ಕಠ್ಮಂಡು: ನೇಪಾಳದಲ್ಲಿ ಆಗಸ್ಟ್ 26ರಂದು ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದ ವೇಳೆ ತ್ರಿಶೂಲಿ-3ಎ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಕಾರ್ಮಿಕರನ್ನು ಅಲ್ಲೇ ಬಿಟ್ಟು ಚೀನಿ ಮೇಲ್ವಿಚಾರಕನೊಬ್ಬ ತಾನೊಬ್ಬನೇ ಅಲ್ಲಿಂದ ಹೊರಗೆ ತೆರಳಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸುರಂಗ ಸಂಖ್ಯೆ 3ರಿಂದ ಪ್ರಾಣಾಪಾಯದಿಂದ ಪಾರಾದ ಕಾರ್ಮಿಕ ರಾಜ್ ಛೇತ್ರಿ ಅವರು ದುರಂತದ ಭೀಕರ ಕ್ಷಣಗಳನ್ನು ವಿವರಿಸಿದ್ದು, ಘಟನೆ ವೇಳೆ ಸುರಂಗದೊಳಗೆ ಸುಮಾರು 265 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಛೇತ್ರಿ ಅವರ ಹೇಳಿಕೆಯ ಪ್ರಕಾರ, ಪ್ರವಾಹ ಅಪ್ಪಳಿಸುವ ಕೆಲವೇ ಕ್ಷಣಗಳ ಮೊದಲು ಸುರಂಗದೊಳಗೆ ಏಕಾಏಕಿ ಭಾರೀ ಸದ್ದೊಂದು ಕೇಳಿಸಿತು. ಬಿರುಗಾಳಿ ಅಪ್ಪಳಿಸಿದಂತಿದ್ದ ಆ ಸದ್ದು ಕಾರ್ಮಿಕರಲ್ಲಿ ಆತಂಕ ಮೂಡಿಸಿತ್ತು. ಪರಿಸ್ಥಿತಿಯಲ್ಲಿ ಏನೋ ಅಪಾಯವಿದೆ ಎಂದು ಅರಿತ ತಾನು, ತಕ್ಷಣವೇ ಚೀನಿ ಮೇಲ್ವಿಚಾರಕನಿಗೆ ಮಾಹಿತಿ ನೀಡಿ ಸುರಂಗದಿಂದ ಹೊರಗೆ ತೆರಳಲು ಅನುಮತಿ ಕೇಳಿದ್ದೆ ಎಂದು ಹೇಳಿದ್ದಾರೆ.
ಆದರೆ, ಮೇಲ್ವಿಚಾರಕ ಕಾರ್ಮಿಕರಿಗೆ ಕೆಲಸ ಮುಂದುವರಿಸುವಂತೆ ಸೂಚಿಸಿ, ‘ನಾನು ಹೊರಗೆ ಹೋಗಿ ಏನಾಗುತ್ತಿದೆ ಎಂದು ಪರಿಶೀಲಿಸಿ ಬರುತ್ತೇನೆ’ ಎಂದು ಹೇಳಿ ಸುರಂಗದಿಂದ ಹೊರಗೆ ತೆರಳಿದಾತ ಬಳಿಕ ಆತ ಸುರಂಗಕ್ಕೆ ವಾಪಸ್ ಬರಲೇ ಇಲ್ಲ ಎಂದು ಛೇತ್ರಿ ಆರೋಪಿಸಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಸುರಂಗಕ್ಕೆ ನುಗ್ಗಿದ ನೀರು, ಅವಶೇಷ
ಮೇಲ್ವಿಚಾರಕ ಹೊರಗೆ ತೆರಳಿದ ಕೆಲವೇ ಕ್ಷಣಗಳಲ್ಲಿ ಸುರಂಗದ ಮೇಲ್ಭಾಗದಿಂದ ಭಾರೀ ಪ್ರಮಾಣದ ನೀರು, ಮಣ್ಣು ಹಾಗೂ ಕಲ್ಲುಗಳು ರಭಸದಿಂದ ನುಗ್ಗಿ ಬಂದವು. ಅಪಾಯದ ತೀವ್ರತೆಯನ್ನು ಅರಿತ ಕಾರ್ಮಿಕರು ಪ್ರಾಣ ಉಳಿಸಿಕೊಳ್ಳಲು ಸುರಂಗದ ಪ್ರವೇಶದ್ವಾರದತ್ತ ದೌಡಾಯಿಸಿದರು. ಛೇತ್ರಿ ಸೇರಿದಂತೆ ನಾಲ್ವರು ಕಾರ್ಮಿಕರು ಸುರಂಗದಿಂದ ಹೊರಬರಲು ಯಶಸ್ವಿಯಾದರು. ಆದರೆ, ಅವದ ಜೊತೆ ಪ್ರವೇಶದ್ವಾರದತ್ತ ಓಡಿಬಂದಿದ್ದ ಇಬ್ಬರು ಕಾರ್ಮಿಕರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಪಾಯದ ಮೊದಲ ಸೂಚನೆ ಸಿಕ್ಕ ಕೂಡಲೇ ಕಾರ್ಮಿಕರನ್ನು ಸುರಂಗದಿಂದ ಹೊರಗೆ ಕಳುಹಿಸಿದ್ದರೆ ಅನೇಕ ಜೀವಗಳನ್ನು ಉಳಿಸಬಹುದಾಗಿತ್ತು ಎಂಬುದು ಛೇತ್ರಿ ಅವರ ಪ್ರತಿಪಾದನೆಯಾಗಿದೆ.
