ಧರ್ಮಸ್ಥಳ :
ದೇವರ ಪೂಜೆ, ಆರಾಧನೆ, ಅಭಿಷೇಕದಿಂದ ಪಾಪಗಳ ಕ್ಷಯವಾಗಿ ಪುಣ್ಯ ಸಂಚಯವಾಗುತ್ತದೆ ಎಂದು ಪೂಜ್ಯ ದಿವ್ಯಸಾಗರ ಮುನಿಮಹಾರಾಜರು ಹೇಳಿದರು.

ಶುಕ್ರವಾರ ಧರ್ಮಸ್ಥಳದ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಪಾದಾಭಿಷೇಕದ ಪ್ರಯುಕ್ತ ಮಂಗಲ ಪ್ರವಚನ ನೀಡಿ, ಶ್ರದ್ಧಾ-ಭಕ್ತಿಯಿಂದ ದೇವರಪೂಜೆ, ಅಭಿಷೇಕ ಮಾಡುವುದರಿಂದ ಎಲ್ಲಾ ಸಂಕಟಗಳ ನಿವಾರಣೆಯಾಗಿ ಜೀವನ ಪಾವನವಾಗುತ್ತದೆ. ಆತ್ಮಕಲ್ಯಾಣವಾಗುತ್ತದೆ. ಸುಖ-ಶಾಂತಿ ಸಿಗುತ್ತದೆ ಎಂದು ಹೇಳಿದರು.

ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಪೂಜ್ಯ ನಿರ್ದೋಷಸಾಗರ ಮುನಿಮಹಾರಾಜರು ಮತ್ತು ಕ್ಷುಲ್ಲಕ ನಿರ್ವಾಣಸಾಗರ ಮಹಾ ರಾಜರು, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಯವರು, ಹೇಮಾವತಿ ವೀ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾ‌ರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾ‌ರ್ ಪಾದಾಭಿಷೇಕದಲ್ಲಿ ಭಾಗವಹಿಸಿದ್ದರು.

ಬಾಹುಬಲಿ ಸ್ವಾಮಿ ಮೂರ್ತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆಯವರು ಪಾದಾಭಿಷೇಕ ನೆರವೇರಿಸಿದರು.