ಬೆಳಗಾವಿ :
ಚಿಕ್ಕೋಡಿ ತಾಲೂಕಿನ ಹಳ್ಳಿಗಳಲ್ಲಿ ಮಾಂಸಕ್ಕಾಗಿ ನವಿಲುಗಳಿಗೆ ವಿಷ ಹಾಕಿ ಕೊಲ್ಲುತ್ತಿದ್ದ ಗ್ಯಾಂಗನ್ನು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚಿದ್ದು ಒಬ್ಬನನ್ನು ಬಂಧಿಸಿದ್ದು ಇನ್ನಿಬ್ಬರಿಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಝಳಕಿ ನಿವಾಸಿ ಮಂಜುನಾಥ ಪವಾರ ಬಂಧಿತನಾಗಿದ್ದಾನೆ.

ಇನ್ನಿಬ್ಬರು ಪರಾರಿಯಾಗಿದ್ದು ಅವರ ಬಂಧನಕ್ಕೆ ಎರಡು ತಂಡಗಳನ್ನು ಮಾಡಿ ಹುಡುಕಾಟ ನಡೆಸಿದ್ದಾರೆ.
ಇವರ ತಂಡ ರಾಷ್ಟ್ರ ಪಕ್ಷಿಗಳನ್ನು ಕೊಂದು ಮಾರಾಟ ಮಾಡುತ್ತಿತ್ತು.
ರೈತರ ಜಮೀನಿಗೆ ಕಾಳು ತಿನ್ನಲು ಬರುತ್ತಿದ್ದ ನವಿಲುಗಳು ಮೃತಪಟ್ಟಿದ್ದನ್ನು ಕಂಡು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಬೆಚ್ಚಿ ಬಿದ್ದಿತ್ತು.

ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ರೈತರು ತಮ್ಮ ಜಮೀನಿನಲ್ಲಿ ನವಿಲುಗಳು ಸತ್ತಿರುವುದನ್ನು ಕಂಡು ಶಾಕ್ ಆಗಿದ್ದರು. ಅರಣ್ಯ ಇಲಾಖೆ ಮತ್ತು ಸ್ಥಳೀಯ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮೃತ ನವಿಲುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪರಿಶೀಲನೆ ಮಾಡಿ ಅಲ್ಲಿ ಬಿದ್ದಿದ್ದ ಕಾಳುಗಳನ್ನ ಜಪ್ತಿ ಮಾಡಿದರು. ತಕ್ಷಣ ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಮೃತ ನವಿಲುಗಳನ್ನು ಬೆಳಗಾವಿ ಪಶು ಚಿಕಿತ್ಸಾಲಯಕ್ಕೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಸ್ಥಳದಲ್ಲಿ ಸಿಕ್ಕ ಸಾಕ್ಷಿಗಳ ಆಧಾರದ ಮೇಲೆ ಮತ್ತು ರೈತರು ನೀಡಿದ ಮಾಹಿತಿ ಮೇರೆಗೆ ಆರೋಪಿಗಳ ಪತ್ತೆಗೆ ಎರಡು ತಂಡ ಮಾಡಿಕೊಂಡು ಶೋಧ ಕಾರ್ಯಕ್ಕೆ ಮುಂದಾದರು.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಜುನಾಥ ಮಾಂಜರಿ ಗ್ರಾಮದ ಹೊರ ವಲಯದಲ್ಲಿ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ. ಮಾಂಸಕ್ಕಾಗಿ ಇವರೆಲ್ಲಾ ಮೆಕ್ಕೆಜೋಳದ ಕಾಳುಗಳಲ್ಲಿ ವಿಷ ಹಾಕಿ ನವಿಲುಗಳನ್ನು ಕೊಲ್ಲುತ್ತಿದ್ದರು. ಕೊಂದ ಬಳಿಕ ನವಿಲುಗಳನ್ನು ತೆಗೆದುಕೊಂಡು ಹೋಗಿ ಅದರ ಮಾಂಸ ತೆಗೆದು ಮಾರುತ್ತಿದ್ದರು. ಸದ್ಯ ಮಂಜುನಾಥನನ್ನು ಬಂಧಿಸಿ ವಿಚಾರಣೆ ನಡೆಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.

ರಾಯಬಾಗ ಎಸಿಎಫ್ ಸುನೀತಾ ನಿಂಬರಗಿ ಮಾತನಾಡಿ, ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಮೂರು ಹೆಣ್ಣು, ಐದು ಗಂಡು ನವಿಲು ಮೃತದೇಹ ಪತ್ತೆಯಾಗಿದ್ದವು. ಮೃತ ನವಿಲು ತಂದು ಮರಣೋತ್ತರ ಪರೀಕ್ಷೆ ಮಾಡಿಸಿದ್ದೇವೆ. ಝಳಕಿ ಗ್ರಾಮದ ನಿವಾಸಿ ಮಂಜುನಾಥ ಪವಾರ ಎಂಬಾತನನ್ನು ಬಂಧಿಸಿದ್ದೇವೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು ಅವರಿಗಾಗಿ ಶೋಧಕಾರ್ಯ ನಡೆಸಿದ್ದೇವೆ. ನವಿಲು ಮಾಂಸಕ್ಕಾಗಿ ವಿಷ ಹಾಕಿ ಕೊಂದಿದ್ದಾರೆ. ಮೆಕ್ಕೆಜೋಳದ ಕಾಳುಗಳಲ್ಲಿ ವಿಷ ಹಾಕಿ ಕೊಂದಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ತನಿಖೆ ಬಳಿಕ ಇನ್ನಷ್ಟು ಮಾಹಿತಿ ತಿಳಿಯಲಿದೆ ಎಂದರು.