ಸುರಂಗದೊಳಗೆ ಮೃತದೇಹಗಳು; ನೆರವಿಗಾಗಿ ಕೇಳಿಬಂದ ಕೂಗಾಟ
ಪ್ರವಾಹದ ಬಳಿಕ ಸುರಂಗದೊಳಗೆ ಹಲವು ಮೃತದೇಹಗಳು ಬಿದ್ದಿದ್ದವು ಎಂದು ಛೇತ್ರಿ ಹೇಳಿದ್ದಾರೆ. ಅದೇ ವೇಳೆ, ಸುರಂಗದ ಒಳಭಾಗದಿಂದ ಕೆಲವರ ಕೂಗಾಟವೂ ಕೇಳಿಸುತ್ತಿತ್ತು. ಹೀಗಾಗಿ ಇನ್ನೂ ಕೆಲವರು ಜೀವಂತವಾಗಿರುವ ಸಾಧ್ಯತೆಯೂ ಇತ್ತು ಎಂದು ಅವರು ತಿಳಿಸಿದ್ದಾರೆ.
ಆದರೆ, ಆ ಸಂದರ್ಭದಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಮುಂದಾಗುವುದೋ ಅಥವಾ ಸ್ವಂತ ಜೀವ ಉಳಿಸಿಕೊಳ್ಳುವುದೋ ಎಂಬ ಭೀಕರ ಸಂದಿಗ್ಧ ಪರಿಸ್ಥಿತಿ ಎದುರಾಗಿತ್ತು ಎಂದು ಛೇತ್ರಿ ವಿವರಿಸಿದ್ದಾರೆ.
ಕಾಡಿನಲ್ಲಿ ಮರದ ಕೆಳಗೆ ರಾತ್ರಿ ಕಳೆದರು…
ಪ್ರವಾಹದಿಂದ ಪಾರಾದ ಬಳಿಕ ಛೇತ್ರಿ ಸೇರಿದಂತೆ ಬದುಕುಳಿದ ಕಾರ್ಮಿಕರು ಸಮೀಪದ ಬೆಟ್ಟ ಪ್ರದೇಶದತ್ತ ತೆರಳಿ ಕಾಡಿನಲ್ಲಿ ಆಶ್ರಯ ಪಡೆದರು. ದುರಂತದ ಪರಿಣಾಮ ಮೊಬೈಲ್ ಸಂಪರ್ಕವೂ ಕಡಿತಗೊಂಡಿದ್ದರಿಂದ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಲಿಲ್ಲ.
ಮೊಬೈಲ್ ಫೋನ್ಗಳೂ ಸೇರಿದಂತೆ ಯಾವುದೇ ಸಂಪರ್ಕ ಸಾಧನಗಳು ತಮ್ಮ ಬಳಿ ಇರಲಿಲ್ಲ. ಹೀಗಾಗಿ ಬದುಕುಳಿದ ಕಾರ್ಮಿಕರು ಮೊದಲ ರಾತ್ರಿ ಕಾಡಿನಲ್ಲಿ ಮರದ ಕೆಳಗೆ ಆಶ್ರಯ ಪಡೆದು ಕಳೆಯಬೇಕಾಯಿತು ಎಂದು ಛೇತ್ರಿ ಹೇಳಿದ್ದಾರೆ.
ಮುನ್ನೆಚ್ಚರಿಕೆ ನೀಡಿದ್ದರೆ ಜೀವಹಾನಿ ತಪ್ಪಿಸಬಹುದಿತ್ತೇ?
