ದಾವಣಗೆರೆ:
ನ್ಯಾಮತಿ ತಾಲೂಕಿನ ಸವಳಂಗದಲ್ಲಿ ಜೋಕಾಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಕುತ್ತಿಗೆಗೆ ಹಗ್ಗ ಬಿಗಿದ ಪರಿಣಾಮ ನಾಲ್ಕನೇ ತರಗತಿ ಓದುತ್ತಿದ್ದ ಬಾಲಕ ಮೃತಪಟ್ಟಿದ್ದಾನೆ.

ಪಿ.ಜೆ.ಕೊಟ್ರೇಶಿ ಮೃತಪಟ್ಟ ಬಾಲಕ. ಸವಳಂಗದ ಎನ್ .ಜಿ. ಪ್ರವೀಣ್ ಅವರ ಪುತ್ರ. ಈತ ಶಿವಮೊಗ್ಗ ಖಾಸಗಿ ಶಾಲೆಯಲ್ಲಿ 4 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಆಡಲು ನಡುಮನೆಯಲ್ಲಿ ಜೋಕಾಲಿಯೊಂದನ್ನು ಪೋಷಕರು ಸಿದ್ಧಪಡಿಸಿಕೊಟ್ಟಿದ್ದರು. ಶಾಲೆಯಿಂದ ಮನೆಗೆ ಬಂದವ ಜೋಕಾಲಿಯಲ್ಲಿ ಆಡುತ್ತಿದ್ದ.
ಆಗ ಆಕಸ್ಮಿಕವಾಗಿ ಉರುಳಿದ್ದು, ಕುಣಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.