ಬೆಳಗಾವಿ :
ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸಹಕಾರಿ ಸಂಘದ ಠೇವಣಿದಾರರಿಗೆ ಹಣ ಮರುಪಾವತಿ ಪ್ರಕ್ರಿಯೆ ಕೊನೆಗೂ ಆರಂಭವಾಗುವ ಸಾಧ್ಯತೆ ಇದೆ.

ಆದರೆ ಹಣ ಪಡೆಯುವ ಪ್ರಕ್ರಿಯೆ ಹಂತವಾಗಿ ದಾಖಲೆ ಸಲ್ಲಿಕೆಗೆ ಇದೀಗ ಬೆಂಗಳೂರಿಗೆ ಪ್ರಯಾಣಿಸಬೇಕಿದೆ. ಇದರಿಂದ ಠೇವಣಿದಾರರು ತೊಂದರೆಗೆ ಸಿಲುಕಿದ್ದಾರೆ. ಬೆಳಗಾವಿಯಲ್ಲೇ ಈ ಪ್ರಕ್ರಿಯೆಗೆ ವ್ಯವಸ್ಥೆ ಮಾಡುವಂತೆ ಠೇವಣಿದಾರರು ಇದೀಗ ಒತ್ತಾಯಿಸುತ್ತಿದ್ದಾರೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಹಿರಿಯ ನಾಗರಿಕರು, ಮಹಿಳೆಯರು, ವಿಕಲಚೇತನರಿಗೆ ಆದ್ಯತೆ ನೀಡಲಾಗುತ್ತದೆ ಎಂಬ ಭರವಸೆ ಇತ್ತು. ಆದರೆ, ಸದ್ಯದ ಬೆಳವಣಿಗೆ ಗಮನಿಸಿದರೆ ಇವರು ಬೆಂಗಳೂರಿಗೆ ಪ್ರಯಾಣ ಬೆಳೆಸುವುದು ಅನಿವಾರ್ಯವಾಗಿದೆ. ಒಂದೇ ಸಮಯದಲ್ಲಿ ನೂರಾರು ಠೇವಣಿದಾರರು ಜಮಾಯಿಸುವುದರಿಂದ ಗೊಂದಲದ ಸ್ಥಿತಿ ಉಂಟಾಗಬಹುದು.

ಠೇವಣಿದಾರರಿಗೆ ಬೆಳಗಾವಿಯಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಿದರೆ ಸ್ಥಳೀಯವಾಗಿ ಅನುಕೂಲವಾಗುತ್ತದೆ. ಅವರು ಹಣ ಪಡೆಯುವ ಕಾರ್ಯ ಸುಗಮವಾಗುವ ನಿಟ್ಟಿನಲ್ಲಿ ಬೆಳಗಾವಿಯಲ್ಲೇ ವ್ಯವಸ್ಥೆ ಮಾಡಬೇಕು. ಸಾಕಷ್ಟು ಆರ್ಥಿಕ ಹೊರೆ ತಗುತ್ತದೆ ಎನ್ನುವುದು ಠೇವಣಿದಾರರ ಅಭಿಪ್ರಾಯವಾಗಿದೆ.