ಖಾನಾಪುರ ಠಾಣೆಯ ಪೊಲೀಸ್ ಪೇದೆ ಪ್ರದೀಪ ಮಿಟಗಾರ ಎಂಬುವರು ಬೈಕ್ ಅಪಘಾತಕ್ಕೆ ಈಡಾಗಿ ತಡರಾತ್ರಿ ಕೊನೆಯುಸಿರೆಳೆದಿದ್ದರು. ಖಾನಾಪುರ ರಸ್ತೆಯ ದೇವಲತ್ತಿ ಕ್ರಾಸ್ ಎಂಬಲ್ಲಿ ತಡರಾತ್ರಿ ಆವರು ಹೊರಟಿದ್ದ ಬೈಕ್ ಅಪಘಾತವಾದ ಬಗ್ಗೆ ಬೆಳಿಗ್ಗೆ ಜನರಿಗೆ ತಿಳಿದಿದೆ. ಅಪಘಾತದ ದೃಶ್ಯ ಅನುಮಾನ ಮೂಡುವಂತಿದೆ. ಅಪಘಾತವೋ ಇಲ್ಲವೇ ಅಸಹಜ ಸಾವೋ ಎಂಬ ಸಂಶಯ ಹುಟ್ಟುವಂತೆ ಮಾಡಿದೆ.ಖಾನಾಪುರ ಠಾಣೆಯಲ್ಲಿ ಪೇದೆಯಾಗಿದ್ದ ಪ್ರದೀಪ ಹಲವು ಜನರೊಂದಿಗೆ ನಿಷ್ಠುರತೆ ಹೊಂದಿದ್ದರು ಎನ್ನಲಾಗುತ್ತಿದೆ.

ಬೆಳಗಾವಿ : ಮರಳು ಕಳ್ಳ ಸಾಗಾಣಿಕೆ ಮಾಡುತ್ತಿದ್ದವರಿಗೆ ಸಿಂಹಸ್ವಪ್ನರಾಗಿದ್ದ ಪೊಲೀಸ್ ನಿಗೂಢವಾಗಿ ಮೃತಪಟ್ಟಿರುವುದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಪ್ರದೀಪ್ ಮಿಟಗಾರ್ ಎಂಬ ಪೊಲೀಸ್ ಇದೀಗ ಮೃತಪಟ್ಟಿರುವುದು ಸಂದೇಹಗಳಿಗೆ ಕಾರಣವಾಗಿದೆ.

ಪ್ರದೀಪ್ ಅವರು ಸೋಮವಾರ ರಾತ್ರಿ ಬೆಳಗಾವಿಯ ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ವಾಪಾಸ್ ಖಾನಾಪುರಕ್ಕೆ ತೆರಳುವಾಗ ಅವರ ಬೈಕ್ ಅಪಘಾತವಾದಂತೆ ಕಂಡು ಬಂದಿದ್ದು ಇದು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಬೈಕ್ ಒಂದು ಕಡೆ, ಪ್ರದೀಪ ಅವರು ಇನ್ನೊಂದು ಕಡೆ ಬಿದ್ದಿರುವುದು ಸಾಕಷ್ಟು ಅನುಮಾನ ಹುಟ್ಟಿಸಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಖಾನಾಪುರ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಇವರು ಉನ್ನತ ಅಧಿಕಾರಿಯಾಗಿ ಸಾಧನೆ ಮಾಡಬೇಕು ಎಂಬ ಛಲಹೊಂದಿದ್ದರು. ಖಾನಾಪುರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಯಾರಾದರೂ ಮರಳು ಕಳ್ಳ ಸಾಗಾಣಿಕೆ ಮಾಡುತ್ತಿದ್ದರೆ ಅವರನ್ನು ನಿರ್ದಾಕ್ಷ್ಯಿಣವಾಗಿ ಶಿಕ್ಷಿಸುತ್ತಿದ್ದರು. ಪ್ರಭಾವಿ ರಾಜಕಾರಣಿಗಳಿಗೂ ಅವರು ಹೆದರುತ್ತಿರಲಿಲ್ಲ. ಹೀಗಾಗಿ ಅವರ ನಿಗೂಢ ಸಾವು ಈಗ ನಾನಾ ಅನುಮಾನಗಳಿಗೆ ಕಾರಣವಾಗಿದೆ.

ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಎಸ್ಪಿ ಡಾ. ಭೀಮಾಶಂಕರ ಗುಳೇದ ಖಾನಾಪುರ ಠಾಣೆಯ ಪೇದೆ ಸಾವಿನ ರಹಸ್ಯ ಬೇಧಿಸಬೇಕಿದೆ. ಪ್ರಕರಣ ಖಾನಾಪುರ ಠಾಣೆಯಲ್ಲಿ ದಾಖಲಾಗಿದೆ. ಒಟ್ಟಾರೆ ಪ್ರದೀಪ್ ಸಾವು ಇದೀಗ ಇಡೀ ಖಾನಾಪುರ ಸೇರಿದಂತೆ ಬೆಳಗಾವಿಯಲ್ಲಿ ಅನುಮಾನ ಮೂಡಿಸಿದೆ.