ಭಟ್ಕಳ : ಅನನ್ಯ ಚಿಂತನೆ, ಭಗವಂತನಲ್ಲಿ ಶರಣಾಗತಿಯಿಂದ ಮಾತ್ರ ನಾವು ಆಧ್ಯಾತ್ಮದತ್ತ ಹೋಗಬಹುದು. ಆಗ ಮಾತ್ರ ಭಗವಂತನ ಸಾಕ್ಷಾತ್ಕಾರ ಲಭ್ಯವಾಗುವುದು ಎಂದು ಉಜಿರೆಯ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಭಾನುವಾರ ಭಟ್ಕಳ ತಾಲೂಕಿನ ಕರಿಕಲ್ ಶ್ರೀ ರಾಮ ಧ್ಯಾನ ಮಂದಿರದ ಆವರಣದಲ್ಲಿ ಚಾತುರ್ಮಾಸ್ಯ ಆರಂಭಕ್ಕೂ ಮುನ್ನ ಪುರಪ್ರವೇಶ ಮಾಡಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ಮನುಷ್ಯನನ್ನು ಕಾನೂನುಗಳು ಬದಲಾವಣೆ ಮಾಡಲು ಸಾಧ್ಯವಿಲ್ಲ, ಸರಕಾರ ಎಷ್ಟೇ ಕಠಿಣ ಕಾನೂನು ಜಾರಿ ಮಾಡಿದರೂ ಬದಲಾಗದ ಮನುಷ್ಯ ಆಧ್ಯಾತ್ಮಿಕ ಮೌಲ್ಯಗಳಿಂದ ಬದಲಾಗಲು ಸಾಧ್ಯ ಎಂದು ಹೇಳಿದರು.

ನಾವು ಧರ್ಮ ಮಾರ್ಗದಿಂದ ನಡೆದಾಗ ಮಾತ್ರ ನಮಗೆ ಸುಖ ಪ್ರಾಪ್ತಿಯಾಗುವುದು. ಅಂತಹ ಧರ್ಮ ಜಾಗೃತಿಯನ್ನುಂಟು ಮಾಡುವ ಕೆಲಸವು ಸಾರ್ವತ್ರಿಕವಾಗಿ ಚಾತುರ್ಮಾಸ್ಯವನ್ನು ಆಚರಿಸುವ ಋಷಿಮುನಿಗಳು ಮಾಡುತ್ತಿದ್ದಾರೆ. ಮೊದಲು ನಾವು ಬದಲಾಗಬೇಕು. ಕೇವಲ ಡಿಗ್ರಿಯನ್ನು ಇಟ್ಟುಕೊಂಡು ಹಣದೊಂದಿಗೆ ಬದುಕುವ ಬದುಕು ಮುಖ್ಯವಲ್ಲ, ಬದಲಾಗಿ ಮೌಲ್ಯಗಳೊಂದಿಗೆ ಬದುಕುವ ಬದುಕು ಮಾತ್ರ ಬದುಕಾಗಬಲ್ಲದು. ಧಾರ್ಮಿಕ ಮೌಲ್ಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಬೌದ್ಧಿಕ ವಿಕಾಸವಾಗುತ್ತದೆ ಎಂದರು.

ನಾವು ನಮ್ಮ ಪಂಚೇಂದ್ರಿಯಗಳನ್ನೇ ಸುಖದ ಮೂಲ ಎಂದು ತಿಳಿದುಕೊಂಡಿದ್ದೇವೆ. ಆದರೆ ನಮ್ಮಲ್ಲಿಯೇ ನಮ್ಮ ವೈರಿಗಳಿದ್ದಾರೆ. ನಮ್ಮಲ್ಲಿರುವ ಷಡ್‌ವೈರಿಗಳನ್ನು ನಾವು ಜಯಿಸಬೇಕಾಗಿದೆ. ಅವುಗಳನ್ನು ನಿಗ್ರಹಿಸುವುದು ಕಷ್ಟಸಾಧ್ಯವಾದ ಮಾತು. ಆದರೆ ನಿಯಂತ್ರಣ ಸಾಧ್ಯವಾಗುವುದು. ಅವುಗಳನ್ನು ನಿಯಂತ್ರಣದಲ್ಲಿಟ್ಟು ಜೀವನ ನಡೆಸಿದಾಗ ಮಾತ್ರ ಸುಖ, ಸಂತೋಷ ಲಭ್ಯ ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಚಾತುರ್ಮಾಸ್ಯ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಬೆಳ್ತಂಗಡಿ ಶಾಸಕ ಹರೀಶ ಪೂಂಜ ಮಾತನಾಡಿದರು. ಕಳೆದ ನಾಲ್ಕು ವರ್ಷಗಳಿಂದ ಬೆಳ್ತಂಗಡಿಯಲ್ಲಿ ನಡೆಯುತ್ತಿದ್ದ ಚಾತುರ್ಮಾಸ್ಯ ಈ ಬಾರಿ ಭಟ್ಕಳದಲ್ಲಿ ಆಗುತ್ತಿದ್ದರೂ ಅದರ ಉದ್ಘಾಟನೆ ಮಾಡುವ ಭಾಗ್ಯ ದೊರಕಿರುವುದು ಶ್ರೀಗಳ ಆಶೀರ್ವಾದ ಎಂದು ತಿಳಿಯುತ್ತೇನೆ. ಇಂತಹ ಧರ್ಮ ಕಾರ್ಯದಲ್ಲಿ ನಾವೆಲ್ಲರೂ ಸೇರಿ ಭಾಗವಹಿಸಿ, ಎಲ್ಲರ ಸಹಕಾರದಿಂದ ಇಂತಹ ಕಾರ್ಯಕ್ರಮ ಯಶಸ್ವಿಯಾಗಬೇಕಾಗಿದೆ. ಶ್ರೀಗಳು ಸಮಸ್ತ ಹಿಂದೂ ಸಮಾಜದ ಒಳಿತಿಗಾಗಿ ಚಾತುರ್ಮಾಸ್ಯ ಮಾಡುತ್ತಿದ್ದಾರೆ. ಅದರ ಫಲ ನಮಗೆಲ್ಲರಿಗೂ ಸಿಗಲಿ ಎಂದು ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷ್ಣ ನಾಯ್ಕ ಆಸರಕೇರಿ, ಈ ವರ್ಷದ ಚಾತುರ್ಮಾಸ್ಯ ಕಾರ್ಯಕ್ರಮ ಆಚರಣೆಗೆ ನಮಗೆ ಅವಕಾಶ ದೊರೆತಿರುವುದು ನಮ್ಮ ಭಾಗ್ಯ ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಡಿ.ನಾಯ್ಕ, ಸ್ಥಳದಾನಿ ಎಲ್.ಎಸ್.ನಾಯ್ಕ, ಗೋವಿಂದ ನಾಯ್ಕ, ಈಶ್ವರ ನಾಯ್ಕ ಮುರುಡೇಶ್ವರ, ಇತರರು ಇದ್ದರು. ಶ್ರೀ ರಾಮ ಕ್ಷೇತ್ರದ ಧರ್ಮದರ್ಶಿ ಶ್ರೀಧರ ನಾಯ್ಕ ಆಸರಕೇರಿ ಸ್ವಾಗತಿಸಿದರು. ಗಂಗಾಧರ ನಾಯ್ಕ, ನಾರಾಯಣ ನಾಯ್ಕ ನಿರೂಪಿಸಿದರು.