ಬೆಳಗಾವಿ :
ಸವದತ್ತಿ ತಾಲೂಕು ಯಲ್ಲಮ್ಮ ಗುಡ್ಡದ ರಸ್ತೆಯ ಶಾಂತಿನಗರ ಬಳಿ ನಿರ್ಜನ ಗುಡ್ಡಗಾಡು ಪ್ರದೇಶದಲ್ಲಿ ಬೈಕ್ ಅಡ್ಡಗಟ್ಟಿ ಚಿನ್ನಾಭರಣ ದೋಚಿ ಪರಾರಿ ಆಗಿದ್ದ ಖತರ್ನಾಕ್ ದರೋಡೆಕೋರರ ತಂಡವನ್ನು ಸವದತ್ತಿ ಪೊಲೀಸರು ಕೊನೆಗೂ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ ಮಾಹಿತಿ ನೀಡಿದರು.

ಬೈಕ್ ದರೋಡೆ ಮಾಡಿದ ಪ್ರಕರಣದಡಿ ಸವದತ್ತಿ ಪೊಲೀಸರು ಕಾರ್ಯಪ್ರವೃತ್ತರಾದರು. ಕೊನೆಗೂ ಪೊಲೀಸರ ಕಾರ್ಯಾಚರಣೆಗೆ ಫಲ ಸಿಕ್ಕಿದೆ. ನಾಲ್ವರು ಇದರಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಬಂಧಿತರಿಂದ ಚಿನ್ನದ ಕೈಕಡಗ, ಚೈನ್, ಮೊಬೈಲ್, ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸವದತ್ತಿಯ ಶಾಂತಿ ನಗರದ ಮಹಮ್ಮದ್ ಇಮಾಮಸಾಬ್ ಕಲ್ಲೇದ, ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಮುತ್ತಣ್ಣ ಯಲ್ಲಪ್ಪ ಗುತ್ತೇದಾರ, ಕೊಪ್ಪಳ ಜಿಲ್ಲೆಯ ತೊಗ್ಗಲಡೋಣಿಯ ಲಾಲಸಾಬ್‌ ದಾವಲಸಾಬ್‌ ರಾಂಪೂರ, ಸವದತ್ತಿ ಶಾಂತಿ ನಗರದ ಇಬ್ರಾಹಿಂ ಅಕ್ಬರ್ ಕುಡಚಿ ಹಾಗೂ ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತರು.

2023 ರ ಆಗಸ್ಟ್ 24 ರಂದು ಸವದತ್ತಿ ಪೊಲೀಸ್ ಠಾಣೆಯಲ್ಲಿ ಸವದತ್ತಿ ತಾಲೂಕಿನ ಯಲಮ್ಮನ ಗುಡ್ಡದ ರಸ್ತೆಯ ಶಾಂತಿ ನಗರದ ಹತ್ತಿರ ದರೋಡೆ ಪ್ರಕರಣ ದಾಖಲಾಗಿತ್ತು. ಸವದತ್ತಿಯ ಅಶೋಕ ಬಸಪ್ಪ ಬಾಗೇವಾಡಿ ಎಂಬವರ ಬೈಕ್ ತಡೆದು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಬೈಕ್ ಸವಾರ ಅಶೋಕ ಬಾಗೇವಾಡಿ ದೂರು ನೀಡಿದ್ದರು. ಹಿಂದಿನ ಸಿಪಿಐ ಕರುಣೇಶಗೌಡ, ಈಗಿನ ಸಿಪಿಐ ಧರ್ಮಾಕರ್ ಧರ್ಮಟ್ಟಿ ನೇತೃತ್ವದಲ್ಲಿ ಪೊಲೀಸರು ದೂರು ದಾಖಲಿಸಿ ತನಿಖೆಗೆ ಇಳಿದಿದ್ದರು. ಇದೀಗ ಈ ದರೋಡೆ ಪ್ರಕರಣಕ್ಕೆ ಸಂಬಂಧಿಸಿದವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.