬೋಗಿಗಳ ಜೋಡಣೆ ಸಾಧ್ಯ. ಈಗ ಇರುವ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಹಾಗೂ ಹೊಸ ರೈಲು ಸಂಚಾರಕ್ಕೂ ಅನುಕೂಲವಾಗಲಿದೆ ಎಂಬ ಬಗ್ಗೆ ವಿಸ್ತ್ರತವಾಗಿ ತಿಳಿಸಿದ್ದಾರೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರು ಎಲ್ಲ ವಿಚಾರಗಳಿಗೆ ಸಹಮತ ವ್ಯಕ್ತಪಡಿಸಿ ಕೊಂಕಣ ರೈಲ್ವೆ ವಿಲೀನದ ಬಗ್ಗೆ ಕೂಡಲೇ ರಾಜ್ಯ ಸರಕಾರದಿಂದ ವರದಿ ತರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಸದ್ಯ ಸಂಚಾರ ಮಾಡುತ್ತಿರುವ ಪಂಚಗಂಗಾ ರೈಲಿನ ಬಳಕೆದಾರರನ್ನು ಹೊರತುಪಡಿಸಿ ತಡರಾತ್ರಿ ಉಡುಪಿ, ಕುಂದಾಪುರ, ಕಾರವಾರ ಕಡೆ ಪ್ರಯಾಣ ಬೆಳೆಸುವ ಅಸಂಖ್ಯಾತ ರೈಲು ಬಳಕೆದಾರರಿಗಾಗಿ ಪಡೀಲ್ ಬೈಪಾಸ್ ಮೂಲಕ ಬೆಂಗಳೂರು-ಕಾರವಾರ ನಡುವೆ ಹೊಸ ರೈಲು ಸೇವೆ ಒದಗಿಸಲು ಮನವಿ ಮಾಡಿದರು. ಎರ್ನಾಕುಲಂ-ನಿಜಾಮುದ್ದೀನ್ ರೈಲನ್ನು ಕುಂದಾಪುರದಲ್ಲಿ ನಿಲ್ಲಿಸುವಂತೆ ಕೊಟ್ಟ ಮನವಿಗೆ ಸಚಿವರು ಒಪ್ಪಿಗೆ ನೀಡಿದ್ದಾರೆ. ಮತ್ತ್ವಗಂಧ ರೈಲಿನ ಬೋಗಿಗಳು ಅತ್ಯಂತ ಹಳೆಯದಾದ ಐಸಿಎಫ್ ಮಾದರಿಯದಾಗಿದ್ದು ತತ್‌ಕ್ಷಣವೇ ಅದನ್ನು ಆಧುನಿಕ ಎಲ್ ಎಚ್‌ಪಿ ಕೋಚ್‌ಗಳಾಗಿ ಮೇಲ್ದರ್ಜೆಗೆ ಏರಿಸಲು ಕೋರಿದರು.