ದುರಂತಕ್ಕೂ ಮುನ್ನ ಪ್ರವಾಹ ಹಾಗೂ ಭೂಕುಸಿತದ ಅಪಾಯದ ಕುರಿತು ಚೀನಾ ಅಧಿಕಾರಿಗಳಿಗೆ ಮಾಹಿತಿ ಇದ್ದರೂ, ಅದನ್ನು ನೇಪಾಳದ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರಿಗೆ ಸಮಯಕ್ಕೆ ಸರಿಯಾಗಿ ತಿಳಿಸಲಾಗಲಿಲ್ಲ ಎಂಬ ಗಂಭೀರ ಆರೋಪವನ್ನೂ ಛೇತ್ರಿ ಮಾಡಿದ್ದಾರೆ.
ಅಪಾಯದ ಬಗ್ಗೆ ಮುಂಚಿತ ಎಚ್ಚರಿಕೆ ನೀಡಿದ್ದರೆ ಸುರಂಗದಲ್ಲಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದರ ಜತೆಗೆ, ಅಪಾಯದ ಪ್ರದೇಶಗಳಲ್ಲಿದ್ದ ಜನರನ್ನೂ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲು ಸಾಧ್ಯವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಆದರೆ, ಚೀನಾ ಅಧಿಕಾರಿಗಳಿಗೆ ಮುಂಚಿತವಾಗಿ ಅಪಾಯದ ಮಾಹಿತಿ ಇತ್ತು ಮತ್ತು ಎಚ್ಚರಿಕೆ ನೀಡಿಲ್ಲ ಎಂಬ ಈ ಆರೋಪಗಳಿಗೆ ಸ್ವತಂತ್ರವಾಗಿ ಯಾವುದೇ ದೃಢೀಕರಣ ಈವರೆಗೆ ಲಭ್ಯವಾಗಿಲ್ಲ.
ಸಾವಿನ ಸಂಖ್ಯೆ ಸಾವಿರ ದಾಟಿದ್ದು, 4 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆ
ಆಗಸ್ಟ್ 26ರಂದು ನೇಪಾಳದ ಹಲವು ಭಾಗಗಳನ್ನು ಅಪ್ಪಳಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತ ವ್ಯಾಪಕ ನಾಶವನ್ನುಂಟುಮಾಡಿದೆ. ದುರಂತದಲ್ಲಿ ಸಾವಿನ ಸಂಖ್ಯೆ 1,000 ದಾಟಿದ್ದು, ಸುಮಾರು 4,000 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಪ್ರವಾಹ ಮತ್ತು ಭೂಕುಸಿತದಿಂದ ಎಲ್ಲೆಡೆ ಅಪಾರ ಪ್ರಮಾಣದ ಅವಶೇಷಗಳು ಹರಡಿಕೊಂಡಿದ್ದು, ಅವುಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆಗಳು ಮುಂದುವರಿದಿವೆ.
ಈ ನಡುವೆ, ತ್ರಿಶೂಲಿ-3ಎ ಯೋಜನೆಯ ಸುರಂಗದಲ್ಲಿ ದುರಂತ ಸಂಭವಿಸುವ ಮುನ್ನವೇ ಅಪಾಯದ ಸೂಚನೆಗಳು ಕಾಣಿಸಿಕೊಂಡಿದ್ದವು ಎಂಬ ಕಾರ್ಮಿಕರ ಆರೋಪ ಇದೀಗ ಘಟನೆಯ ನಿರ್ವಹಣೆ ಹಾಗೂ ಮುನ್ನೆಚ್ಚರಿಕೆ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದೆ.
Udaya Prabha > State News > ನೀವು ಕೆಲಸ ಮುಂದುವರಿಸಿ, ನಾನು ನೋಡ್ತೇನೆ’: ನೇಪಾಳ ಪ್ರವಾಹದ ವೇಳೆ 265 ಕಾರ್ಮಿಕರನ್ನು ಸುರಂಗದಲ್ಲೇ ಬಿಟ್ಟುಹೋದ ಚೀನಿ ಮೇಲ್ವಿಚಾರಕ !
ನೀವು ಕೆಲಸ ಮುಂದುವರಿಸಿ, ನಾನು ನೋಡ್ತೇನೆ’: ನೇಪಾಳ ಪ್ರವಾಹದ ವೇಳೆ 265 ಕಾರ್ಮಿಕರನ್ನು ಸುರಂಗದಲ್ಲೇ ಬಿಟ್ಟುಹೋದ ಚೀನಿ ಮೇಲ್ವಿಚಾರಕ !
Team Udayaprabha03/09/2026
posted on


,


















