ಮನ್ನಿಕೇರಿ (ತಾ. ಗೋಕಾಕ): ಸಾರ್ವಜನಿಕ ಸಂಚಾರಕ್ಕೆ ಅಗತ್ಯವಿರುವ ಮನ್ನಿಕೇರಿಯಿಂದ ಬೆಟಗೇರಿ ಮತ್ತು ಮನ್ನಿಕೇರಿಯಿಂದ ಕೌಜಲಗಿವರೆಗಿನ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ಒಟ್ಟಾರೆ ೨೫ ಕೋ. ರೂ. ಮಂಜೂರಾಗಿದ್ದು, ನಿಗದಿತ ಅವಧಿಯೊಳಗೆಯೇ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ತಿಳಿಸಿದರು.

ಕೌಜಲಗಿ ಸಮೀಪದ ಮನ್ನಿಕೇರಿ ಗ್ರಾಮದ ಹತ್ತೀರ ರವಿವಾರದಂದು ಜರುಗಿದ ಲೋಕೋಪಯೋಗಿ ಇಲಾಖೆಯ ಎಸ್ಎಚ್ಡಿಪಿ ೫ ನೇ ಹಂತದ ಯೋಜನೆಯ ೧೩ ಕೋ. ರೂ. ವೆಚ್ಚದ ಬೆಟಗೇರಿ- ಬಗರನಾಳ- ಮನ್ನಿಕೇರಿ ರಸ್ತೆ ಅಭಿವೃದ್ಧಿ ಮತ್ತು ಅಗಲೀಕರಣ ಕಾಮಗಾರಿ ಮತ್ತು ೧೨ ಕೋ. ರೂ. ವೆಚ್ಚದ ಬದಾಮಿ- ಗೊಡಚಿ- ಗೋಕಾಕ ಫಾಲ್ಸ್ ರಾಜ್ಯ ಹೆದ್ದಾರಿ-೧೩೪ರ ಮನ್ನಿಕೇರಿಯಿಂದ
ಕೌಜಲಗಿವರೆಗಿನ ರಸ್ತೆ ಅಭಿವೃದ್ಧಿ ಮತ್ತು ಅಗಲೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ಜನ ಮೆಚ್ಚಿನ ಶಾಸಕರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಈ ಎರಡೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ೨೫ ಕೋಟಿ ರೂಪಾಯಿ ಬಿಡುಗಡೆಗೊಂಡಿದೆ ಎಂದು ಅವರು ಹೇಳಿದರು.
ಕೌಜಲಗಿ, ಮನ್ನಿಕೇರಿ, ಬೆಟಗೇರಿ, ಬಗರನಾಳ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಿದ್ದು, ಸಂಚಾರವು ಸುಗಮವಾಗಿರಲಿಲ್ಲ. ಗ್ರಾಮಸ್ಥರು ನೀಡಿರುವ ಮನವಿಯನ್ನು ಆಧರಿಸಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಸರಕಾರದ ಮೇಲೆ ಒತ್ತಡ ತಂದು ಅಭಿವೃದ್ಧಿಗೆ ನೆರವು ತಂದಿದ್ದಾರೆ. ಈ ಮೂಲಕ ಸಾರ್ವಜನಿಕರ ಕುಂದು- ಕೊರತೆಗಳನ್ನು ನೀಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆಂದು ಹೇಳಿದರು.
ಉತ್ತಮ ಗುಣಮಟ್ಟದ ರಸ್ತೆಯನ್ನು ನಿರ್ಮಾಣ ಮಾಡುವಂತಾಗಬೇಕು.‌ ಈ ಭಾಗದಲ್ಲಿ ದಿನನಿತ್ಯ ಸಾರ್ವಜನಿಕ ಸಂಚಾರವು ಹೆಚ್ಚುತ್ತಿರುವುದರಿಂದ ಉತ್ತಮ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ರಸ್ತೆ ಕೆಲಸ ನಡೆಯುವ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಚುರುಕಿನ ಕೆಲಸಕ್ಕೆ ಮುಂದಾಗುವಂತೆ ಅವರು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಮನ್ನಿಕೇರಿಯ ಮಹಾಂತ ಸಿದ್ದೇಶ್ವರ ಸ್ವಾಮಿಗಳು, ವೇದಮೂರ್ತಿ ಮಹಾಂತಯ್ಯಾ ಹಿರೇಮಠ, ಕೌಜಲಗಿ ಜಿ.ಪಂ.ಮಾಜಿ ಸದಸ್ಯರಾದ ರಾಜೇಂದ್ರ ಸಣ್ಣಕ್ಕಿ, ಪರಮೇಶ್ವರ ಹೊಸಮನಿ, ರವಿ ಪರುಶೆಟ್ಟಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಬಾಳಪ್ಪ ಗೌಡರ, ಮುದುಕಪ್ಪ ಗೋಡಿ, ಸುಭಾಸ ಹಾವಾಡಿ, ಪುಂಡಲೀಕ ದಳವಾಯಿ, ಬಸನಗೌಡ ಪಾಟೀಲ, ಪ್ರಮುಖರಾದ ಸತೀಶ ಗಡಾದ, ಬಸವರಾಜ ನಾಯಿಕರ, ಹಣಮಂತ ಹಾವಾಡಿ, ಪಿಡ್ಬ್ಲೂಡಿ ಎಇ ಎಸ್.ಎಸ್.ಗಸ್ತಿ, ಗುತ್ತಿಗೆದಾರರಾದ ಮನಿಷ ಶೆಟ್ಟಿ, ಸುಧಾಕರ ಶೆಟ್ಟಿ, ಕೌಜಲಗಿ- ಮನ್ನಿಕೇರಿ-ಬಗರನಾಳ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.

 

ಮನ್ನಿಕೇರಿಯಿಂದ ಕೌಜಲಗಿವರೆಗಿನ ರಸ್ತೆ ಅಭಿವೃದ್ಧಿಗೆ ೧೨ ಕೋಟಿ ರೂಪಾಯಿ ಮತ್ತು ಮನ್ನಿಕೇರಿಯಿಂದ ಬಗರನಾಳ,
ಬೆಟಗೇರಿವರೆಗಿನ ರಸ್ತೆ ಕಾಮಗಾರಿಗೆ ೧೩ ಕೋಟಿ ರೂಪಾಯಿ ಅನುದಾನ ಬಂದಿದೆ. ಉತ್ತಮ ಗುಣಮಟ್ಟದ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಲೋಕೋಪಯೋಗಿ ಇಲಾಖೆಯಿಂದ ನಮ್ಮ ಕ್ಷೇತ್ರದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕೊಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಕೃತಜ್ಞತೆಯನ್ನು
ಸಾರ್ವಜನಿಕರ ಪರವಾಗಿ ಸಲ್ಲಿಸುತ್ತೇನೆ.
*ಬಾಲಚಂದ್ರ ಜಾರಕಿಹೊಳಿ ಶಾಸಕರು