ಬೆಳಗಾವಿ : ಹೆಚ್ಚಿನ ಬಡ್ಡಿದರದ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚನೆ ಎಸಗಿದ ಆರೋಪದಡಿ ಶ್ರೀದೇವಿ ಕೂಗೆ ವೆಂಚರ್ ಪ್ರೈವೇಟ್ ಸಂಸ್ಥೆಯ ಮುಖ್ಯ ಆರೋಪಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಧಾರವಾಡದ ಕೇಶವನಗರ ನಿವಾಸಿ ಪ್ರವೀಣ್ ಚಂದ್ರಶೇಖರ ದೊಡ್ಡಮನಿ ಅವರು ನೀಡಿದ ದೂರಿನ ಮೇರೆಗೆ, ಜೂನ್ 16, 2026ರಂದು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನ ಪ್ರಕಾರ, ಸುಭೋದ್ ಹೊನ್ನಪ್ಪ ಕೂಗೆ ಹಾಗೂ ಪ್ರಮೋದ್ ಫಕೀರಪ್ಪ ಹಳೆಮನಿ ಅವರು ಆರ್ಬಿಐ, ಸೆಬಿ ಹಾಗೂ ಸಂಬಂಧಿತ ಪ್ರಾಧಿಕಾರಗಳಿಂದ ಅಗತ್ಯ ಅನುಮತಿ ಪಡೆಯದೇ, ಹೆಚ್ಚಿನ ಬಡ್ಡಿದರದ ಆಮಿಷವೊಡ್ಡಿ ಸಾರ್ವಜನಿಕರಿಂದ ಠೇವಣಿ ರೂಪದಲ್ಲಿ ಹಣ ಸಂಗ್ರಹಿಸಿ, ಬಳಿಕ ಹಣವನ್ನು ಹಿಂದಿರುಗಿಸದೆ ವಂಚಿಸಿದ್ದಾರೆ.
ಈ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 138/2026 ಅಡಿಯಲ್ಲಿ ಬಡ್ಸ್ ಕಾಯ್ದೆ-2019ರ ಕಲಂ 21(1), 21(2), 21(3), ಕೆಪಿಐಡಿ ಕಾಯ್ದೆ-2004ರ ಕಲಂ 9 ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)-2023ರ ಕಲಂ 318(4) ಮತ್ತು 3(5)ರಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು ಪ್ರಕರಣದ ಎರಡನೇ ಆರೋಪಿ ಪ್ರಮೋದ್ ಫಕೀರಪ್ಪ ಹಳೆಮನಿ (49), ಸರ್ಕಾರಿ ನೌಕರ, ಸತ್ತಿ (ಅಥಣಿ ತಾಲೂಕು) ನಿವಾಸಿಯಾಗಿದ್ದು, ಅವರನ್ನು ಜೂನ್ 18ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ತನಿಖೆಯಲ್ಲಿ, ಆರೋಪಿಗಳು ಬೆಳಗಾವಿಯ ಶಿವಬಸವ ನಗರದಲ್ಲಿರುವ “ಶ್ರೀದೇವಿ ಕೂಗೆ ವೆಂಚರ್ ಪ್ರೈವೇಟ್” ಸಂಸ್ಥೆಯ ಹೆಸರಿನಲ್ಲಿ 2025ರಿಂದ 254 ಸಾರ್ವಜನಿಕರಿಂದ ಒಟ್ಟು ₹25.79 ಕೋಟಿ ಹೂಡಿಕೆ ರೂಪದಲ್ಲಿ ಸಂಗ್ರಹಿಸಿ, ಹಣವನ್ನು ಹಿಂದಿರುಗಿಸದೆ ವಂಚಿಸಿರುವುದು ಬೆಳಕಿಗೆ ಬಂದಿದೆ.
ಪ್ರಕರಣದ ಪ್ರಮುಖ ಆರೋಪಿ ಸುಭೋದ್ ಹೊನ್ನಪ್ಪ ಕೂಗೆ (21), ಜಲಾಲಪುರ (ರಾಯಭಾಗ ತಾಲೂಕು) ಮೂಲದವರಾಗಿದ್ದು, ಪ್ರಸ್ತುತ ಬೆಳಗಾವಿಯ ಮಹಾಂತೇಶ ನಗರದಲ್ಲಿ ವಾಸವಾಗಿದ್ದಾರೆ. ಅವರನ್ನು ಜುಲೈ 13, 2026ರಂದು ಬಂಧಿಸಿ ಬೆಂಗಳೂರಿನ XCII ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ (CCH-93)ಕ್ಕೆ ಹಾಜರುಪಡಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ಮುಂದುವರಿಸಲಾಗಿದೆ.
ಪೊಲೀಸರ ಮನವಿ:
“ಶ್ರೀದೇವಿ ಕೂಗೆ ವೆಂಚರ್ ಪ್ರೈವೇಟ್” ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿರುವ ಸಾರ್ವಜನಿಕರು ತಮ್ಮ ಹೂಡಿಕೆಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಣೆಗೆ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.


,
,

















