ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಿದವರೇ ಕುಲಪತಿಯಾಗಿ ನೇಮಕವಾಗುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ ಪ್ರೊ. ಕಾವೇರಿಯಪ್ಪ, ಬಳಿಕ ಪ್ರೊ. ಯಡಪಡಿತ್ತಾಯ, ಈಗ ಪ್ರೊ.ಪಿ.ಎಲ್.ಧರ್ಮ ಕುಲಪತಿಯಾಗಿದ್ದಾರೆ. ಕೊಡಗು ಮೂಲದ ಎರಡನೇ ಕುಲಪತಿ ಇವರಾಗಿದ್ದಾರೆ. ಈ ಹಿಂದೆ ಪ್ರೊ. ಕಾವೇರಿಯಪ್ಪ ಬಳಿಕ ಪ್ರೊ.ಪಿ.ಎಲ್.ಧರ್ಮ ಕೊಡಗು ಮೂಲದ ಕುಲಪತಿಯಾಗಿದ್ದಾರೆ.

ಮಂಗಳೂರು : ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯಗಳ ಕುಲಾಧಿಪತಿಯೂ ಆಗಿರುವ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಪ್ರೊ.ಪಿ.ಎಲ್‌.ಧರ್ಮ ಅವರನ್ನು ನೇಮಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ರಾಜ್ಯಶಾಸ್ತ್ರ ವಿಭಾಗದ ಅಧ್ಯಾಪಕ ಪ್ರೊ.ಪಿ.ಎಲ್‌.ಧರ್ಮ ಅವರನ್ನು ನೇಮಕ ಮಾಡಿ ಗೆಹ್ಲೋಟ್‌ ಆದೇಶ ಹೊರಡಿಸಿದ್ದಾರೆ. ಮಂಗಳವಾರ ಅಧಿಕೃತ ಆದೇಶವನ್ನು ಹೊರಡಿಸಿರುವ ರಾಜ್ಯಪಾಲರು, ಮುಂದಿನ ನಾಲ್ಕು ವರ್ಷದ ಅವಧಿಗೆ ಧರ್ಮ ಅವರು ಮಂಗಳೂರು ವಿವಿ ಕುಲಪತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಸುಬ್ರಹ್ಮಣ್ಯ ಯಡಪಡಿತ್ತಾಯ ಅವರ ಅವಧಿ ಕಳೆದ ವರ್ಷದ ಜೂನ್‌ನಲ್ಲಿಯೇ ಮುಗಿದಿತ್ತು. ಇದಾದ ಬಳಿಕ ಹಿರಿಯ ಡೀನ್‌ ಜಯರಾಜ್‌ ಆಮಿನ್‌ ಅವರು ಹಂಗಾಮಿ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇದರ ನಡುವಯೇ ಹೊಸ ಕುಲಪತಿಗಳ ಆಯ್ಕೆಗೆ ಸಮಿತಿ ರಚಿಸಲಾಗಿತ್ತು. ಸಮಿತಿ ನೀಡಿದ ಶಿಫಾರಸ್ಸಿನ ಮೇರೆಗೆ ರಾಜ್ಯಪಾಲರು ಧರ್ಮ ಅವರನ್ನು ಕುಲಪತಿಯಾಗಿ ನೇಮಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿಯೇ ಹಲವು ವರ್ಷದಿಂದ ಕೆಲಸ ಮಾಡುತ್ತಿರುವ ಪ್ರೊ.ಧರ್ಮ ಅವರು ಈ ಹಿಂದೆ ಇದೇ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರೂ ಆಗಿ ಕಾರ್ಯನಿರ್ವಹಿಸಿದ್ದರು. ಈಗ ಅವರನ್ನೇ ಕುಲಪತಿಯನ್ನಾಗಿ ನೇಮಿಸಲಾಗಿದೆ.

ಈ ಮೊದಲು ಮಂಗಳೂರು ವಿಶ್ವವಿದ್ಯಾನಿಲಯದ ಭಾಗವಾಗಿದ್ದ ಕೊಡಗು ಜಿಲ್ಲೆಯನ್ನು ಪ್ರತ್ಯೇಕಿಸಿ ವಿಶ್ವವಿದ್ಯಾನಿಲಯ ರೂಪಿಸಲಾಗಿದೆ. ಈಗ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ವ್ಯಾಪ್ತಿ ಒಳಗೊಂಡು ಮಂಗಳೂರು ವಿಶ್ವವಿದ್ಯಾನಿಲಯ ಕಾರ್ಯನಿರ್ವಹಿಸುತ್ತಿದೆ.