ಮೂಡಲಗಿ:
ಅಮೃತ್ 2.0 ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ 4,628 ಕೋಟಿ ರೂ.ಗಳ ಮೊತ್ತದ ಅನುದಾನವನ್ನು ನಿಗದಿಪಡಿಸಲಾಗಿದ್ದು. ಇಲ್ಲಿಯವೆರೆಗೆ ರಾಜ್ಯಕ್ಕೆ ರೂ 614.37 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದ ವರದಿ ಪ್ರಕಾರ ಅಮೃತ್ 2.0 ಅಡಿಯಲ್ಲಿ ಯೋಜನೆಗಳಿಗೆ ಇದುವರೆಗೆ 70.23 ಕೋಟಿ ರೂ ಮೊತ್ತವನ್ನು ಖರ್ಚು ಮಾಡಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ನವದೆಹಲಿಯಲ್ಲಿ ನಡೆಯುತ್ತಿರುವ ರಾಜ್ಯಸಭೆಯ ಚಳಿಗಾಲ ಅಧಿವೇಶನದಲ್ಲಿ ಕರ್ನಾಟಕದಲ್ಲಿ ಅಮೃತ್ 2.0 ಯೋಜನೆ ಅನುಷ್ಠಾನದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕರ್ನಾಟಕ ರಾಜ್ಯಕ್ಕೆ 244 ಯೋಜನೆಗಳು ಮಂಜೂರಾಗಿದ್ದು, 38 ಯೋಜನೆಗಳ ಕಾರ್ಯ ಪ್ರಗತಿಯಲ್ಲಿದೆ ಮತ್ತು ಆರಂಭಿಕ ಅನುಷ್ಠಾನ ಹಂತದಲ್ಲಿವೆ, ರಾಜ್ಯದಲ್ಲಿ ಅಮೃತ್ ಯೋಜನೆಯಡಿ ಇದುವರೆಗೆ 9.18 ಲಕ್ಷ ಹೊಸ ನಲ್ಲಿ ಸಂಪರ್ಕಗಳನ್ನು ಒದಗಿಸಲಾಗಿದೆ. ಇನ್ನೂ 9.41 ಲಕ್ಷ ಹೊಸ ನಲ್ಲಿ ಸಂಪರ್ಕಗಳನ್ನು ಒದಗಿಸಲು ಕ್ರಿಯಾ ಯೋಜನೆ ಸಲ್ಲಿಸಲಾಗಿದೆ.
ಅಮೃತ್ 2.0 ತಂತ್ರಜ್ಞಾನ ಉಪ-ಮಿಷನ್ ಅಡಿಯಲ್ಲಿ, ಸರ್ಕಾರವು ತಜ್ಞರ ಸಮಿತಿಯ ಮೂಲಕ ಸ್ಟಾರ್ಟ್-ಅಫ್ ಯೋಜನೆಗಳನ್ನು ಆಯ್ಕೆ ಮಾಡಿದೆ, 36 ನಗರಗಳೊಂದಿಗೆ 74 ಸ್ಟಾರ್ಟ್-ಅಫ್‌ಗಳನ್ನು ಮ್ಯಾಪ್ ಮಾಡಿದೆ. ಆಯ್ದ ಕೆಲವು ಸ್ಟಾರ್ಟ್-ಅಪ್‌ಗಳು ನಗರಗಳಲ್ಲಿ ಜಲಚರ ನಿರ್ವಹಣೆಗೆ ಕೆಲಸ ಮಾಡುತ್ತವೆ ಎಂದು ಸಚಿವರು ಉತ್ತರಿಸಿದ್ದಾರೆಂದು ಈರಣ್ಣ ಕಡಾಡಿ ಮಾಹಿತಿ ನೀಡಿದರು.